ಇತ್ತೀಚಿನ ಸುದ್ದಿ
ಬಂಟ್ವಾಳ : ಅಬ್ದುಲ್ ರಹೀಮಾನ್ ಹತ್ಯೆ ಪ್ರಕರಣ ; ಸುಮಿತ್, ದೀಪಕ್ ಸೇರಿ 15 ಜನರ ವಿರುದ್ಧ ಪ್ರಕರಣ ದಾಖಲು
28/05/2025, 16:20

ಮಂಗಳೂರು (reporterkarnataka.com)
ಬಂಟ್ವಾಳದ ಕೊಳತ್ತಮಜಲಿನಲ್ಲಿ ನಡೆದ ಅಬ್ದುಲ್ ರಹಿಮಾನ್ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಮಂದಿಯ ವಿರುದ್ದ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಹತ್ಯೆಯ ಸಂದರ್ಭ ಗಾಯಗೊಂಡ ಖಲಂದರ್ ಶಫಿ ಮಾಹಿತಿ ಅನ್ವಯ ನಿಸಾರ್ ಎಂಬವರು ದೂರು ನೀಡಿದ್ದು, ಎಫ್ಐಆರ್ ದಾಖಲಿಸಲಾಗಿದೆ. ರಹಿಮಾನ್ ಪರಿಚಯಸ್ಥರೇ ಆದ ದೀಪಕ್, ಸುಮಿತ್ ಸೇರಿ ಒಟ್ಟು 15 ಜನರ ವಿರುದ್ದ ಎಫ್ಐಆರ್ ದಾಖಲಾಗಿದೆ
ಬಿಎನ್ ಎಸ್ 103, 109, 118(1), 118(2), 190, 191(1), 191(2), 191(3) ನಡಿ ಪ್ರಕರಣ ದಾಖಲಾಗಿದ್ದು, ಅಬ್ದುಲ್ ರಹಿಮಾನ್ ಮತ್ತು ಕಲಂದರ್ ಶಾಫಿ ಅವರು ಪಿಕ್ ಅಪ್ ವಾಹನದಲ್ಲಿ ಮರಳು ಲೋಡ್ ಮಾಡಿ ಕುರಿಯಾಳ ಗ್ರಾಮದ ಇರಾಕೋಡಿಯ ರಾಜೀವಿ ಎಂಬವರ ಮನೆ ಬಳಿ ಇಳಿಸುತ್ತಿದ್ದರು.
ಈ ವೇಳೆ ಏಕಾಏಕಿ ದಾಳಿ ನಡೆದಿದ್ದು, ಚಾಲಕನ ಸೀಟಿನಲ್ಲಿದ್ದ ಅಬ್ದುಲ್ ರಹಿಮಾನ್ ಅವರನ್ನು ಹೊರಗೆ ಎಳೆದು ತಲವಾರು,ಚೂರಿ, ರಾಡ್ ಗಳೊಂದಿಗೆ ಯದ್ವಾ- ತದ್ವಾ ದಾಳಿ ಮಾಡಿದ್ದಾರೆ.
ಅಲ್ಲಿದ್ದವರು ಕೂಗಾಡಿದ್ದರಿಂದ ಹಲ್ಲೆ ಮಾಡಿದ ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ಪರಾರಿಯಾಗಿದ್ದಾರೆ. ಹಲ್ಲೆಗೈದವರ ಪೈಕಿ ಇಬ್ಬರು ಪರಿಚಯಸ್ಥರು ಎಂದು ಹಲ್ಲೆಗೊಳಗಾಗಿ ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಕಲಂದರ್ ಶಾಫಿ ಆಸ್ಪತ್ರೆಗೆ ದಾಖಲಿಸಿದ್ದ ಮುಹಮ್ಮದ್ ನಿಸಾರ್ ಎಂಬವರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.