ಇತ್ತೀಚಿನ ಸುದ್ದಿ
ನಿಷ್ಕ್ರಿಯ ಪತ್ರಿಕೆಗಾಗಿ ರಾಜ್ಯದ ಖಜಾನೆ ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ
08/01/2026, 22:33
ಬೆಂಗಳೂರು(reporterkarnataka.com): ರಾಜ್ಯ ಕಾಂಗ್ರೆಸ್ ಸರ್ಕಾರ ಗಾಂಧಿ ಕುಟುಂಬದ ಅಣತಿಯಂತೆ ನಿಷ್ಕ್ರಿಯವಾಗಿರುವ ಪತ್ರಿಕೆಗಾಗಿ ರಾಜ್ಯದ ಖಜಾನೆಯನ್ನೇ ಲೂಟಿ ಮಾಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.
ರಾಜ್ಯದಲ್ಲಿ ಅಸ್ಥಿತ್ವದಲ್ಲಿರದ ಹಾಗೂ ದೇಶದಲ್ಲಿರುವ ರಾಷ್ಟ್ರೀಯ ಪತ್ರಿಕೆಗಳನ್ನು ಹೊರಗಿಟ್ಟ ಕರ್ನಾಟಕದ ಕಾಂಗ್ರೆಸ್ ಸರ್ಕಾರ ನ್ಯಾಷನಲ್ ಹೆರಾಲ್ಡ್ಗೆ ಜಾಹೀರಾತು ಹಣವನ್ನು ಏಕೆ ನೀಡಿದೆ? ಎಂದು ಪ್ರಶ್ನಿಸಿದ್ದಾರೆ.
ರಾಷ್ಟ್ರೀಯ ದಿನಪತ್ರಿಕೆಗಳು ಮತ್ತು ಶೇ.69ರಷ್ಟು ಓದುಗರನ್ನು ಹೊಂದಿರುವ ಪತ್ರಿಕೆಗಳನ್ನು ಬಿಟ್ಟು ರಾಜ್ಯದಲ್ಲಿ ನಿಷ್ಕ್ರಿಯವಾಗಿರುವ ದಿನಪತ್ರಿಕೆಗೆ ಹಣ ನೀಡಿದ್ದು, ವಿಶ್ವಾಸಾರ್ಹ ದಿನಪತ್ರಿಕೆಗಳಿಗೆ ಏನೂ ಸಿಗದಂತೆ ಲೂಟಿ ಮಾಡಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿ ಹಾಯ್ದರು.
ರಾಜ್ಯ ಕಾಂಗ್ರೆಸ್ ಸರ್ಕಾರ ‘ನಕಲಿ’ ಗಾಂಧಿ ಕುಟುಂಬವನ್ನು ಮತ್ತಷ್ಟು ಓಲೈಸಲು ಮಾಡಿದ ಪಿತೂರಿಯೇ? ಇದು ಎಂದಿರುವ ಜೋಶಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಜಾಮೀನಿನ ಮೇಲೆ ಬಿಡುಗಡೆಯಾದಾಗ, ಕಾಂಗ್ರೆಸ್ ಸರ್ಕಾರ 2024–25ರಲ್ಲಿ ₹1 ಕೋಟಿ ಬದಲಿಗೆ ₹ 3 ಕೋಟಿ ಹಣ ನೀಡಿತು ಎಂದಿದ್ದಾರೆ.
ರಾಜ್ಯದ ಅಭಿವೃದ್ಧಿಗೆ ಹಣವಿಲ್ಲ. ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹಣವಿಲ್ಲ. ಆದರೆ, ನಿಷ್ಕ್ರಿಯವಾದ ಒಂದು ಪತ್ರಿಕೆ ಕಾಂಗ್ರೆಸ್ ಆಡಳಿತದಲ್ಲಿ ಸಾಕಷ್ಟು ಹಣ ಪಡೆಯುತ್ತದೆ. ಇದು ದುರಾಡಳಿತದ ಪರಮಾವಧಿ ಮತ್ತು ಅಧಿಕಾರ ದುರುಪಯೋಗ, ಹಗಲು ದರೋಡೆಯೇ ಸರಿ ಎಂದು ಜೋಶಿ ವಾಗ್ದಾಳಿ ನಡೆಸಿದ್ದಾರೆ.













