ಇತ್ತೀಚಿನ ಸುದ್ದಿ
ಬಿಜೆಪಿಯ ಎಲ್ಲ ಹಾಲಿ ಶಾಸಕರಿಗೆ ಟಿಕೆಟ್ ಅಸಾಧ್ಯ: ವಿಜಯಪುರದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ
09/03/2023, 21:37
ವಿಜಯಪುರ(reporterkarnataka.com): ಸಮೀಕ್ಷಾ ವರದಿ, ಶಾಸಕರ ಕಾರ್ಯವೈಖರಿ ಸೇರಿ ಎಲ್ಲ ಮಾನದಂಡಗಳನ್ನು ನೋಡಿಕೊಂಡು ಬಿಜೆಪಿ ಟಿಕೆಟ್ ನೀಡಲಾಗುವುದು ಎನ್ನುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲ ಹಾಲಿ ಶಾಸಕರಿಗೆ ಬಿಜೆಪಿ ಟಿಕಿಟ್ ಇಲ್ಲ ಎಂಬ ಸ್ಪಷ್ಟ ಸಂದೇಶ ಸಾರಿದ್ದಾರೆ.
ವಿಜಯಪುರದ ಚಿಕ್ಕಗಲಗಲಿಯಲ್ಲಿ ಮಾತನಾಡಿದ ಅವರು, ಒಂದು ಎಲೆಕ್ಷನ್ ಗಿಂತ ಇನ್ನೊಂದು ಎಲೆಕ್ಷನ್ ಯಾವತ್ತೂ ಭಿನ್ನವಾಗಿಯೇ ಇರುತ್ತದೆ. ಎಲ್ಲರಿಗೂ ನೂರಕ್ಕೆ ನೂರು ಟಿಕೆಟ್ ಕೊಟ್ಟ ಉದಾಹರಣೆಗಳಿಲ್ಲ ಎಂದರು.
ಮೊನ್ನೆ ಮೊನ್ನೆಯಷ್ಟೇ ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಐದಾರು ಮಂದಿಗೆ ಟಿಕೆಟ್ ಸಿಗೊಲ್ಲ ಎಂದು ಹೇಳಿದ್ದರು. ವಿಶೇಷವೆಂದರೆ ಇದರಲ್ಲಿ ದ.ಕ. ಜಿಲ್ಲೆಯ ಹಾಲಿ ಶಾಸಕರೊಬ್ಬರ ಹೆಸರು ಕೂಡ ಇದೆ ಎಂಬ ಮಾಹಿತಿ ಇದೆ.
ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಅವರು ಸಂಸದೀಯ ಮಂಡಳಿ ಸದಸ್ಯರು, ಅವರಿಗೆ ಮಾಹಿತಿ ಇರಬಹುದು, 70 ವಯಸ್ಸು ದಾಟಿದವರಿಗೆ ಟೆಕೆಟ್ ನೀಡಬೇಕೇ, ಬೇಡವೇ ಎನ್ನುವ ವಿಚಾರ ನಮ್ಮ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರತಿಯೊಂದು ಕ್ಷೇತ್ರದ ಕುರಿತು ಸಂಸದೀಯ ಮಂಡಳಿಯಲ್ಲಿ ಚರ್ಚೆ ನಡೆಯುತ್ತಿದೆ. ಆದರೆ, ನೂರಕ್ಕೆ ನೂರರಷ್ಟು ಎಲ್ಲರಿಗೂ ಟಿಕೆಟ್ ಸಿಗುತ್ತದೆ ಅಂತ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.
ಇದೇ ವೇಳೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮನೆ ಮೇಲೆ ಲೋಕಾಯುಕ್ತ ದಾಳಿ ಕುರಿತಂತೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಈ ಪ್ರಕರಣದ ವಿಚಾರದಲ್ಲಿ ತನಿಖೆ ನಡೆಸಲು ಲೋಕಾಯುಕ್ತರು ಸರ್ವ ಸ್ವತಂತ್ರರು, ನ್ಯಾಯಾಲಯ ತೀರ್ಮಾನಕ್ಕೆ ನಾವೆಲ್ಲಾ ತಲೆ ಬಾಗಬೇಕಾಗುತ್ತದೆ, ಇದರ ನಂತರ ಲೋಕಾಯುಕ್ತರು ಮುಂದಿನ ತನಿಖೆ ನಡೆಸಿದ್ದಾರೆ. ಇದರಲ್ಲಿ ಯಾವುದನ್ನೂ ಮುಚ್ಚಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್ ಸುಖಾಸುಮ್ಮನೆ ನಮ್ಮ ಮೇಲೆ ಆರೋಪ ಮಾಡುತ್ತಿದೆ, ಈ ಥರ ಆಪಾದನೆ ಮಾಡುವ ಮೂಲಕ ಅವರು ಮಾಡಿರುವ ಕರ್ಮ, ಪಾಪ, ಭ್ರಷ್ಟಾಚಾರ ತೊಳೆದು ಹೋಗುವುದಿಲ್ಲ, ಅದು ಮತ್ತೆ ಬಂದೆ ಬರುತ್ತದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಕಾಂಗ್ರೆಸ್ ಅವಧಿಯಲ್ಲಾದ ಭ್ರಷ್ಟಾಚಾರದ 59 ಪ್ರಕರಣಗಳನ್ನು ಎಸಿಬಿಗೆ ಕೊಟ್ಟದ್ದು, ಲೋಕಾಯುಕ್ತಕ್ಕೆ ಕೊಡುತ್ತೇವೆ. ಅಲ್ಲಿ ಕಾಂಗ್ರೆಸ್ ಬಣ್ಣ ಬಹಳಷ್ಟು ಬಯಲಾಗುತ್ತದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ ಬೊಮ್ಮಾಯಿ, ಆ ಪುಣ್ಯಾತ್ಮನಿಗೂ ಭ್ರಷ್ಟಾಚಾರಕ್ಕೂ ಬಿಡದ ನಂಟಿದೆ. ಅವರ ಬಾಯಲ್ಲಿ ಈ ರೀತಿ ಬರುವುದು ಸಹಜ ಎಂದರು.
ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ. ರವಿಯವರನ್ನು ಹಿಂದೂ ಉಗ್ರ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ ಸಿಎಂ, ಕಾಂಗ್ರೆಸ್ ನವರಿಗೆ ದೇಶಭಕ್ತರು ಉಗ್ರರ ಹಾಗೆ ಕಾಣುತ್ತಾರೆ, ನಮಗೆ ದೇಶದ್ರೋಹಿಗಳು ಉಗ್ರರ ಹಾಗೇ ಕಾಣುತ್ತಾರೆ ಎಂದು ವಾಗ್ದಾಳಿ ನಡೆಸಿದರು.














