ಇತ್ತೀಚಿನ ಸುದ್ದಿ
Bagalkote | ಸಿದ್ಧಶ್ರೀ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪೂರ್ವಭಾವಿ ಸಭೆ : ಚಲನಚಿತ್ರಗಳ ಆಹ್ವಾನ
07/12/2025, 14:13
ಸಿದ್ಧನಕೊಳ್ಳ(reporterkarnataka.com): ಬಾಗಲಕೋಟ ಜಿಲ್ಲೆಯ ಇಳಕಲ್ಲ ತಾಲೂಕಿನ ಐತಿಹಾಸಿಕ ಸ್ಥಳ ಐಹೊಳೆ ಹತ್ತಿರದ ಸುಕ್ಷೇತ್ರ ,ಉತ್ತರ ಕರ್ನಾಟಕದ ಕಲಾಪೋಷಕರ ಮಠ ಸಿದ್ಧನಕೊಳ್ಳದ ಸಿದ್ಧಶ್ರೀ ರಾಷ್ಟ್ರೀಯ ಉತ್ಸವ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ-೨೦೨೬ ಜ.೧೪, ೧೫ ಮತ್ತು ೧೬ ರಂದು ಜರುಗಲಿದೆ.

ಜ.೧೪ರಂದು ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ, ಜ.೧೫ರಂದು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ,ಜ.೧೬ರಂದು ಜಾತ್ರಾಮಹೋತ್ಸವ ಸಮಾರೋಪ ಜರುಗಲಿದೆ ಎಂದು ಧರ್ಮಾಧಿಕಾರಿಗಳಾದ ಡಾ.ಶಿವಕುಮಾರ ಸ್ವಾಮೀಜಿ ತಿಳಿಸಿದ್ದಾರೆ.
ಸಿದ್ಧನಕೊಳ್ಳದ ಶ್ರೀಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಸಿದ್ಧಶ್ರೀ ಉತ್ಸವದಲ್ಲಿ ಸಹಸ್ರಾರು ಭಕ್ತರು ಸೇರುತ್ತಿದ್ದು ಸಂಗೀತ, ನೃತ್ಯ, ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳು ನೆರವೇರುತ್ತವೆ. ರಾಜ್ಯ, ಹೊರರಾಜ್ಯಗಳ ವಿವಿಧ ಸಾಧಕರು, ಪ್ರತಿಭಾನ್ವಿತ ಉದಯೋನ್ಮುಖ ಕಲಾಪ್ರತಿಭೆಗಳಿಗೂ ವೇದಿಕೆ ನೀಡಿ ಪ್ರೋತ್ಸಾಹಿಸಲಾಗುತ್ತದೆ. ಪ್ರತಿವರ್ಷದಂತೆ ಈ ವರ್ಷವೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಹಮ್ಮಿಕೊಳ್ಳಲಾಗುತ್ತಿದ್ದು ಈಗಾಗಲೇ ಚಿತ್ರೋತ್ಸವ ಆಯ್ಕೆ ಸಮಿತಿ ರಚಿಸಲಾಗಿದೆ. ಚಲನಚಿತ್ರ ಪತ್ರಕರ್ತರಾದ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ಜ್ಯೂ.ಉಪೇಂದ್ರ ವೀರೇಶ ಪುರವಂತ, ಚಲನಚಿತ್ರ ಕಲಾವಿದರಾದ ಸಂಗನಗೌಡ್ರು ಕುರುಡಗಿ, ಚಲನಚಿತ್ರ ನಿರ್ದೇಶಕ ಅರವಿಂದ ಮುಳಗುಂದ, ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಲೋಕೇಶ ವಿದ್ಯಾಧರ, ಚಲನಚಿತ್ರ ಕಲಾವಿದೆ ಸುನಂದಾ ಕಲ್ಬುರ್ಗಿ, ಭರತನಾಟ್ಯ ಕಲಾವಿದೆ ಕೃತ್ತಿಕಾ ಕಾರ್ಯ ನಿರ್ವಹಿಸಲಿದ್ದಾರೆ. ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ಇನ್ನೂ ಬಿಡುಗಡೆಯಾಗದ ತಮ್ಮ ೨೦೨೫ರಲ್ಲಿ ನಿರ್ಮಾಣವಾದ, ಆಗುತ್ತಿರುವ ಹೊಸ ಚಲನಚಿತ್ರಗಳ, ಟೆಲಿಫಿಲ್ಮ್, ಕಿರುಚಿತ್ರಗಳ, ಟ್ರೈಲರ್, ಟೀಸರ್ ಮತ್ತು ಪೋಸ್ಟರ್ಗಳನ್ನು ಬಿಡುಗಡೆ ಮಾಡಬಹುದು. ಯಾವುದೇ ಪ್ರವೇಶ ಶುಲ್ಕವಿಲ್ಲದೆ ಉಚಿತ ಅವಕಾಶ ಕಲ್ಪಿಸಲಾಗಿದೆ. ಭಾಗವಹಿಸಿದ ಚಲನಚಿತ್ರ ತಂಡಗಳಿಗೆ ಅಭಿನಂದನಾ ಪತ್ರ, ನೆನಪಿನ ಸ್ಮರಣಿಕೆ, ಕಿರುಚಿತ್ರ ತಂಡಗಳಿಗೆ ಅಭಿನಂದನಾ ಪತ್ರಗಳನ್ನು ನೀಡಲಾಗುತ್ತದೆ. ಆಸಕ್ತಿತರು ಡಿಸೆಂಬರ್ ೩೧ ರೊಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ನಂತರ ಬಂದವರಿಗೆ ಅವಕಾಶ ಇರುವುದಿಲ್ಲ. ಶ್ರೀಗಳ ಮತ್ತು ಆಯ್ಕೆ ಸಮಿತಿ ತೀರ್ಮಾನವೇ ಅಂತಿಮ. ಆಯ್ಕೆಯಾದವರಿಗೆ ನಂತರ ತಿಳಿಸಲಾಗುತ್ತದೆ. ತಮ್ಮ ಟೀಸರ್, ಟ್ರೈಲರ್, ಪೋಸ್ಟರ್ಗಳನ್ನು ಡಾ.ಪ್ರಭು ಗಂಜಿಹಾಳ. ವಾಟ್ಸಪ್ ನಂ-೯೪೪೮೭೭೫೩೪೬ ಇಲ್ಲಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಚಲನಚಿತ್ರೋತ್ಸವ ವಿಭಾಗದ ಡಾ.ಪ್ರಭು ಗಂಜಿಹಾಳ-ಮೊ.೯೪೪೮೭೭೫೩೪೬, ಡಾ.ವೀರೇಶ ಹಂಡಿಗಿ-ಮೊ.೯೦೬೦೯೩೩೫೯೬, ವೀರೇಶ ಪುರವಂತ-ಮೊ.೭೦೨೬೦೬೨೩೬೪, ಸಂಗನಗೌಡ್ರು ಕುರುಡಗಿ-ಮೊ.೮೮೬೧೮೧೧೧೨೮ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಶ್ರೀಗಳು ತಿಳಿಸಿದ್ದಾರೆ, ಪತ್ರಿಕಾಗೋಷ್ಠಿಯಲ್ಲಿ ಡಾ.ಪ್ರಭು ಗಂಜಿಹಾಳ, ಸಂಗನಗೌಡ ಕುರುಡಗಿ, ವೀರೇಶ ಪುರವಂತರ, ವೀರಭದ್ರೇಶ್ವರಸ್ವಾಮಿ ಲಿಂಗಸೂರು,ಕರವೇ ಅಧ್ಯಕ್ಷ ಅಶೋಕ ಪೂಜಾರ, ವೀಣಾ ಹಿರೇಮಠ ,ಚಲನಚಿತ್ರ ನಿರ್ದೇಶಕರಾದ ಲೋಕೇಶ ವಿದ್ಯಾಧರ, ಶಿವರಾಜು,ಸ್ಟೈಲ್ ಶಶಿ, ಸಂಗಮೇಶ ಹುದ್ದಾರ, ಮೈಲಾರಗೌಡ ಗೌಡಪ್ಪಗೌಡರ ಮೊದಲಾದವರು ಉಪಸ್ಥಿತರಿದ್ದರು.













