ಇತ್ತೀಚಿನ ಸುದ್ದಿ
ಯುವನಿಧಿ ಯೋಜನೆ; ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಪ್ರಚಾರಕ್ಕೆ ಕ್ರಮ: ಸಚಿವ ಡಾ. ಶರಣಪ್ರಕಾಶ್ ಪಾಟೀಲ್
18/03/2025, 09:17

ಬೆಂಗಳೂರು (reporterkarnataka.com): ಯುವನಿಧಿ ಯೋಜನೆಯ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಪ್ರಚಾರ ಕೈಗೊಳ್ಳಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಹೇಳಿದರು.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯುವ ನಿಧಿಯೋಜನೆಯಡಿ 2025ನೇ ಮಾರ್ಚ್ 10ರ ಅಂತ್ಯಕ್ಕೆ ಒಟ್ಟು 2,62,207 ಅಭ್ಯರ್ಥಿಗಳು ನೋಂದಾಯಿಸಿರುತ್ತಾರೆ. ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಆಕ್ಟ್ 2023ರ ಸೆಕ್ಷನ್ 6 ಅನ್ವಯ ಸಂಬಂಧಿಸಿದ ಫಲಾನುಭವಿ ದತ್ತಾಂಶವನ್ನು ಅವರ ಒಪ್ಪುಗೆ ಇಲ್ಲದೆ ಮೊತ್ತೊಬ್ಬರಿಗೆ ಹಂಚಲು ಅವಕಾಶ ಇರುವುದಿಲ್ಲ. ಯುವನಿಧಿ ಯೋಜನೆಯಡಿ ನೋಂದಾಯಿಸಿದ ಫಲಾನುಭವಿಗಳ ವೈಯಕ್ತಿಕ ದತ್ತಾಂಶವನ್ನು / ಪೂರ್ಣ ಮಾಹಿತಿಯುಳ್ಳ ಪಟ್ಟಿಯನ್ನು ಫಲಾನುಭವಿಗಳ ಒಪ್ಪಿಗೆ ಇಲ್ಲದೆ ಮೂರನೇ ವ್ಯಕ್ತಿಗಳಿಗೆ ಒದಗಿಸಲು ಅವಕಾಶ ವಿರುವುದಿಲ್ಲ.
ಯುವನಿಧಿ ಯೋಜನೆಯ ಪ್ರಯೋಜನ ಪಡೆಯಲು ವಿದ್ಯಾರ್ಥಿಗಳು ಪಾಸಾಗಿ 6 ತಿಂಗಳ (180 ದಿನ) ಒಳಗೆ ನೌಕರಿ ಸಿಗಲಿಲ್ಲ ಎಂದಾಗ ಮಾತ್ರ ಯುವನಿಧಿ ಯೋಜನೆಯಡಿ ಬರುತ್ತಾರೆ. ಕರ್ನಾಟಕ ರಹವಾಸಿಯಾಗಿರುವುದಕ್ಕೆ ದಾಖಲೆ ಪರಿಶೀಲನೆಗೆ ಡಿಡಿಪಿಐ, ಡಿಡಿಪಿಯು ಮತ್ತು ಡಿಇಇಒ ಇವರ ಲಾಗಿನ್ಗಳಲ್ಲಿ ಒಟ್ಟು 16,648 ಅರ್ಜಿಗಳು ಭೌತಿಕ ಪರಿಶೀಲನೆ ಬಾಕಿ ಇರುತ್ತವೆ. ಯುವನಿಧಿ ಯೋಜನೆಯಡಿ ಜನವರಿ 2025ರ ಅಂತ್ಯಕ್ಕೆ 1,74,170 ಫಲನುಭವಿಗಳಿಗೆ ನಿರುದ್ಯೋಗ ಭತ್ಯೆಯನ್ನು ನೇರ ನಗದು ವರ್ಗಾವಣೆ ಮೂಲಕ ಪಾವತಿಸಲಾಗಿದೆ ಎಂದು ತಿಳಿಸಿದರು.
*ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ಕ್ರಮ:*
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಜಿಟಿಟಿಸಿ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಮುಖೇನ 2065 ಅಭ್ಯರ್ಥಿಗಳಿಗೆ ತರಬೇತಿಯು ಪೂರ್ಣಗೊಂಡಿದ್ದು, 9130 ಅಭ್ಯರ್ಥಿಗಳಿಗೆ ತರಬೇತಿ ನಡೆಯುತ್ತಿರುತ್ತದೆ. ಹಾಗೂ ಐಎಲ್ಸಿ ಮತ್ತು ಪ್ಯೂಚರ್ ಸ್ಕಿಲ್ಸ್ ಕಾರ್ಯಕ್ರಮದ ಮುಖೇನ 120 ಅಭ್ಯಥಿಗಳಿಗೆ ತರಬೇತಿ ಪೂರ್ಣಗೊಂಡಿದ್ದು, 717 ಅಭ್ಯರ್ಥಿಗಳಿಗೆ ತರಬೇತಿ ನಡೆಯುತ್ತಿರುತ್ತದೆ. ಉಳಿದಂತೆ ಕಲಿಕೆ ಜೊತೆ ಕೌಶಲ್ಯ ಕಾರ್ಯಕ್ರಮದಡಿ 28893 ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ ತರಬೇತಿಯನ್ನು ನೀಡಲಾಗಿದೆ ಎಂದು ತಿಳಿಸಿದರು.