ಇತ್ತೀಚಿನ ಸುದ್ದಿ
ಅರ್ಜಿ ವಿಲೇವಾರಿಗೆ ಸತಾಯಿಸಿದ ಸರ್ವೆ ಅಧಿಕಾರಿಗಳು: ಅರ್ಜಿದಾರನಿಂದ ಏಕಾಂಗಿ ಪ್ರತಿಭಟನೆ!
19/11/2022, 18:56

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂಡಿಗೆರೆ ತಾಲೂಕು ಕಚೇರಿಯಲ್ಲಿರುವ ಸರ್ವೆ ಇಲಾಖೆ ಅಧಿಕಾರಿಗಳು ತಮ್ಮ ಕೆಲಸ ಮಾಡಿಕೊಡದೇ ಸತಾಯಿಸುತ್ತಿದ್ದ ಹಿನ್ನಲೆಯಲ್ಲಿ ಅರ್ಜಿದಾರ ಶ್ರೇಷ್ಠಿ ಎಂಬುವರು ಶನಿವಾರ ಸರ್ವೇ ಇಲಾಖೆ ಮುಂದೆ ನಾಳೆ ಬಾ ಎಂಬ ನಾಮಫಲಕವನ್ನು ತನ್ನ ಶರ್ಟ್ನ ಹಿಂದೆ ಮುಂದೆ ಹಾಕಿಕೊಂಡು ವಿಭಿನ್ನ ರೀತಿಯಲ್ಲಿ ಏಕಾಂಗಿಯಾಗಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸ್ತಿ ವಿಭಾಗ ಪತ್ರಕ್ಕಾಗಿ ತಾನು ಸರ್ವೆ ಅಧಿಕಾರಿಗಳಿಗೆ ೧೬-೦೯-೨೦೨೨ರಂದು ಅರ್ಜಿ ಸಲ್ಲಿಸಿದ್ದೆ. ಲೆವೆನ್-ಇ ಸ್ಕೆಚ್ ಮಾಡಲು ೫ ನಿಮಿಷ ಸಾಕು. ಕ್ಯೋ ಕೋಡ್ ಸಂಖ್ಯೆ ಬರಲು ಒಂದು ದಿನ ಸಾಕು. ಈ ಕೆಲಸ ಮಾಡಿಕೊಡಲು ಕಳೆದ ೬೫ ದಿನದಿಂದ ಸತಾಯಿಸುತ್ತಿದ್ದಾರೆ. ಪ್ರತಿದಿನ ತಾಲೂಕು ಕಚೇರಿಗೆ ಅಲೆಯುವುದೇ ಕೆಲಸವಾಗಿಬಿಟ್ಟಿದೆ. ಅಲ್ಲದೇ ಈ ಕೆಲಸಕ್ಕಾಗಿ ಬೆಂಗಳೂರಿಗೆ ತೆರಳಿ ಕಮಿಷನರ್ ಅವರನ್ನೂ ಕೂಡ ಭೇಟಿ ಮಾಡಿ ಬಂದಿದ್ದೇನೆ.
ಆದರೂ ಯಾವುದೇ ಪ್ರಯೋಜನವಾಗಲಿಲ್ಲ. ತನ್ನ ಅರ್ಜಿ ವಿಲೆ ಬಗ್ಗೆ ಕಚೇರಿಗೆ ಬಂದಾಗ ಅಧಿಕಾರಿಗಳು ಸರಿಯಾದ ಮಾಹಿತಿ ಕೂಡ ನೀಡುತ್ತಿರಲಿಲ್ಲ. ಹಾಗಾಗಿ ದಿಕ್ಕು ತೋಚದೇ ಪ್ರತಿಭಟಿಸುವಂತಾಗಿದೆ. ಈಗ ಇಲ್ಲಿನ ಸರ್ವೇ ಅಧಿಕಾರಿಗಳು ತನ್ನ ಅರ್ಜಿ ಕೈಗೆತ್ತುಕೊಂಡು ಸೋಮವಾರ ವಿಲೇ ಮಾಡುವ ಭರವಸೆ ನೀಡಿದ್ದಾರೆ. ಸೋಮವಾರ ಕೂಡ ತನ್ನ ಕೆಲಸ ಆಗದಿದ್ದರೆ ಮತ್ತೆ ಪ್ರತಿಭಟನೆ ಮುಂದುವರೆಸುವುದಾಗಿ ತಿಳಿಸಿದರು.