ಇತ್ತೀಚಿನ ಸುದ್ದಿ
ತೀರ್ಥಹಳ್ಳಿಗೆ ರೈಲ್ವೆ ಯೋಜನೆ ತರಲು ಯತ್ನ: ಸಂಸದ ಬಿ. ವೈ. ರಾಘವೇಂದ್ರ
18/07/2025, 23:18

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ತೀರ್ಥಹಳ್ಳಿಯ ಆಗುಂಬೆ ಘಾಟಿಗೆ ಟರ್ಮಿನಲ್ ಆಗಬೇಕೆಂಬ ಒತ್ತಾಯ ಇದೆ. ಶಿವಮೊಗ್ಗದಲ್ಲಿ ರೈಲ್ವೆ ಕ್ಷೇತ್ರ ಸಾಕಷ್ಟು ಬದಲಾವಣೆ ಹೊಂದುತ್ತಿದೆ. ತೀರ್ಥಹಳ್ಳಿಗೆ ರೈಲ್ವೆ ಯೋಜನೆ ತರಬೇಕು ಎಂಬ ಪ್ರಯತ್ನ ಆಗುತ್ತಿದೆ. ಶಿವಮೊಗ್ಗ, ಶೃಂಗೇರಿ ಮಂಗಳೂರು ಮಾರ್ಗವಾಗಿ ರೈಲ್ವೆ ಮಾರ್ಗ ನಿರ್ಮಾಣ ಕಾರ್ಯಕ್ಕೆ ಯೋಚನೆ ಮಾಡಲಾಗಿದೆ ಎಂದು ಸಂಸದ ಬಿ. ವೈ. ರಾಘವೇಂದ್ರ ಹೇಳಿದರು.
ಶುಕ್ರವಾರ ಪಟ್ಟಣದ ಗೋಪಾಲ ಗೌಡ ರಂಗ ಮದಿರದಲ್ಲಿ ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್ ವತಿಯಿಂದ ಶಾಲಾ ಮಕ್ಕಳಿಗೆ ನೀಡಲಾದ ಬ್ಯಾಗ್ ಮತ್ತು ಸ್ವೆಟರ್ ವಿತರಿಸಿ ಮಾತನಾಡಿದರು.
ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್ ವತಿಯಿಂದ ಈ ಸೌಲಭ್ಯ ಒದಗಿಸುತ್ತಿದ್ದೇನೆ. ಸರ್ಕಾರಿ ಶಾಲೆಯ ಒಂದರಿಂದ ನಾಲ್ಕನೇ ತರಗತಿಯ ಮಕ್ಕಳಿಗೆ ನೀಡಲಾಗುತ್ತಿದೆ. ನಮ್ಮ ಜಿಲ್ಲೆಗೆ 60,000 ಸ್ವೆಟ್ಟರ್ ಗಳ ವಿತರಣೆ ಆಗುತ್ತವೆ. ತೀರ್ಥಹಳ್ಳಿ ತಾಲೂಕಿನಲ್ಲಿ 3000 ಮಕ್ಕಳಿಗೆ ಸ್ವೆಟರ್ ವಿತರಣೆ ಮಾಡಲಾಗುತ್ತಿದೆ. ಪ್ರತಿ ವರ್ಷ ಶಿಕ್ಷಣಕ್ಕೆ ಪ್ರೋತ್ಸಾಹ ಕೊಡುವ ಕಾರ್ಯ ಮಾಡಲು ಹೊರಟಿದ್ದೇವೆ. ನಮ್ಮ ಸರ್ಕಾರಿ ಶಾಲೆಯ ಮಕ್ಕಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ಏನೇನು ಸೌಲಭ್ಯ ಇದೆ ಅದನ್ನು ತಲುಪಿಸುವ ಕಾರ್ಯ ಆಗಬೇಕಾಗಿದೆ ಎಂದರು.
ಹಿಂದೆ ಶಿಕ್ಷಕರಿಗೆ ಎರಡು ಮೂರು ತಿಂಗಳಿಗೆ ಒಮ್ಮೆ ಸ್ಯಾಲರಿ ಬರುತ್ತಿತ್ತು ಆದರೆ ಇವತ್ತು ಅದಕ್ಕೆ ಯಾವುದೇ ಕೊರತೆ ಇಲ್ಲ.
