11:31 PM Friday1 - May 2026
ಬ್ರೇಕಿಂಗ್ ನ್ಯೂಸ್
ಕೃಷಿ ಅಧಿಕಾರಿಗಳ ದಾಳಿ: ಅಕ್ರಮ ಯೂರಿಯಾ ದಾಸ್ತಾನು ಪತ್ತೆ; 399 ಬ್ಯಾಗ್ ರಸಗೊಬ್ಬರ… ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು 1.20 ಕೋಟಿ ರೂಪಾಯಿ ಮೌಲ್ಯದ ಬೆಳ್ಳಿ ಆಭರಣ,… Mangaluru | ಪರಪ್ಪನ ಅಗ್ರಹಾರ ಜೈಲ್ ನಲ್ಲಿ ಕೈದಿಯಿಂದ ಮೊಬೈಲ್ ನಲ್ಲೇ ಪತ್ನಿಯ… ಮಗಳ ಮದುವೆ ಸಾಲ ತೀರಿಸಲು ಅಳಿಯನ ಮನೆಗೆ ಅತ್ತೆ ಕನ್ನ: 110 ಗ್ರಾಂ… ಹೇಮಾವತಿ ನಾಲೆಗೆ ಉರುಳಿ ಬಿದ್ದ ಕಾರು: ತಾಯಿ- ಮಗು ಸಾವು; ಧರ್ಮಸ್ಥಳದಿಂದ ದೇವನಹಳ್ಳಿಗೆ… ಧಾರವಾಡದಲ್ಲಿ ಟಿಬೇಟಿಯನ್ ಬಿಕ್ಕು ಹತ್ಯೆ: ಬೇರೆ ಕಡೆ ಕೊಲೆ ಮಾಡಿ ಎಸೆದಿರುವ ಶಂಕೆ ಉದ್ಯೋಗ ಖಾತ್ರಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿ ಸಾವು: ಬಿಸಿಲಿನ ತಾಪಮಾನಕ್ಕೆ… ರಾಜ್ಯದಲ್ಲಿ ಹೊಸ ಕನಿಷ್ಠ ವೇತನ ಜಾರಿಗೆ ತರಲು ಯತ್ನ: ಸಂಡೂರಿನಲ್ಲಿ ಕಾರ್ಮಿಕ ಸಚಿವ… ಬಿಜೆಪಿ ಪಕ್ಷದಿಂದಲೇ ಮಹಿಳೆಯರಿಗೆ ಶೇ. 30ರಷ್ಟು ಮೀಸಲಾತಿ ಪ್ರಕಟಿಸಲಿ: ಸಚಿವ ಸಂತೋಷ್ ಲಾಡ್… Mangaluru | ಕುಕ್ಕರ್‌ ಬಾಂಬ್‌ ಸ್ಫೋಟದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕಿತ್ತು: ಸಂತ್ರಸ್ತ…

ಇತ್ತೀಚಿನ ಸುದ್ದಿ

ಕ್ಯಾಬ್‌ಗಳಿಗೆ ತಟ್ಟಿದ ʼಟಿಪ್ಸ್‌ʼ ಬಿಸಿ; ಈಗ ʼಐಚ್ಛಿಕʼವೆಂದು ಬದಲು!: ಓಲಾ, ಯಾತ್ರಿ ಅಪ್ಲಿಕೇಷನ್‌ಗಳಲ್ಲಿ ಹೊಸ ಬದಲಾವಣೆ

