ಇತ್ತೀಚಿನ ಸುದ್ದಿ
Chikkamagaluru | ಮರ ಬಿದ್ದು ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ: ಸಚಿವ ಕೆ.ಜೆ.ಜಾರ್ಜ್ ಹಸ್ತಾಂತರ
22/06/2025, 00:04

- *ಮೃತ ಅನಿಲ್ ಪಾಯ್ಸ್ ಮಕ್ಕಳ ವಿದ್ಯಾಭ್ಯಾಸಕ್ಕೆ ಸೂಕ್ತ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ*
- *ರಸ್ತೆ ಬದಿಯ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ*
ಚಿಕ್ಕಮಗಳೂರು(reporterkarnataka.com): ಕಳೆದ ವಾರ ಸುರಿದ ಭಾರೀ ಮಳೆ ಮತ್ತು ಗಾಳಿಗೆ ಮರದ ಕೊಂಬೆ ಬಿದ್ದು ಮೃತಪಟ್ಟ ಚಿಕ್ಕಮಗಳೂರು ತಾಲೂಕು ಖಾಂಡ್ಯ ಹೋಬಳಿ ಬಿಳುಕೊಪ್ಪದ ಅನಿಲ್ ಪಾಯ್ಸ್ ಅವರ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿಯೂ ಆಗಿರುವ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು 5 ಲಕ್ಷ ರೂ. ಪರಿಹಾರದ ಚೆಕ್ ಅನ್ನು ವಿತರಿಸಿದರು.
ಮಳೆ ಅನಾಹುತ ಸಂಭವಿಸಿದ ಖಾಂಡ್ಯ ಹೋಬಳ ಬಿಳುಕೊಪ್ಪ ಗ್ರಾಮಕ್ಕೆ ಭೇಟಿ ನೀಡಿ ಮೃತರ ಕುಟುಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಸಚಿವರು ಬಳಿಕ ಪರಿಹಾರದ ಚೆಕ್ ಅನ್ನು ವಿತರಿಸಿದರು. ಬಳಿಕಮಾತನಾಡಿ ಹಣದಿಂದ ಕಾರಣಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮಾನವೀಯತೆಯಿದ ಪರಿಹಾರ ವಿತರಿಸಲಾಗುತ್ತಿದ್ದು, ಮೃತರ ಕುಟುಂಕ್ಕೆ ಆತ್ಮಸ್ಥೈರ್ಯ ತುಂಬುವ ಕೆಲವಾಗಬೇಕಿದೆ ಎಂದರು.
ಪ್ರಸ್ತುತ ಜಿಲ್ಲಾಧಿಕಾರಿಗಳ ಕಡೆಯಿಂದ ಐದು ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಮೃತ ಅನಿಲ್ ಪಾಯ್ಸ್ ಅವರ ಮನೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಈ ಹಿಂದೆ ಮನೆ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿಯಂದ ಹಣ ನೀಡಲಾಗಿತ್ತು. ಇದೀಗ ಮನೆಯನ್ನು ಶಾಸಕ ರಾಜೇಗೌಡರು ಸ್ವಂತ ಹಣದಿಂದ ಮಾಡಿಕೊಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಅನಿಲ್ ಪಾಯ್ಸ್ ಅವರಿಗೆ ಇಬ್ಬರು ಮಕ್ಕಳಿದ್ದು, ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಇಬ್ಬರಿಗೂ ಮುಂದಿನ ವಿದ್ಯಾಭ್ಯಾಸಕ್ಕೆ ಸೂಕ್ತ ಅನುಕೂಲ ಕಲ್ಪಿಸಲು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗುವುದು ಎಂದರು.
ಅಲ್ಲದೆ, ಕೊಪ್ಪ ತಾಲ್ಲೂಕಿನ ಮೇಗೂರು ಹೊಸತೋಟ ಬಳಿಯಲ್ಲಿ ಇತ್ತೀಚೆಗೆ ಆಟೋ ಮೇಲೆ ಮರ ಬಿದ್ದು ಚಾಲಕ ರತ್ನಾಕರ್ ಎಂಬುವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅವರ ಕುಟುಂಬಕ್ಕೂ 5 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಲಾಗುವುದು ಎಂದರು.
*ಅಪಾಯಕಾರಿ ಮರಗಳ ತೆರವಿಗೆ ಸೂಚನೆ*:
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್, ಮಲೆನಾಡು ಭಾಗದಲ್ಲಿ ಅಧಿಕ ಗಾಳಿ, ಮಳೆ ಸಂದರ್ಭದಲ್ಲಿ ಅಪಾಯಕಾರಿ ಮರಗಳು ಬಿದ್ದು ಪ್ರಾಣ ಹಾನಿಯಾಗುತ್ತಿವೆ. ಹಾಗಾಗಿ ರಸ್ತೆ ಬದಿ ಅಪಾಯಕಾರಿ ಮರಗಳು ಇದ್ದಲ್ಲಿ ಅವುಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದರು.
ಶಾಸಕ ಟಿ.ಡಿ.ರಾಜೇಗೌಡ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಬಿ.ಕೆ.ಸುದರ್ಶನ್, ತಹಸೀಲ್ದಾರ್ ರೇಶ್ಮಾ ಶೆಟ್ಟಿ, ಖಾಂಡ್ಯ ಹೋಬಳಿ ರಾಜಸ್ವ ನಿರೀಕ್ಷಕ ಎಸ್.ಆರ್.ವಿನಯ್, ಗ್ರಾಮ ಆಡಳಿತ ಅಧಿಕಾರಿ ಕೆ.ಆರ್.ಸೌಧ, ಮುಖಂಡರಾದ ಪ್ರಶಾಂತ್ ಎಲ್.ಶೆಟ್ಟಿ, ಬಿ.ಸಿ.ಮಂಜುನಾಥ್, ಕಾಫಿ ಗಿರೀಶ್, ಮಹಮ್ಮದ್ ಹನೀಫ್, ಆಶಾ ನಾರಾಯಣಗೌಡ, ಬಿ.ಕೆ.ಮಧುಸೂದನ್, ಕೆ.ಎಸ್.ಗಣೇಶ್, ಚಂದ್ರಶೇಖರ್ ರೈ ಮತ್ತಿತರರು ಹಾಜರಿದ್ದರು.