ಇತ್ತೀಚಿನ ಸುದ್ದಿ
ಚಿಕ್ಕಮಗಳೂರು: ಹೇಮಾವತಿ ನದಿಗೆ ದುಷ್ಕರ್ಮಿಗಳಿಂದ ವಿಷ; ಸಾವಿರಾರು ಮೀನಿನ ಮಾರಣ ಹೋಮ!
27/03/2025, 14:53

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದ ಬಳಿ ಹೇಮಾವತಿ ನದಿಗೆ ಕಿಡಿಗೇಡಿಗಳು ವಿಷ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯ ಪರಿಣಾಮವಾಗಿ ಸಾವಿರಾರು ಮೀನುಗಳು ಸಾವನ್ನಪ್ಪಿದ್ದು, ನದಿಯ ದಡದಲ್ಲಿ ಹಾಗೂ ನೀರಿನ ಮೇಲ್ಮೈಯಲ್ಲಿ ತೇಲುತ್ತಿರುವ ಹೃದಯ ವಿದ್ರಾಹಕ
ದೃಶ್ಯ ಕಂಡುಬಂದಿದೆ.
*ಘಟನೆ ವಿವರ;*
ಮುಂಗಾರು ಪೂರ್ವದಲ್ಲಿ ನದಿಯಲ್ಲಿ ಹಚ್ಚಿಹಾಕಿದ ವಿಷದ ಪರಿಣಾಮ ನೂರಾರು ಮೀನುಗಳು ಮೃತಪಟ್ಟಿವೆ.
2 ಕಿ.ಮೀ. ಪ್ರದೇಶದೊಳಗೇ ಸಾವಿರಾರು ಮೀನುಗಳು ತೇಲುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ.
ಕಿಡಿಗೇಡಿಗಳು ಮೈಲುತುತ್ತು (ನೈಸರ್ಗಿಕ ಅಥವಾ ರಾಸಾಯನಿಕ ವಿಷ) ಬಳಸಿ ಮೀನುಗಳ ಮಾರಣಹೋಮ ನಡೆಸಿದಂತೆ ಅನುಮಾನ ವ್ಯಕ್ತವಾಗಿದೆ. ವಾಣಿಜ್ಯ ಉದ್ದೇಶಕ್ಕಾಗಿ ಮೀನುಗಳನ್ನು ಕಡಿಮೆ ಖರ್ಚಿನಲ್ಲಿ ಮಾರಾಟ ಮಾಡಲು ಈ ರೀತಿಯ ಕೃತ್ಯ ಎಸಗಿರುವ ಸಾಧ್ಯತೆ ಇದೆ.
*ಪರಿಸರ ಮತ್ತು ಮಾನವ ಆರೋಗ್ಯದ ಮೇಲೆ ಪರಿಣಾಮ:*
ಈ ನೀರು ಹಾಸನದ ಗೊರೂರು ಡ್ಯಾಂ ಸೇರುವ ಹೇಮಾವತಿ ನದಿಗೆ ಸೇರುತ್ತದೆ.
ಮಾರ್ಗಮಧ್ಯೆ ಹತ್ತಾರು ಹಳ್ಳಿಗಳ ಜನ ಕುಡಿಯುವ ನೀರಾಗಿ ಈ ನದಿಯನ್ನು ಅವಲಂಬಿಸಿದ್ದಾರೆ.
ವಿಷಯುಕ್ತ ನೀರು ಮಾನವ ಆರೋಗ್ಯಕ್ಕೂ ಅಪಾಯ ಸೃಷ್ಟಿಸಬಹುದಾದ ಕಾರಣ ಸ್ಥಳೀಯರು ಆತಂಕದಲ್ಲಿದ್ದಾರೆ.
*ಸ್ಥಳೀಯರ ಆಗ್ರಹ ಮತ್ತು ಪೊಲೀಸರು ಭದ್ರತೆ:*
ಸ್ಥಳೀಯರು ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಹೇಮಾವತಿ ನದಿಯಲ್ಲಿ ಈ ರೀತಿಯ ವಿಷಪ್ರಯೋಗದ ಕೃತ್ಯಗಳು ಪುನರಾವರ್ತೆನೆಯಾಗದಂತೆ ಕಾನೂನು ಕ್ರಮ ವಹಿಸುವಂತೆ ಜನತೆ ಸರ್ಕಾರ ಮತ್ತು ಅರಣ್ಯ ಇಲಾಖೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮನವಿ ಮಾಡಿಕೊಂಡಿದ್ದಾರೆ.