ಇತ್ತೀಚಿನ ಸುದ್ದಿ
Mangaluru | ಮಂಗಳೂರು ಕುಡಿಯುವ ನೀರಿನ ಸಮಸ್ಯೆ: ಪಾಲಿಕೆ ಆಯುಕ್ತರ ಜತೆ ಶಾಸಕ ವೇದವ್ಯಾಸ ಕಾಮತ್ ತುರ್ತುಸಭೆ
06/06/2025, 18:01

ಮಂಗಳೂರು(reporterkarnataka.com): ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಮಳೆಯಿಂದ ಉಂಟಾಗಿರುವ ಅವ್ಯವಸ್ಥೆಗಳು ಸೇರಿದಂತೆ ಜನಸಾಮಾನ್ಯರು ಅನುಭವಿಸುತ್ತಿರುವ ಅನೇಕ ಸಮಸ್ಯೆಗಳ ಬಗ್ಗೆ ಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳೊಂದಿಗೆ ಶಾಸಕ ವೇದವ್ಯಾಸ ಕಾಮತ್ ಅವರು ತುರ್ತು ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಶಾಸಕರು, ಪಾಲಿಕೆ ವ್ಯಾಪ್ತಿಯಲ್ಲಿ ವಿಪರೀತ ಮಳೆ ಸುರಿದಿದ್ದರೂ ಜನರಿಗೆ ಕುಡಿಯುವ ನೀರಿನ ಸಮಸ್ಯೆ ತಪ್ಪಿಲ್ಲ. ಇನ್ನೊಂದೆಡೆ ರಾಜಕಾಲುವೆಗಳಲ್ಲಿ ಸಮರ್ಪಕವಾಗಿ ಹೂಳೆತ್ತದಿರುವಿಕೆಯಿಂದ ಮನೆಗಳಿಗೆ ಮಳೆ ನೀರು ನುಗ್ಗಿ ಜನಸಾಮಾನ್ಯರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಸಾಲದ್ದಕ್ಕೆ ಮಳೆಯಿಂದ ತೊಂದರೆಗೀಡಾದವರಿಗೆ ಪಾಲಿಕೆ ವತಿಯಿಂದ ಯಾವುದೇ ನೆರವು ಸಿಗುತ್ತಿಲ್ಲ. ಕಸ ವಿಲೇವಾರಿಯ ಅವ್ಯವಸ್ಥೆಯ ಬಗ್ಗೆಯೂ ಜನರಿಂದ ದೂರುಗಳು ಬರುತ್ತಿವೆ. ಬಲ್ಲಾಳ್ ಬಾಗ್ ಬಳಿಯ ಶಿಥಿಲಗೊಂಡಿರುವ ರಾಜಕಾಲುವೆಯ ಬ್ರಿಡ್ಜ್ ನಿಂದ ನೀರು ಸಾರಾಗವಾಗಿ ಹರಿಯದೇ ಅದರಿಂದಲೂ ಕೃತಕ ನೆರೆ ಸೃಷ್ಟಿಯಾಗುತ್ತಿದ್ದು ಆ ಬಗ್ಗೆಯೂ ಕ್ರಮಕೈಗೊಳ್ಳುವುದು ಸೇರಿದಂತೆ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿ ಪಾಲಿಕೆ ಅಧಿಕಾರಿಗಳು ಯಾವುದನ್ನೂ ಹಗುರವಾಗಿ ಪರಿಗಣಿಸದೇ ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಕಾರ್ಯಪಾಲಕ ಎಂಜಿನಿಯರ್ ನರೇಶ್ ಶೆಣೈ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.