ಇತ್ತೀಚಿನ ಸುದ್ದಿ
ಹೆಸರು ಬೆಳೆಗಾರರಿಗೆ ಬಂತು ಬೆಳೆವಿಮೆ; ಕೇಂದ್ರ ಸಚಿವ ಜೋಶಿ ಸ್ಪಂದನೆಗೆ ರೈತರ ಹೆಮ್ಮೆ
01/07/2025, 20:15

* ಧಾರವಾಡ ಜಿಲ್ಲೆಗೆ ₹30 ಕೋಟಿ ಫಸಲ್ ಬಿಮಾ ವಿಮೆ ಹಣ ಬಿಡುಗಡೆ
* ಕುಂದಗೋಳ, ಶಿರಗುಪ್ಪಿ ರೈತರಿಂದ ಸಚಿವ ಪ್ರಲ್ಹಾದ ಜೋಶಿಗೆ ಸನ್ಮಾನ
* ಬೆಳೆ ವಿಮೆಗಾಗಿ ಯಾರಿಗೂ ನಯಾ ಪೈಸೆ ಕೊಡಬೇಡಿ
ಹುಬ್ಬಳ್ಳಿ(reporterkarnataka.com): ಬೆಳೆಯೂ ಇಲ್ಲದೆ, ಬೆಳೆ ವಿಮೆ ಪರಿಹಾರವೂ ಕೈಗೆ ಸಿಗದೆ ಪರಿತಪಿಸುತ್ತಿದ್ದ ಜಿಲ್ಲೆಯ ರೈತರ ನೆರವಿಗೆ ಮುಂದಾದ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅಂತೂ ಬೆಳೆ ವಿಮೆ ಕೊಡಿಸುವಲ್ಲಿ ಸಫಲರಾಗಿದ್ದಾರೆ.
ಜಿಲ್ಲೆಯ ರೈತರು ವಿವಿಧ ಬೆಳೆಗಳಿಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮಾ ಕಂತು ಪಾವತಿಸಿದ್ದು, ತಾಂತ್ರಿಕ ಕಾರಣದಿಂದ ಬೆಳೆ ವಿಮಾ ಪರಿಹಾರ ರೈತರ ಕೈ ಸೇರದ ಬಗ್ಗೆ ತಿಳಿದ ಸಚಿವರು ಕೇಂದ್ರ ಕೃಷಿ ಸಚಿವ ಶಿವರಾಜಸಿಂಗ್ ಚವ್ಹಾಣ್ ಮತ್ತು ಹಣಕಾಸು ಸಚಿವಾಲಯದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ₹30 ಕೋಟಿ ಬೆಳೆ ವಿಮೆ ಪರಿಹಾರ ಬಿಡುಗಡೆ ಮಾಡಿಸಿದ್ದಾರೆ.
2024-25ರ ಮುಂಗಾರು ಹಂಗಾಮಿನ ಹೆಸರು, ಶೇಂಗಾ, ಹತ್ತಿ, ಈರುಳ್ಳಿ ಮತ್ತು ಸೋಯಾಬಿನ್ ಬೆಳೆ ಕೈಗೆ ಸಿಗದೆ ರೈತರು ಚಿಂತಿತರಾಗಿದ್ದರು. ಈ ಹಂತದಲ್ಲಿ ಮೊದಲ ಹಂತದ ಬೆಳೆ ವಿಮೆ ಹಣ ಜಿಲ್ಲೆಯಲ್ಲಿ ಕೆಲವೇ ಕೆಲವು ರೈತರಿಗೆ ಲಭಿಸಿದ್ದು, ಕುಂದಗೋಳ ಮತ್ತು ಶಿರಗುಪ್ಪಿ ಹೋಬಳಿ ಭಾಗದ ಹೆಸರು ಬೆಳೆಗಾರರು ವಂಚಿತರಾಗಿದ್ದಾರೆ ಎಂದು ರೈತ ಮುಖಂಡರು ಸಚಿವರ ಗಮನ ಸೆಳೆದಿದ್ದರು.
ಕುಂದಗೋಳ ಮತ್ತು ಶಿರಗುಪ್ಪಿ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗಿದ್ದರಿದ ಹೆಸರು ಬೆಳೆಗಾರರು ಬೆಳೆಹಾನಿಯಿಂದ ತತ್ತರಿಸಿದ್ದರು. ವಾಸ್ತವ ಸ್ಥಿತಿ ಮನಗಂಡ ಸಚಿವರು ತಕ್ಷಣವೇ ರೈತ ಪರ ಕಾಳಜಿ ತೋರಿ ಕೇಂದ್ರ ಸರ್ಕಾರದ ಗಮನ ಸೆಳೆದರಲ್ಲದೆ, ಕೃಷಿ ಸಚಿವರು, ವಿಮಾ ಅಧಿಕಾರಿಗಳು, ಹಣಕಾಸು ಸಚಿವಾಲಯದ ಅಧಿಕಾರಿಗಳು ಹಾಗೂ ವಿಮಾ ಕಂಪನಿಯವರ ಜತೆ ಚರ್ಚೆ ನಡೆಸಿ ಅಂತೂ ಬೆಳೆ ವಿಮೆ ಕೈ ಸೇರುವಂತೆ ಮಾಡಿದ್ದಾರೆ.
*ಸಚಿವರಿಗೆ ರೈತರಿಂದ ಸನ್ಮಾನ:*
ಮರೀಚಿಕೆಯಾಗಿದ್ದ ಬೆಳೆ ವಿಮೆ ಬಿಡುಗಡೆಗೊಳಿಸುವಲ್ಲಿ ಶ್ರಮಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಹುಬ್ಬಳ್ಳಿಯಲ್ಲಿ ಇಂದು ಬೆಳಗ್ಗೆ ಕುಂದಗೋಳ ಮತ್ತು ಶಿರಗುಪ್ಪಿ ಭಾಗದ ರೈತರು ಸನ್ಮಾನಿಸಿ ಅಭಿನಂದಿಸಿದರು. ಅಲ್ಲದೆ, ಕೆಲ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಸಹ ಸಲ್ಲಿಸಿದರು.
ಈ ವೇಳೆ ಪ್ರತಿಕ್ರಿಯಿಸಿದ ಸಚಿವರು, ʼರೈತರು ನಾಡಿನ ಜೀವನಾಡಿ ಆಗಿದ್ದಾರೆ. ರೈತರ ಕಷ್ಟಕ್ಕೆ ಸ್ಪಂದಿಸಿ, ತೊಂದರೆಯಾಗದಂತೆ ನೋಡಿಕೊಳ್ಳುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನಮ್ಮ ಸರ್ಕಾರದ ಬದ್ಧತೆಯಾಗಿದೆʼ ಎಂದು ಭರವಸೆ ನೀಡಿದರು.
*ಯಾರಿಗೂ ನಯಾಪೈಸೆ ಕೊಡಬೇಡಿ:*
ರೈತರು ಬೆಳೆ ವಿಮೆ ಪರಿಹಾರಕ್ಕಾಗಿ ಯಾರಿಗೂ ನಯಾಪೈಸೆ ಕೊಡಬೇಡಿ. ಸರ್ಕಾರ ಮತ್ತು ಅಧಿಕಾರಿಗಳ ಮಟ್ಟದಲ್ಲಿ ಪಾರದರ್ಶಕವಾಗಿ ಬಿಡುಗಡೆ ಆಗುತ್ತದೆ. ಏಜೆಂಟರು ರೈತರಿಂದ ಹಣ ಕೀಳುತ್ತಿದ್ದಾರೆ ಎಂಬ ದೂರು ಕೇಳಿಬರುತ್ತಿದ್ದು, ಫಸಲ್ ಬಿಮಾದಲ್ಲಿ ಮಧ್ಯಸ್ಥಗಾರರಿಗೆ ಅವಕಾಶವೇ ಇಲ್ಲ. ಸರ್ಕಾರದ ಅಧಿಕಾರಿಗಳು ಮತ್ತು ವಿಮಾ ಅಧಿಕಾರಿಗಳು ಪ್ರಾಮಾಣಿಕ ಕ್ರಮ ಕೈಗೊಳ್ಳುತ್ತಾರೆ. ರೈತರು ಹಣ ಕೊಡಬಾರದು ಎಂದು ಹೇಳಿದರು
ಈ ಸಂದರ್ಭದಲ್ಲಿ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ್, ಶಾಸಕ ಮಹೇಶ ತೆಂಗಿನಕಾಯಿ, ಎಂ.ಆರ್.ಪಾಟೀಲ್, ಎಸ್.ವಿ.ಸಂಕನೂರು ಮತ್ತಿತರ ಮುಖಂಡರಿದ್ದರು.