ಅಜಿತ್ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ನಮ್ಮ ರಾಜ್ಯ ಸರ್ಕಾರದ ಸರ್ಕಾರಿ ಶಾಲೆ ಮಕ್ಕಳಿಗೆ 10,000 ಕೋಟಿ ಅನುದಾನವನ್ನು ನೀಡಿರುತ್ತಾರೆ. ಈ ಯೋಜನೆ ಅಡಿಯಲ್ಲಿ ಮೊಟ್ಟೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಸ್ವಾವಲಂಬನೆ ಬಲಿಷ್ಠ ಮತ್ತು ಸುಭದ್ರ ದೇಶವನ್ನು ನಿರ್ಮಾಣ ಮಾಡುವುದಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. ಮೂಲ ವಿಚಾರಗಳನ್ನು ಇಟ್ಟುಕೊಂಡು ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ. ಜಾತಿಭೇದ ಮರೆತು ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳಿಗೆ 10 ಪರ್ಸೆಂಟ್ ಮೀಸಲಾತಿ ಇದೆ ಇದನ್ನು ಉಪಯೋಗಿಸಿಕೊಳ್ಳಬೇಕು.
ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಒಳ್ಳೆಯ ಯೋಜನೆ ಜಾರಿಗೆ ತಂದಿದೆ ಸರ್ಕಾರ ಇದನ್ನ ಅಳವಡಿಸಿಕೊಳ್ಳಲು ಪ್ರಯತ್ನ ಮಾಡಬೇಕು. ಶಿವಮೊಗ್ಗ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡಲಾಗುತ್ತಿದೆ ಎಂದು ಅವರು ನುಡಿದರು.
ಶಾಸಕರಾದ ಆರಗ ಜ್ಞಾನೇಂದ್ರ ಮಾತನಾಡಿ ರಾಜ್ಯದಲ್ಲಿ ಯಾವ ಜಿಲ್ಲೆಗೂ ಬಾರದ ಸೌಲತ್ತುಗಳನ್ನು ನಮ್ಮ ಜಿಲ್ಲೆಗೆ ಸಂಸದರು ತಂದು ಕೊಟ್ಟಿದ್ದಾರೆ. ಇದು ಕೇವಲ ಉತ್ತರ ಭಾರತದಲ್ಲಿ ಬಳಕೆಯಾಗುತ್ತಿತ್ತು. ಬಹಳ ಜನ ರೈಲು ಬಿಡುವವರು ಇದ್ದರು ಆದರೆ ನಮ್ಮ ಸಂಸದರು ರೈಲನ್ನು ತಂದಿದ್ದಾರೆ. ಇವತ್ತು ಯಾರು ಒಳ್ಳೆ ಕೆಲಸ ಮಾಡಿದ್ದರು ಅದನ್ನು ಹೇಳಲೇಬೇಕು ಎಂದರು.
ನಮ್ಮ ಸಂಸತ್ ಸದಸ್ಯರು ನಮಗೆ ತುಂಗಾ ನದಿಗೆ ಹೊಸ ಸೇತುವೆ, ನ್ಯಾಷನಲ್ ಹೈವೇ ತಂದು ಕೊಟ್ಟಿದ್ದಾರೆ. ನೆಟ್ವರ್ಕ್ ಸಮಸ್ಯೆ ಇರುವುದರಿಂದ ನೂರಾರು ಟವರ್ ಗಳನ್ನು ತಂದಿದ್ದಾರೆ. ಇಡೀ ದೇಶದಲ್ಲಿ ಎರಡನೇ ದೊಡ್ಡ ಸೇತುವೆ ಸಿಗಂದೂರು ಸೇತುವೆ ಮೊನ್ನೆ ದಿನ ಉದ್ಘಾಟನೆಯಾಗಿದೆ
ಇದು ಕೂಡ ಟೂರಿಸಂ ನಕಾಶೆಯಲ್ಲಿ ಒಂದು ಹೆಗ್ಗುರುತು ಆಗಲಿದೆ. ನಮ್ಮ ಸಂಸದರು ಪಶ್ಚಿಮ ಘಟ್ಟದ ಈ ಭಾಗಕ್ಕೆ ಒಂದು ದೊಡ್ಡ ಶಕ್ತಿಯನ್ನು ತಂದು ಕೊಟ್ಟಿದ್ದಾರೆ ಎಂದು ಅವರು ಹೇಳಿದರು.
ಇವತ್ತು ಹಳ್ಳಿಯ ಸರ್ಕಾರಿ ಶಾಲೆಯನ್ನು ಮೇಲೆತ್ತುವ ಕೆಲಸ ಆಗುತ್ತಿದೆ. ಒಂದು ಶಾಲೆ ಮುಚ್ಚುತ್ತದೆ ಎಂದರೆ ನಮಗೆ ಹೊಟ್ಟೆ ಉರಿಯುತ್ತದೆ. ನಮ್ಮ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತೆರೆಯದಿದ್ದರೆ ಶಾಲೆಗಳು ಮುಚ್ಚುತ್ತವೆ ಎಂದು ನಾನು ಕಳೆದ ಎರಡು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇನೆ. ಇದರ ಪರಿಣಾಮವಾಗಿ 30 ಪ್ರಾಥಮಿಕ ಶಾಲೆಗಳು ಮತ್ತು 5 ಸರ್ಕಾರಿ ಪ್ರೌಢಶಾಲೆಗಳಿಗೆ ಇಂಗ್ಲಿಷ್ ಮೀಡಿಯಂ ತೆರೆಯಲು ಅನುಮತಿ ನೀಡಲಾಗಿದೆ ಎಂದರು.
ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹಮತ್ ಉಲ್ಲಾ ಆಸಾದಿ ಮಾತನಾಡಿ ತೀರ್ಥಹಳ್ಳಿಗೆ ರೈಲು ತರುವ ಕೆಲಸ ಆಗಬೇಕು, ಈಗಾಗಲೇ ಮನವಿ ಸಹ ನೀಡಲಾಗಿದೆ. ತೀರ್ಥಹಳ್ಳಿ ಪ್ರವಾಸೋದ್ಯಮವಾಗಿ ಬೆಳೆಯಲು ರೈಲ್ವೆ ಯೋಜನೆ ಸಹಕಾರಿ ಆಗಲಿದೆ. ಶಿವಮೊಗ್ಗ – ತೀರ್ಥಹಳ್ಳಿ – ಮಂಗಳೂರು ಅಥವಾ ಶೃಂಗೇರಿ ಮಾರ್ಗವಾಗಿ ರೈಲು ತರುವ ಕೆಲಸ ಮಾಡಬೇಕು ಎಂದು ಅವರು ನುಡಿದರು.
ಇನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ಬ್ಯಾಗ್ ಮತ್ತು ಸ್ವೆಟರ್ ನೀಡುತ್ತಿರುವುದು ಸಂತೋಷವಾಗುತ್ತಿದೆ. ಸಾವಿರಾರು ಮಕ್ಕಳಿಗೆ ಈ ಬ್ಯಾಗ್ ನೀಡುತ್ತಿರುವುದು ಒಳ್ಳೆಯ ಕೆಲಸ. ನಾನು ಕಾಂಗ್ರೆಸ್ ಪಕ್ಷದಲ್ಲಿ ಇರಬಹುದು ಆದರೆ ಚುನಾವಣೆ ಸಂದರ್ಭದಲ್ಲಿ ರಾಘವೇಂದ್ರ ಅವರ ವಿರುದ್ಧ ಪ್ರಚಾರ ಮಾಡಿದ್ದೇನೆ. ಆದರೆ ಈಗ ಒಳ್ಳೆಯ ಕೆಲಸ ಮಾಡುವ ಸಂಸದರ ವಿರುದ್ಧ ಮಾತನಾಡುವುದು ಸರಿಯಲ್ಲ. ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದರೆ ಬಕೆಟ್ ಹಿಡಿಯುತ್ತಾರೆ ಎನ್ನುತ್ತಾರೆ. ಆದರೆ ಕ್ಷೇತ್ರದ ಅಭಿವೃದ್ಧಿ ಯಾರೇ ಮಾಡಿದರು ಅದನ್ನು ಪ್ರಶಂಸೆ ಮಾಡುವುದು ಮನುಷ್ಯ ಧರ್ಮ ಎಂದರು.
ಈ ಸಂದರ್ಭದಲ್ಲಿ ಗೀತಾ ರಮೇಶ್, ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸದಸ್ಯರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಇದ್ದರು.