01/06/2025, 16:39

ನವದೆಹಲಿ(reporterkarnataka.com): ಕ್ಯಾಬ್‌ ಸೇವೆಗೆ ಮುಂಗಡ ಟಿಪ್ಸ್‌ ಪಡೆಯುತ್ತಿದ್ದ ಓಲಾ, ಉಬರ್, ನಮ್ಮ ಯಾತ್ರಿ ಕಂಪನಿಗಳಿಗೆ ಈಗ ಬಿಸಿ ತಟ್ಟಿದೆ. ವಾಮ ಮಾರ್ಗದಲ್ಲಿ ಗ್ರಾಹಕರ ಸುಲಿಗೆ ಮಾಡುತ್ತಿದ್ದ ಈ ಸಾರಿಗೆಗಳೀಗ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ನೋಟಿಸ್‌ ಜಾರಿ ಮಾಡುತ್ತಲೇ ಎಚ್ಚೆತ್ತುಕೊಂಡಿವೆ. ಸಾರಿಗೆ ಸೇವಾ ಅಪ್ಲಿಕೇಷನ್‌ಗಳಲ್ಲಿ ಈಗ ʼಅಡ್ವಾನ್ಸ್‌ ಟಿಪ್ಸ್‌ʼ ಬದಲಿಗೆ ʼಸ್ವಯಂ ಪ್ರೇರಿತ ಟಿಪ್ಸ್‌ʼ, ʼಐಚ್ಛಿಕ ಟಿಪ್ಸ್‌ʼ ಎಂಬ ಹೊಸ ಪದ ಸೃಷ್ಟಿಯಾಗಿದೆ.
ʼಟಿಪ್ಸ್‌ʼ ಎನ್ನುವುದು ಕ್ಯಾಬ್‌ ಚಾಲಕರ ಉತ್ತಮ ಸೇವೆಯನ್ನು ಮೆಚ್ಚಿ ಕೊಡುವಂಥದ್ದು. ಕ್ಯಾಬ್‌ಗಳು ತ್ವರಿತವಾಗಿ ತೃಪ್ತಿಕರ ಸೇವೆ ಒದಗಿಸಿದರೆ ಗ್ರಾಹಕರು ಅದಕ್ಕೆ ಪ್ರತಿಯಾಗಿ ಸ್ವ ಇಚ್ಛೆಯಿಂದ ಚಾಲಕರ ಖುಷಿಗಾಗಿ ಕೊಡುವಂಥದ್ದಾಗಿದೆ. ಆದರೆ, ಕ್ಯಾಬ್‌ಗಳವರು ಟಿಪ್ಸ್‌ ಅನ್ನು ಕ್ಯಾಬ್‌ ಬುಕ್‌ ಮಾಡುವಾಗಲೇ ಮುಂಗಡವಾಗಿ ಪಡೆಯುತ್ತಿದ್ದವು. ಈಗಿದಕ್ಕೆ ಬ್ರೇಕ್‌ ಬಿದ್ದಿದೆ.
ಅನೇಕ ಗ್ರಾಹಕರು ಮುಂಗಡ ಟಿಪ್ಸ್‌ ಬಗ್ಗೆ NCH ಪೋರ್ಟಲ್‌ ಮೂಲಕ ದೂರು ನೀಡಿ ಕೇಂದ್ರದ ಗಮನ ಸೆಳೆದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಪ್ರಲ್ಹಾದ ಜೋಶಿ ಅವರು ಇತ್ತೀಚೆಗಷ್ಟೇ ಕ್ಯಾಬ್‌ ಕಂಪನಿಗಳ ವಿರುದ್ಧ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರಕ್ಕೆ ಆದೇಶಿಸಿದ್ದರು. ಅದರಂತೆ CCPA ಓಲಾ ಸೇರಿದಂತೆ ಕ್ಯಾಬ್‌ ಕಂಪನಿಗಳಿಗೆ ನೋಟಿಸ್‌ ಜಾರಿ ಮಾಡಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಯಿತು.
CCPA ಗ್ರಾಹಕರ ಬೆಂಬಲಕ್ಕೆ ನಿಲ್ಲುತ್ತಲೇ ಈಗ ಕ್ಯಾಬ್‌ ಕಂಪನಿಗಳು ಎಚ್ಚೆತ್ತುಕೊಂಡಿವೆ. ನೋಟಿಸ್‌ ಪಡೆದ ಕೆಲವೇ ದಿನಗಳಲ್ಲಿ ಗ್ರಾಹಕರು ಬುಕ್‌ ಮಾಡುತ್ತಿದ್ದ ಅಪ್ಲಿಕೇಶನ್‌ಗಳಲ್ಲಿ ಈಗ ʼಅಡ್ವಾನ್ಸ್‌ ಟಿಪ್ಸ್‌ʼ ಮಾಯವಾಗಿದೆ. ಆ ಜಾಗದಲ್ಲಿ ʼಸ್ವಯಂ ಚಾಲಿತ ಟಿಪ್ಸ್‌ʼ ಮತ್ತು ಐಚ್ಛಿಕ ಟಿಪ್ಸ್‌ʼ ಎಂಬ ಪದ ಹುಟ್ಟಿಕೊಂಡಿದೆ. ಇದರ ಪ್ರಕಾರ ಗ್ರಾಹಕರು ಇನ್ನು ಮುಂಗಡವಾಗಿ ಟಿಪ್ಸ್‌ ಭರಿಸಬೇಕಿಲ್ಲ. ಅಲ್ಲದೇ, ಕಂಪನಿಗಳು ಟಿಪ್ಸ್‌ಗಾಗಿ ಗ್ರಾಹಕರ ಮೇಲೆ ಯಾವುದೇ ರೂಪದ ಒತ್ತಾಯ ಸಹ ಮಾಡುವಂತಿಲ್ಲ. ಟಿಪ್ಸ್‌ ಎನ್ನುವುದು ʼಸ್ವ ಇಚ್ಛೆʼ ಎನ್ನುವಂಥ ಗ್ರಾಹಕರ ನ್ಯಾಯಸಮ್ಮತ ನಿಲುವನ್ನು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಎತ್ತಿ ಹಿಡಿದಿದ್ದಾರೆ.
ಯಾತ್ರಿ ಮತ್ತು ಓಲಾದಂತಹ ಪ್ಲಾಟ್‌ ಫಾರ್ಮ್‌ಗಳಲ್ಲಿ ಈಗ ಗ್ರಾಹಕರು ಟಿಪ್ಸ್‌ ಆಯ್ಕೆಯನ್ನು ಬಿಟ್ಟುಬಿಡಬಹುದು. ಉಬರ್ ʼಸ್ವಯಂ ಚಾಲಿತʼ ಲೇಬಲ್ ಪರಿಚಯಿಸಿಲ್ಲವಾದರೂ ಬುಕಿಂಗ್ ಪ್ರಕ್ರಿಯೆಯಲ್ಲಿ ಮೇಲ್ನೋಟಕ್ಕೆ ಅಡ್ವಾನ್ಸ್‌ ಟಿಪ್ ಕಾಣಿಸಿಕೊಳ್ಳದಂತೆ ಅಪ್ಲಿಕೇಷನ್‌ ಅನ್ನು ಪರಿವರ್ತಿಸಿದಂತೆ ಗೋಚರಿಸಿದೆ.
ಕ್ಯಾಬ್‌ ಬುಕ್‌ ಮಾಡಲು ನಿತ್ಯವೂ ಓಲಾ, ಉಬರ್‌ ರೈಡ್ ಅಪ್ಲಿಕೇಶನ್‌ಗಳನ್ನು ಬಳಸುತ್ತೇವೆ. ಕೆಲ ವಾರಗಳ ಹಿಂದೆ ಬುಕ್‌ ಮಾಡುವಾಗಲೇ ಅಪ್ಲಿಕೇಶನ್ ಅಲ್ಲಿ ಟಿಪ್ಸ್‌ ಭರಿಸಬೇಕಿತ್ತು. ಸೇವೆಗೂ ಮೊದಲೇ ಟಿಪ್ಸ್‌ ನೀಡುವುದು ವಿಚಿತ್ರವೆನಿಸಿತ್ತು. ಆದರೆ, ಈಗ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಬಳಿಕ ಅಪ್ಲಿಕೇಷನ್‌ಗಳಲ್ಲಿ ನವೀಕರಣ ಕಂಡುಬಂದಿದೆ. ಟಿಪ್ ಬಾಕ್ಸ್‌ ಪಕ್ಕದಲ್ಲಿ ʼಸ್ವಯಂ ಪ್ರೇರಿತ’ ಮತ್ತು ʼಟಿಪ್‌ ಐಚ್ಛಿಕʼ ಎಂಬ ಸಣ್ಣ ಲೇಬಲ್ ಕಾಣಿಸುತ್ತಿದೆ. ಇದರಿಂದ ಒತ್ತಾಯ ಪೂರ್ವಕ ಟಿಪ್ಸ್‌ ವಸೂಲಿ ತಪ್ಪಿದೆ ಎಂದು ಖುದ್ದು ಗ್ರಾಹಕರೇ ಸಂತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ.
ಕ್ಯಾಬ್‌ನವರು ಗ್ರಾಹಕರಿಂದ ಬುಕ್‌ ಮಾಡುವಾಗಲೇ ಟಿಪ್ಸ್‌ ಸ್ವೀಕರಿಸುತ್ತಿರುವುದನ್ನು ಕೇಳಿ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ʼಓಲಾ, ನಮ್ಮ ಯಾತ್ರಿಗಳು ಬುಕಿಂಗ್‌ ವೇಳೆ ಮುಂಗಡ ಟಿಪ್ಸ್‌ ಪಡೆಯುವ ಈ ಕ್ರಮ ಶೋಷಣೆ ಮತ್ತು ವಂಚನೆಯಿಂದ ಕೂಡಿದ್ದು, ಇದು ಅನ್ಯಾಯದ ವ್ಯಾಪಾರ-ವ್ಯವಹಾರಿಕ ಪದ್ಧತಿ ಎಂದು ಆಕ್ಷೇಪಿಸಿದ್ದರು.

