ಇತ್ತೀಚಿನ ಸುದ್ದಿ
ಧರೆಗೆ ಉರುಳಿದ 200 ವರ್ಷಗಳ ಇತಿಹಾಸವಿರುವ ಔದುಂಬರ ವೃಕ್ಷ: ಮಡಿಕೇರಿಯ ಮ್ಯಾನ್ ಕಾಂಪೌಂಡ್ ನಲ್ಲಿದ್ದ ಮರ
02/07/2025, 20:34

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕೊಡಗನ್ನು ಆಳಿದ ರಾಜರ ಕಾಲದಲ್ಲಿ ಆನೆಗಳನ್ನು ಕಟ್ಟಿ ಹಾಕುತ್ತಿದ್ದ ಬೃಹತ್ ಗಾತ್ರದ ಮರಗಳಲ್ಲಿ ಒಂದು ಮರ ಇದುವರೆಗೂ ಬದುಕಿ ಎಲ್ಲರಿಗೂ ಆಶ್ರಯ ನೀಡಿತ್ತು. ಆದರೆ ಇಂದು ಇನ್ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿದ್ದ ಮಡಿಕೇರಿಯ ಮ್ಯಾನ್ ಕಾಂಪೌಂಡ್ ಆವರಣದಲ್ಲಿರುವ ಔದುಂಬರ ವೃಕ್ಷ (ಅತ್ತಿ ಹಣ್ಣಿನ ಮರ.. fig) ಮರದ ಅರ್ಧಭಾಗ ಧರೆಗೆ ಉರುಳುವ ದೃಶ್ಯವನ್ನು ಮರದ ಸಮೀಪವೇ ಇರುವ ಅಂಗಡಿಯ ಮಾಲೀಕ ಪಿ.ಎಂ ರವಿ ಸೆರೆ ಹಿಡಿದಿದ್ದಾರೆ.
ಮೈದಾನದಲ್ಲಿ ಆಟವಾಡಿ ದಣಿದವರಿಗೆ ಆಶ್ರಯ ನೀಡುತ್ತಿದ್ದ ಈ ಮರ ಅದರಲ್ಲಿರುವ ಸಕಾರಾತ್ಮಕ ಶಕ್ತಿಯನ್ನು ಎಲ್ಲರಿಗೂ ಪಸರಿಸಿದೆ. ಹಾಗೆ ಈ ಮರದ ಸುತ್ತ ಕಟ್ಟೆಯನ್ನು ಕಟ್ಟಿ ಹಬ್ಬ ಹರಿ ದಿನಗಳಲ್ಲಿ ಇದರ ಸುತ್ತ ಕೊಡವರ ಸಾಂಪ್ರದಾಯಿಕ ನೃತ್ಯಗಳು, ಇದೆ ಕೋಲ್ ಮಂದ್ ನಲ್ಲಿ ನಡೆಯುತ್ತಿತ್ತು. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರಿಗೆ ನೆರಳಿನ ಆಶ್ರಯ ನೀಡುತ್ತಿದ್ದ ಈ ಮರದ ಅರ್ಧ ಭಾಗ ಇಂದು ಮಧ್ಯಾಹ್ನ 3:30ರ ವೇಳೆಗೆ ಧರೆಗೆ ಉರುಳಿದ್ದು, ಉಳಿದ ಭಾಗ ಬೀಳುವ ಹಂತದಲ್ಲಿ ನೆಲೆ ನಿಂತಿದೆ.