ಇತ್ತೀಚಿನ ಸುದ್ದಿ
ಡಿಸಿಎಂ ಜೊತೆ ಸಂವಾದ | ಬಿಎಎಫ್ ಸಂತಸ; ಬೆಳಗಾವಿ ಅಧಿವೇಶನದಲ್ಲೇ ವಿಧೇಯಕ ಮಂಡಿಸಿ: ಅಧ್ಯಕ್ಷ ಸತೀಶ್ ಮಲ್ಯ
13/12/2025, 19:41
ಬೆಂಗಳೂರು(reporterkarnataka.com): ಇಂದು ವಿಧಾನಸೌಧದ ಬ್ವಾಂಕ್ವೇಟ್ ಹಾಲ್ನಲ್ಲಿ ವಿಶೇಷ ಸಂವಾದ ಏರ್ಪಡಿಸಿ, ಅಪಾರ್ಟ್ಮೆಂಟ್ ಮಾಲೀಕರ ಸಲಹೆಗಳನ್ನು ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಆಲಿಸಿದ್ದು ಬಹಳ ಸಂತಸ ತಂದಿದೆ. ಆದರೆ, ಈ ಸಲಹೆಗಳನ್ನು ಶೀಘ್ರವಾಗಿ ವಿಧೇಯಕದಲ್ಲಿ ಅಳವಡಿಸಿ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಬೇಕು ಎನ್ನುವುದು ನಮ್ಮ ಮನವಿಯಾಗಿದೆ ಎಂದು ಬೆಂಗಳೂರು ಅಪಾರ್ಟ್ಮೆಂಟ್ ಫೇಡರೇಷನ್ ಅಧ್ಯಕ್ಷ ಸತೀಶ್ ಮಲ್ಯ ತಿಳಿಸಿದ್ದಾರೆ.
ಸಂವಾದ ಕಾರ್ಯಕ್ರಮದ ನಂತರ ಮಾತನಾಡಿದ ಅವರು, ಇದೊಂದು ಐತಿಹಾಸಿಕ ಕಾರ್ಯಕ್ರಮ. 1972 ರಲ್ಲಿ ಜಾರಿಗೆ ಬಂದಿರುವಂತಹ ಕರ್ನಾಟಕ ಅಪಾರ್ಟ್ಮೆಂಟ್ ಮಾಲೀಕತ್ವ ಕಾಯ್ದೆ ಬಹಳಷ್ಟು ಗೊಂದಲದಿಂದ ಕೂಡಿದೆ. ಇದನ್ನು ಸರಿಪಡಿಸಲು ಈಗಾಗಲೇ ಪ್ರಸ್ತಾಪಿಸಲಾಗಿರುವಂತಹ ಹೊಸ ಸಮಗ್ರ ಕರ್ನಾಟಕ ಅಪಾರ್ಟ್ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ (KAOMA) ಯಲ್ಲಿ ಉತ್ತಮ ಅಂಶಗಳನ್ನು ಅಳವಡಿಸಲಾಗಿದೆ. ಈ ಕಾಯ್ದೆ ಅನುಷ್ಠಾನ ಇಂದಿನ ತುರ್ತು ಅಗತ್ಯವಾಗಿದೆ. ಇಂದು ನಡೆದ ಸಂವಾದ ಕಾರ್ಯಕ್ರಮದಲ್ಲಿ ನಾವು ನೀಡಿರುವ ಸಲಹೆಗಳನ್ನು ಅಳವಡಿಸಿ, ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲೀ ಮಂಡಿಸಬೇಕು. ಸರಿಯಾದ ಕಾಯ್ದೆಯ ಬೆಂಬಲವಿಲ್ಲದೆ ಅಪಾರ್ಟ್ಮೆಂಟ್ ಮಾಲೀಕರು ಸಂಕಷ್ಟದಲ್ಲಿದ್ದಾರೆ. ಸಂವಾದ ಕಾರ್ಯಕ್ರಮ ನಮಗೆ ಸಂತಸ ತಂದಿದೆ. ಆದರೆ, ಈ ವಿಧೇಯಕವನ್ನು ಈ ಬಾರಿಯ ಅಧಿವೇಶನದಲ್ಲೇ ಮಂಡಿಸಿ ಜಾರಿಗೊಳಿಸುವುದು ಬಹಳ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಉಪಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎನ್ನುವುದು ನಮ್ಮ ಮನವಿಯಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
ಸಂವಾದ ಕಾರ್ಯಕ್ರಮದಲ್ಲಿ BAF ಪ್ರಧಾನ ಕಾರ್ಯದರ್ಶಿ ಕೆ. ಅರುಣ್ ಕುಮಾರ್, BAF ಖಜಾಂಚಿ ಕಿರಣ್ ಹೆಬ್ಬಾರ್ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಅಪಾರ್ಟ್ಮೆಂಟ್ ಮಾಲೀಕರು, ಫೆಡರೇಷನ್ ಪ್ರತಿನಿಧಿಗಳು ಭಾಗವಹಿಸಿ ಸಲಹೆ ನೀಡಿದರು.