*ಟಿಪ್ಸ್‌ ವಂಚನೆ ತಿದ್ದಿಕೊಂಡ ಕ್ಯಾಬ್‌ಗಳು; ಸಚಿವ ಜೋಶಿ ಸ್ವಾಗತ:*
ಕ್ಯಾಬ್‌ಗಳು ಮುಂಗಡ ಟಿಪ್ಸ್‌ ಪಡೆಯುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದೆ. ಅದರಂತೆ ಕ್ರಮವಾಗಿದೆ. ಕ್ಯಾಬ್‌ಗಳವರು ತಪ್ಪು ತಿದ್ದಿಕೊಂಡಿರುವುದು ಸಂತಸದ ಸಂಗತಿ. CCPA ಇತರ ಅರ್ಜಿಗಳನ್ನೂ ತನಿಖೆ ಮಾಡುತ್ತದೆ. ಇ ಅಪ್ಲಿಕೇಷನ್‌ಗಳ ಮೇಲೆ ಮತ್ತಷ್ಟು ನಿಗಾ ಇಡುತ್ತದೆ. ವಂಚನೆ ಕಂಡುಬಂದರೆ ನೊಟೀಸ್‌ ನೀಡಿ ಕಠಿಣ ಕ್ರಮ ಕೈಗೊಳ್ಳಲಾಗುವುದುʼ ಎಂದು ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು