ಇತ್ತೀಚಿನ ಸುದ್ದಿ
ಬಳ್ಳಾರಿ: ಅನಧಿಕೃತ ಬಡಾವಣೆಯ ಸೈಟು ಹಾಗೂ ಮನೆಗಳಿಗೆ 10 ದಿನದೊಳಗೆ ಬಿ ಖಾತಾ
19/02/2025, 17:08

ಗಣೇಶ್ ಇನಾಂದಾರ ಬಳ್ಳಾರಿ
info.reporterkarnata@gmail. com
ರಾಜ್ಯ ಸರಕಾರ ಮುನಿಸಿಪಲ್ ಕಾಯ್ದೆ 2025 ಅನ್ನು ಜಾರಿಗೊಳಿಸಿದ್ದು, ಇದರಂತೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2024ರ ಸೆಪ್ಟೆಂಬರ್ 10 ರೊಳಗೆ ನಿರ್ಮಾಣಗೊಂಡ ಅನಧಿಕೃತ ಲೇಔಟ್ (ಬಡಾವಣೆ) ಸೈಟು ಹಾಗೂ ಮನೆಗಳಿಗೆ ಬಿ ಖಾತಾ
ತೆರೆದು ನೋಂದಣಿ ಹಾಗೂ ವ್ಯವಹಾರಕ್ಕೆ ಸರಕಾರ
ಕಾಯಿದೆ ತಿದ್ದುಪಡಿ ಮೂಲಕ ಅವಕಾಶ ಕಲ್ಪಿಸಿದ್ದು,ಇದರ ಸಂಪೂರ್ಣ ಸದುಪಯೋಗವನ್ನು ಮಧ್ಯಮ
ವರ್ಗ ಹಾಗೂ ಬಡಜನರು ಪಡೆದುಕೊಳ್ಳಬೇಕು
ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ನಗರದ ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮೂರು ತಿಂಗಳೊಳಗೆ ಈ ಪ್ರಕ್ರಿಯೆಯನ್ನು
ಪೂರ್ಣಗೊಳಿಸಬೇಕಿದ್ದು, ಜನರಿಗೆ ತೊಂದರೆಯಾಗದಂತೆ
ಪಾಲಿಕೆಯಿಂದ ವಾಲೆಂಟಿಯರ್ ಗಳನ್ನು ನೇಮಕ ಮಾಡಿ ಜನರಿಂದ ದಾಖಲೆಗಳನ್ನು ಪಡೆದು 7-
ರಿಂದ 10 ದಿನಗಳೊಳಗಾಗಿಯೇ ಬಿ ಖಾತಾವನ್ನು
ಮನೆ ಬಾಗಿಲಿ ತಲುಪಿಸುವ ಕೆಲಸ ಮಾಡುತ್ತೇವೆ. ಮಧ್ಯವರ್ತಿಗಳಿಂದ ಬಿ ಖಾತಾ ಮಾಡಿಸಿಕೊಳ್ಳಲು ಬಂದರೆ ಅಂಥವರ ಕೆಲಸ ಪಾಲಿಕೆಯಲ್ಲಿ ಆಗುವುದಿಲ್ಲ. ನೇರವಾಗಿ ಜನರೇ ದಾಖಲೆಗಳನ್ನು ತಂದು ಪಾಲಿಕೆಯಲ್ಲಿ ನೋಂದಣಿ ಮಾಡಿಸಿಕೊಂಡು ಬಿ ಖಾತಾ ಪಡೆಯಬೇಕು. ಇಲ್ಲ ಪಾಲಿಕೆಯಿಂದ ನೇಮಿಸಿರುವ ವಾಲೆಂಟಿಯರ್ ಗಳ ಕೈಗೆ ದಾಖಲೆ ಕೊಟ್ಟರೆ 10 ದಿನಗಳೊಳಗಾಗಿಯೇ
ಬಿ ಖಾತಾ ವಾರಸುದಾರರ ಮನೆ ಸೇರಲಿದೆ ಎಂದು
ನಗರ ಶಾಸಕರು ಹೇಳಿದರು.
