ಇತ್ತೀಚಿನ ಸುದ್ದಿ
Kodagu | ಸೋಮವಾರಪೇಟೆ: ಯುವಕನ ಆತ್ಮಹತ್ಯೆ; 3 ದಿನಗಳ ಹುಡುಕಾಟದ ಬಳಿಕ ಮೃತದೇಹ ಪತ್ತೆ
19/08/2025, 20:03

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnata@gmail.com
ಸೋಮವಾರಪೇಟೆ ಸಮೀಪದ ಪುಷ್ಪಗಿರಿ ಹೈಡೆಲ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹಣಕೋಡು ಗ್ರಾಮದ ಚಿದಾನಂದ (27) ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಭಾನುವಾರ ರಾತ್ರಿ ಚಿದಾನಂದನು ತಾನು ಕೆಲಸ ಮಾಡುತ್ತಿದ್ದ ಘಟಕದಲ್ಲಿಯೇ ನೀರಿಗೆ ಧುಮುಕಿದ್ದು, ಆ ಕ್ಷಣವನ್ನು ವಿದ್ಯುತ್ ಘಟಕದ ಸಿಸಿಟಿವಿ ಕ್ಯಾಮೆರಾಗಳು ಸೆರೆ ಹಿಡಿದಿವೆ. ಆತ್ಮಹತ್ಯೆ ಮಾಡಲು ಹೊರಟಿರುವುದಾಗಿ ತನ್ನ ಸ್ನೇಹಿತರಿಗೆ ಮೊಬೈಲ್ ಮೆಸೇಜ್ ಕಳುಹಿಸಿದ್ದಾನೆಂದು ವೃತ್ತ ನಿರೀಕ್ಷಕರದ ಮುದ್ದುಮಾದೇವ ತಿಳಿಸಿದ್ದಾರೆ.
ಸೋಮವಾರ ಪೊಲೀಸರು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳು ಜಲಾಶಯದಲ್ಲಿ ಹುಡುಕಾಟ ನಡೆಸಿದರೂ ಸುಳಿವು ದೊರಕಲಿಲ್ಲ. ಮಂಗಳವಾರ ಸ್ಥಳೀಯರು ತಾವೇ ಹುಡುಕಾಟ ಕೈಗೊಂಡು, ಮಧ್ಯಾಹ್ನ ವೇಳೆಗೆ ಘಟಕದಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿ ಮರದ ಬಡಕ್ಕೆ ಸಿಕ್ಕಿಕೊಂಡಿದ್ದ ಮೃತದೇಹವನ್ನು ಪತ್ತೆ ಹಚ್ಚಿದರು.
ನೀರಿನ ರಭಸವನ್ನು ಲೆಕ್ಕಿಸದೆ ಬೀದಳ್ಳಿ ಗ್ರಾಮದ ಯುವಕರಾದ ಪುಟ್ಟ, ಪ್ರವೀಣ್, ಕಿರಣ್, ರವಿ, ವಿನೋದ್, ದೀಕ್ಷಿತ್ ಹಾಗೂ ಗಿರೀಶ್ ಶೌರ್ಯ ತೋರಿಸಿ ಮೃತದೇಹವನ್ನು ದಡಕ್ಕೆ ತರಲು ಯಶಸ್ವಿಯಾದರು.
ಸ್ಥಳಕ್ಕೆ ತಲುಪಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.