ಇತ್ತೀಚಿನ ಸುದ್ದಿ
ಸಿಆರ್ ಝಡ್ ನಿಯಮ ಸಡಿಲಿಕೆ ಪ್ರವಾಸೋದ್ಯಮಕ್ಕೆ ಪೂರಕ: ಉಡುಪಿ ಟೂರಿಸಂ ಕನೆಕ್ಟ್ – 2022 ಕಾರ್ಯಾಗಾರಕ್ಕೆ ಚಾಲನೆ
09/11/2022, 14:29

ಉಡುಪಿ(reporterkarnataka.com): ಕರಾವಳಿ ಪ್ರವಾಸೋದ್ಯಮ ಸಂಘಟನೆ, ಉಡುಪಿ ಜಿಲ್ಲಾಡಳಿತ, ಉಡುಪಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಸಹಯೋಗದಲ್ಲಿ ಆಯೋಜಿಸಿರುವ “ಉಡುಪಿ ಟೂರಿಸಂ ಕನೆಕ್ಟ್ – 2022” ಕಾರ್ಯಾಗಾರಕ್ಕೆ ಶಾಸಕ ರಘುಪತಿ ಭಟ್ ಇಂದು ಉಡುಪಿಯ ಹೋಟೆಲ್ ಕಿದಿಯೂರಿನ ಶೇಷಶಯನ ಸಭಾಂಗಣದಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸಕರು, ಉಡುಪಿ ಜಿಲ್ಲೆಯಲ್ಲಿಯೂ ಅತ್ಯಂತ ಸುಂದರ ಬೀಚ್ ಗಳಿವೆ. ಗೋವಾಕ್ಕಿಂತಲೂ ಸ್ವಚ್ಛ ಹಾಗೂ ಸುಂದರವಾದ ಬೀಚ್ ಗಳು ನಮ್ಮಲ್ಲಿವೆ. ಆದರೆ ಅವುಗಳು ಸೂಕ್ತ ಮೂಲಭೂತ ಸೌಕರ್ಯಗಳ ಕೊರತೆಯಿಂದ ಹೆಚ್ಚೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ವಿಫಲವಾಗುತ್ತಿವೆ. ಕೇಂದ್ರ ಸರ್ಕಾರ ಸಿಆರ್ ಝಡ್ ನಿಯಮದಲ್ಲಿ ಸಡಿಲಿಕೆ ಮಾಡಿರುವುದರಿಂದ ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.
ಕೇಂದ್ರ ಪ್ರವಾಸೋದ್ಯಮ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಮೊಹಮ್ಮದ್ ಫಾರೂಕ್, ರಾಜ್ಯ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಅನಿತಾ ಬಿ, ಕೆನರಾ ಬ್ಯಾಂಕ್ ಮಣಿಪಾಲ ಶಾಖೆಯ ಜನರಲ್ ಮ್ಯಾನೇಜರ್ ರಾಮ ನಾಯ್ಕ್, ಕರಾವಳಿ ಪ್ರವಾಸೋದ್ಯಮ ಸಂಘಟನೆಯ ಅಧ್ಯಕ್ಷ ಮನೋಹರ್ ಶೆಟ್ಟಿ, ಉಪಾಧ್ಯಕ್ಷ ನಾಗರಾಜ ಹೆಬ್ಬಾರ್, ಕಾರ್ಯದರ್ಶಿ ಗೌರವ್ ಶಣವ, ಕೋಶಾಧಿಕಾರಿ ಚಂದ್ರಕಾಂತ್ ಡಿ ಉಪಸ್ಥಿತರಿದ್ದರು.