ಬಿ ಖಾತಾ ಮಾಡಿಸಲು ಯಾರಾದರೂ ಹಣ
ಕೇಳಿದರೆ ಕೊಡಬಾರದು. ಸಾರ್ವಜನಿಕರು ನೇರವಾಗಿ
ಪಾಲಿಕೆ ಕಚೇರಿಗೆ ಭೇಟಿ ನೀಡಿ ದಾಖಲೆ ನೋಂದಣಿ
ಮಾಡಿಸಿಕೊಂಡು ಬಿ ಖಾತಾ ಪಡೆಯಬೇಕು. ಇಲ್ಲ
ತಮ್ಮ ತಮ್ಮ ವಾರ್ಡ್ ಗಳಿಗೆ ವಾಲೆಂಟಿಯರ್ ಗಳನ್ನ
ನೇಮಿಸುತ್ತೇವೆ ಅಂತವರ ಕೈಗೆ ದಾಖಲೆ ಕೊಟ್ಟು ಬಿ ಖಾತಾ ಮಾಡಿಸಿಕೊಳ್ಳಿ ಎಂದು ಸಾರ್ವಜನಿಕ ಮನವಿ ಮಾಡಿದ ಶಾಸಕ ಭರತ್ ರೆಡ್ಡಿಯವರು
ಪಾಲಿಕೆ ಕಚೇರಿಯಲ್ಲಿ ಇದಕ್ಕಾಗಿಯೇ ಟೋಲ್ ಫ್ರೀ
ನಂಬರನ್ನು ಇಡಲಾಗುವುದು. ಇನ್ನು ಸಾರ್ವಜನಿಕರು ಬಿ ಖಾತಾ ಪಡೆಯಲು ಆಸ್ತಿಗೆ ಸಂಬಂಧಿಸಿದಂತೆ
ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ದಿನಾಂಕ 10-09-2024ರ ಪೂರ್ವದಲ್ಲಿ ನೋಂದಾಯಿತ ಮಾರಾಟ
ಪತ್ರಗಳು/ದಾನ ಪತ್ರ/ವಿಭಾಗ ಪತ್ರಗಳು/ಹಕ್ಕು ಖುಲಾಸೆ
ಪತ್ರಗಳು, ಪ್ರಸ್ತುತ ಸಾಲಿನವರೆಗೆ ಋಣಭಾರ ಪ್ರಮಾಣ
ಪತ್ರ, ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ,
ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ, ಮಾಲೀಕರ ಗುರುತಿನ ದಾಖಲೆ ಪ್ರತಿಯೊಂದಿಗೆ ಈ ಎಲ್ಲಾ ದಾಖಲೆಗಳನ್ನು ಪಾಲಿಕೆ ಕಚೇರಿಯಲ್ಲಿ ನೇರವಾಗಿ ಬಂದು ನೊಂದಾಯಿಸಿ ಕೇವಲ 7ರಿಂದ 10 ದಿನಗಳೊಳಗಾಗಿ ಬಿ ಖಾತಾ ಪಡೆಯಬಹುದು
ಎಂದು ಶಾಸಕ ಭರತ್ ರೆಡ್ಡಿ ತಿಳಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಖಲೀಲ್
ಸಾಬ್, ಮೇಯರ್ ಮುಲ್ಲಂಗಿ ನಂದೀಶ್, ಪಾಲಿಕೆಯ
ಸಭಾ ನಾಯಕ ಪಿ.ಗಾದೆಪ್ಪ, ಪಾಲಿಕೆ ಸದಸ್ಯರಾದ
ರಾಮಾಂಜನೇಯ,ಮುಖಂಡರಾದ ಬಾಪೂಜಿ ನಗರ ಶಿವರಾಜ್ ಡಿ.ಅಯಾಜ್ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.