ಇತ್ತೀಚಿನ ಸುದ್ದಿ
CITU | ಬೀದಿಬದಿ ವ್ಯಾಪಾರಿಗಳ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ಅನಿವಾರ್ಯ: ಬಿ.ಕೆ. ಇಮ್ತಿಯಾಜ್
12/04/2025, 11:50
ಮಂಗಳೂರು(reporterkarnataka.com): ಬೀದಿಬದಿ ವ್ಯಾಪಾರಿಗಳ ಹಕ್ಕು ರಕ್ಷಣೆಗಾಗಿ ದೇಶದಲ್ಲಿ ಕಾನೂನುಗಳಿದ್ದರೂ ಅವರ ಮೇಲಿನ ಪ್ರಭುತ್ವದ ದೌರ್ಜನ್ಯ ದಬ್ಬಾಳಿಕೆಗಳು ಮಿತಿ ಮೀರುತ್ತಿದೆ. ಬೀದಿ ವ್ಯಾಪಾರಿಗಳು ತಮ್ಮ ಹಕ್ಕುಗಳ ರಕ್ಷಣೆಗಾಗಿ ಹಾಗೂ ಸಾಮಾಜಿಕ ಭದ್ರತೆ ಗಾಗಿ ಸಂಘಟಿತ ಹೋರಾಟಕ್ಕಿಳಿಯುವುದು ಅನಿವಾರ್ಯ ಎಂದು ಸಿಐಟಿಯು ಸಂಯೋಜಿತ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿಕೆ ಇಮ್ತಿಯಾಜ್ ಹೇಳಿದರು.
ಅವರು ಇಂದು ಕೋಟೆಕಾರ್ ಬೀರಿ ಜಂಕ್ಷನ್ ಬಳಿ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು ) ತಲಪಾಡಿ ವಲಯ ಸಮಿತಿ ನೇತೃತ್ವದಲ್ಲಿ ಬೀದಿಬದಿ ವ್ಯಾಪಾರಸ್ಥರ ಸಮಾವೇಶ ಮತ್ತು ಸದಸ್ಯರ ಗುರುತಿನ ಚೀಟಿ ವಿತರಣಾ ಸಮಾರಂಭವನ್ನು ಉದ್ಘಾಟಿಸುತ್ತಾ,ಈ ಮಾತುಗಳನ್ನು ಹೇಳಿದರು.

ಉಳ್ಳಾಲ ತಾಲೂಕು ವ್ಯಾಪ್ತಿಯ ನಗರಸಭೆ, ಪುರಸಭೆ,ಪಟ್ಟಣ ಪಂಚಾಯತ್ ಗಳು ಬೀದಿ ವ್ಯಾಪಾರಿಗಳ ಸಮಗ್ರ ಸಮೀಕ್ಷೆ ನಡೆಸಿ ಅವರಿಗೆ ಐಡಿ ಕಾರ್ಡ್, ಮತ್ತು ಪ್ರಮಾಣ ಪತ್ರ ನೀಡಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಹೆದ್ದಾರಿ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆಗಳು ಮಾನವೀಯತೆಯಿಂದ ಬೀದಿ ವ್ಯಾಪಾರಿಗಳ ಜೊತೆ ವ್ಯವಹರಿಸಬೇಕೆಂದು ಆಗ್ರಹಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡಿ, ಬೀದಿಬದಿ ವ್ಯಾಪಾರಸ್ಥರ ಬಗ್ಗೆ ಉದ್ದುದ್ದ ಮಾತನಾಡುವ ಕೇಂದ್ರ ಹಾಗೂ ರಾಜ್ಯ ಸರಕಾರ ಗಳು ಬೀದಿಬದಿ ವ್ಯಾಪಾರಸ್ಥರ ಮೇಲೆ ವಿನಾಃ ಕಾರಣ ಧಾಳಿಗಳನ್ನು ನಡೆಸಲು ಕುಮ್ಮಕ್ಕು ನೀಡುತ್ತಿದೆ. ಬೀದಿಬದಿ ವ್ಯಾಪಾರಸ್ಥರ ಬದುಕಿನ ರಕ್ಷಣೆಗಾಗಿ ದೇಶದಲ್ಲಿ ಕಾನೂನು ಇದ್ದರೂ ಅದನ್ನು ಜಾರಿಗೊಳಿಸಲು ಉಭಯ ಸರಕಾರಗಳು ಮುತುವರ್ಜಿ ನೀಡುತ್ತಿಲ್ಲ ಎಂದು ದೂರಿದರು
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಬೀದಿಬದಿ ವ್ಯಾಪಾರಸ್ಥರ ಸಂಘದ ತಲಪಾಡಿ ವಲಯದ ಕಾರ್ಯಾದ್ಯಕ್ಷರಾದ ಯಶು ಕುಮಾರ್ ಪಕ್ಕಳರವರು ಬೀದಿಬದಿ ವ್ಯಾಪಾರಸ್ಥರ ಬದುಕಿನ ಬವಣೆಗಳ ಬಗ್ಗೆ ಬೆಳಕನ್ನು ಚೆಲ್ಲುತ್ತಾ,ಸಂಘಟನೆ ಹಾಗೂ ಹೋರಾಟಗಳಿಂದ ಮಾತ್ರವೇ ಭವಿಷ್ಯದ ಬದುಕು ರೂಪುಗೊಳ್ಳುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ಸಂಘದ ಜಿಲ್ಲಾಧ್ಯಕ್ಷರಾದ ಮುಝಾಫರ್ ಅಹಮದ್, ಸಂಘದ ತಲಪಾಡಿ ವಲಯ ಕಾರ್ಯದರ್ಶಿ ವಿನಾಯಕ ಶೆಣೈ, ಇತರ ಮುಖಂಡರಾದ ಕಲಂದರ್ ಸಲೀಂ, ವಿಜಯ, ಸದಾಶಿವ ಮುಂತಾದವರು ಉಪಸ್ಥಿತರಿದ್ದರು. ಸಮಾವೇಶದಲ್ಲಿ ಭಾಗವಹಿಸಿದ್ದ ಸಂಘದ ಸದಸ್ಯರಿಗೆ ಗುರುತುಚೀಟಿಯನ್ನು ಕೂಡ ಇದೇ ಸಂದರ್ಭದಲ್ಲಿ ವಿತರಿಸಲಾಯಿತು.














