ಇತ್ತೀಚಿನ ಸುದ್ದಿ
Rajarajeshwari Temple | ಏ.6ರಂದು ಅಮ್ಮನೆಡೆಗೆ ನಮ್ಮ ನಡಿಗೆ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಪಾದಯಾತ್ರೆ
02/04/2025, 22:46
ಜಯಾನಂದ ಪೆರಾಜೆ ಬಂಟ್ವಾಳ
info.reporterkarnataka@gmail.com
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ 5ನೇ ವರ್ಷದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಪಾದಯಾತ್ರೆ ಏಪ್ರಿಲ್ 6ರಂದು ಬೆಳಿಗ್ಗೆ 5.30ಕ್ಕೆ ಏಕಕಾಲದಲ್ಲಿ ಬಿ.ಸಿ. ರೋಡಿನ ಕೈಕಂಬ ಪೊಳಲಿ ದ್ವಾರದಿಂದ ಮತ್ತು ಗುರುಪುರ ಕೈಕಂಬದಿಂದ ಆರಂಭಗೊಂಡು 9 ಗಂಟೆಗೆ ಪೊಳಲಿಯಲ್ಲಿ ಸಂಗಮವಾಗಲಿದೆ ಎಂದು ವಿಹಿಪ ಬಂಟ್ವಾಳ ಪ್ರಖಂಡ ಅಧ್ಯಕ್ಷ, ನ್ಯಾಯವಾದಿ ಪ್ರಸಾದ ಕುಮಾರ್ ರೈ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಟ್ವಾಳ ಶ್ರೀ ರಾಜರಾಜೇಶ್ವರಿ ದೇಗುಲವು ಇತಿಹಾಸ ಪ್ರಸಿದ್ಧ ದೇವಾಲಯವಾಗಿದೆ. ಎ ಗ್ರೇಡ್ ಮಾನ್ಯತೆ ಹೊಂದಿದೆ. ವಾರ್ಷಿಕ ವಾಗಿ ಸುಮಾರು ರೂ.8 ಕೋಟಿಗಳಷ್ಟು ಆದಾಯವಿದೆ. ದೇವಸ್ಥಾನದ ಆದಾಯವು ದೇವಾಲಯದ ಭಕ್ತ ಜನರಿಗೆ ವಿನಿಯೋಗವಾಗಬೇಕು ಎಂಬ ಬೇಡಿಕೆಯ ಮನವಿಯನ್ನು ದೇವಾಲಯದ ಆಡಳಿತ ಮಂಡಳಿಗೆ ಸಲ್ಲಿಸಲಾಗುವುದು ಎಂದು ಹೇಳಿದರು.
ದೇವಾಲಯಕ್ಕೆ ಬರುವ ಭಕ್ತರಿಗೆ ಹಿಂದು ಸಂಸ್ಕೃತಿಗೆ ಪೂರಕವಾದ ವಸ್ತ್ರ ಸಂಹಿತೆ ಕಟ್ಟುನಿಟ್ಟಾಗಿ ಪಾಲನೆಯಾಗಬೇಕು. ಸುಸಜ್ಜಿತ ಗೋಶಾಲೆ ನಿರ್ಮಾಣ ಮತ್ತು ನಿರ್ವಹಣೆ ಮಾಡಬೇಕು. ಬಾಲಸಂಸ್ಕಾರ ಕೇಂದ್ರ ತೆರೆದು ಧಾರ್ಮಿಕ ಶಿಕ್ಶಣ ನೀಡುವ ವ್ಯವಸ್ಥೆ ಮಾಡಬೇಕು.ಉಚಿತ ಸಾಮೂಹಿಕ ವಿವಾಹ, ಉತ್ಸವಗಳ ಸಂದರ್ಭದಲ್ಲಿ ರಾತ್ರಿ ಭೋಜನ ವ್ಯವಸ್ಥೆ ಮಾಡಬೇಕು. ದೇವಸ್ಥಾನದ ಪರಿಸರದಲ್ಲಿ ವ್ಯಾಪಾರ ಇತ್ಯಾದಿಗಳಿಗೆ ಅನ್ಯಮತೀಯರಿಗೆ ಅವಕಾಶ ನೀಡಬಾರದು ಎಂದು ಮನವಿಯಲ್ಲಿ ಒತ್ತಾಯಿಸಲಾಗುವುದು ಎಂದು ತಿಳಿಸಿದ್ದಾರೆ.
ವಿಹಿಪಂ, ಭಜರಂಗ ದಳ ಪದಾಧಿಕಾರಿಗಳಾದ ಕ.ಕೃಷ್ಣಪ್ಪ, ಭರತ್ ಕುಮ್ಡೇಲು, ರಾಜೇಶ ಗಂಜಿಮಠ, ಸಂತೋಷ ಸರಪಾಡಿ, ಕೇಶವ ದೈಪಲ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.














