ಇತ್ತೀಚಿನ ಸುದ್ದಿ
ಹಾಡು ನಿಲ್ಲಿಸಿದ ಯಕ್ಷ ಕೋಗಿಲೆ: ತೆಂಕುತಿಟ್ಟಿನ ಖ್ಯಾತ ಭಾಗವತ ದಿನೇಶ್ ಅಮ್ಮಣ್ಣಾಯ ಇನ್ನಿಲ್ಲ
16/10/2025, 14:10

ಮಂಗಳೂರು(reporterkarnataka.com): ತೆಂಕುತಿಟ್ಟಿನ ಖ್ಯಾತ ಭಾಗವತ ದಿನೇಶ್ ಅಮ್ಮಣ್ಣಾಯ(65) ಅವರು ಅರಶಿಣಮಕ್ಕಿಯ ಮನೆಯಲ್ಲಿ ವಿಧಿವಶರಾಗಿದ್ದಾರೆ.
ಯಕ್ಷಗಾನದ ಅಗ್ರಮಾನ್ಯ ಭಾಗವತರಲ್ಲಿ ಅವರು ಒಬ್ಬರಾಗಿದ್ದರು. ತನ್ನ ಕಂಠಸಿರಿಯಿಂದ ಅಪಾರ ಅಭಿಮಾನಿಗಳ ಮನಸ್ಸಿನಲ್ಲಿ ಮನೆಮಾಡಿದ ಅವರು ಭ್ರಾಮರೀ ಯಕ್ಷವೈಭವದ ಹಲವಾರು ಯಕ್ಷಗಾನಕ್ಕೆ ಭಾಗವತಿಕೆ ಮಾಡಿ ಆ ಪ್ರಸಂಗದ ಯಶಸ್ವಿಗೆ ಕಾರಣಕರ್ತರಾಗಿದ್ದರು. ರಸರಾಗ ಚಕ್ರವರ್ತಿ, ಗಾನಕೋಗಿಲೆ ಎಂದೇ ದಿನೇಶ್ ಅಮ್ಮಣ್ಣಾಯ ಪ್ರಸಿದ್ದರಾಗಿದ್ದರು.
ಪ್ರಸಿದ್ಧ ಭಾಗವತರಾದ ದಾಮೋದರ ಮಂಡೆಚ್ಚರ ಶಿಷ್ಯರಾಗಿ ಪುತ್ತೂರು ಮೇಳದ ಮೂಲಕ ಕಲಾ ಜೀವನ ಆರಂಭಿಸಿದ್ದರು. ನಾಲ್ಕು ದಶಕಕ್ಕೂ ಹೆಚ್ಚು ಕಾಲ ಯಕ್ಷಗಾನ ರಂಗದಲ್ಲಿ ಭಾಗವತರಾಗಿ ಕಲಾ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಮೇಳದಲ್ಲಿ ದಿಗ್ಗಜ ಕಲಾವಿದರನ್ನು ರಂಗದಲ್ಲಿ ಕುಣಿಸಿದ ಕೀರ್ತಿ ಅಮ್ಮಣ್ಣಾಯರದ್ದು ಆಗಿದೆ. ತುಳು ಪ್ರಸಂಗಗಳಿಗೆ ತನ್ನ ಕಂಠ ಮಾಧುರ್ಯದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರು. ಅತ್ಯದ್ಭುತ ರಾಗ ಸಂಚಾರದ ಮೂಲಕ ಕರುಣಾ ರಸದ ಪದ್ಯಗಳಿಗೆ ಸಾಟಿಯಿಲ್ಲದ ಭಾಗವತ ಎನಿಸಿಕೊಂಡಿದ್ದರು. ಎಡನೀರು ಮೇಳದಲ್ಲೂ ತಿರುಗಾಟ ನಡೆಸಿದ್ದರು. ವಿಶ್ರಾಂತ ಜೀವನ ನಡೆಸುತ್ತಿದ್ದ ಅಮ್ಮಣ್ಣಾಯರು ಭಾಗವತರಾಗಿ ಅನೇಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅಮ್ಮಣ್ಣಾಯರ ಅಗಲುವಿಕೆಗೆ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.