ಇತ್ತೀಚಿನ ಸುದ್ದಿ
ದಾವಣಗೆರೆ: ಜ.10ರಂದು ಕಲಾಕುಂಚ ಸಂಸ್ಥೆ ವತಿಯಿಂದ ಉರ್ದು ಶಾಲೆಯಲ್ಲಿ ಕನ್ನಡ ನಿತ್ಯೋತ್ಸವ
02/01/2023, 23:25

ದಾವಣಗೆರೆ(reporterkarnataka.com): ನಗರದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ದಾವಣಗೆರೆಯ ಎಸ್.ಎಸ್.ಎಂ. ನಗರದ ಸರ್ಕಾರಿ ಉರ್ದು ಪ್ರೌಢಶಾಲೆಯ ಆವರಣದಲ್ಲಿ ಜನವರಿ 10ರಂದು ಬೆಳಗ್ಗೆ 11
ಗಂಟೆಗೆ ಕನ್ನಡ ನಿತ್ಯೋತ್ಸವ ಹಾಗೂ 2022-23ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಎದುರಿಸುವ ಮಕ್ಕಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ಉಚಿತ ಕಾರ್ಯಾಗಾರ ನಡೆಯಲಿದೆ ಎಂದು
ಕಲಾಕುಂಚ ಕೆ.ಎಚ್.ಮಂಜುನಾಥ್ ತಿಳಿಸಿದ್ದಾರೆ.
ಸಮಾರಂಭದ ಉದ್ಘಾಟನೆಯನ್ನು ದಾವಣಗೆರೆ ಸಮಾನ ಮನಸ್ಕರ ಸೇವಾ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಸತ್ತಾರ್ ಸಾಹೇಬ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಸರ್ಕಾರಿ ಉರ್ದು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಉಮಾದೇವಿ ಕೆ. ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ ಆಗಮಿಸಲಿದ್ದಾರೆ. ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಅವರು ಕನ್ನಡ ನಾಡು-ನುಡಿ, ಇತಿಹಾಸ, ಪರಂಪರೆ ಹಾಗೂ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಎದುರಿಸುವ ಮಕ್ಕಳಲ್ಲಿ ಆತ್ಮ ವಿಶ್ವಾಸ ತುಂಬುವ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಕಲಾಕುಂಚದ ಪ್ರಧಾನ ಕಾರ್ಯದರ್ಶಿ ಮಹದೇವ ಅಸಗೋಡು ತಿಳಿಸಿದ್ದಾರೆ.
ಕನ್ನಡ ನಾಡು, ನುಡಿ ಕಾರ್ಯಕ್ರಮ ನವಂಬರ್ಗೆ ಅಷ್ಟೇ ಸೀಮಿತವಾಗದೆ ಕನ್ನಡ ನಿತ್ಯೋತ್ಸವದ ಈ ಅಪರೂಪದ ಕಾರ್ಯಕ್ರಮಕ್ಕೆ
ಎಲ್ಲಾ ಕನ್ನಡ ಮನಸ್ಸುಗಳು ಭಾಗವಹಿಸಿ ಸಮಾರಂಭ ಯಶಸ್ವಿಗೊಳಿಸಲು ಕಲಾಕುಂಚ ಸರ್ವ ಸದಸ್ಯರು, ಪದಾಧಿಕಾರಿಗಳು ವಿನಂತಿಸಿದ್ದಾರೆ.