ಇತ್ತೀಚಿನ ಸುದ್ದಿ
Karavali | ಮಹಿಳೆಯರ ಆತ್ಮಸ್ಥೈರ್ಯವನ್ನು ಸದಾ ಪ್ರೇರೇಪಿಸುವ ಶಕ್ತಿಯೇ ಸಿರಿ: ಲೇಖಕಿ ಭುವನೇಶ್ವರಿ ಹೆಗಡೆ
08/03/2025, 00:27

ಚಿತ್ರ:ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ಕರಾವಳಿ ಪ್ರದೇಶದಲ್ಲಿ ಸತ್ಯ- ಧರ್ಮ – ನ್ಯಾಯಗಳ ಪ್ರಖರ ಪ್ರತಿಪಾದಕಿಯಾಗಿ ಸ್ತ್ರೀಯರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿದ ದೇವತೆಯೇ ಸಿರಿ. ಮಹಿಳೆಯರ ಆತ್ಮಸ್ಥೈರ್ಯವನ್ನು ಸದಾ ಪ್ರೇರೇಪಿಸುವ ಶಕ್ತಿ, ಇಲ್ಲಿಯ ನಂಬಿಕೆಯ ದೈವವಾದ’ಸಿರಿ’ಯೇ ಆಗಿದ್ದಾಳೆ ಎಂದು ಖ್ಯಾತ ಲೇಖಕಿ ಭುವನೇಶ್ವರಿ ಹೆಗಡೆ ಹೇಳಿದರು.
ನಗರದ ನ್ಯಾಯಾಲಯದ ಆವರಣದಲ್ಲಿ ಮಂಗಳೂರು ಬಾರ್ ಅಸೋಸಿಯೇಷನ್ ಹಾಗೂ ನ್ಯಾಯಾಲಯದ ಉದ್ಯೋಗಿಗಳ ಸಂಘಗಳು ಜಂಟಿಯಾಗಿ ಏರ್ಪಡಿಸಿದ್ದ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ದ.ಕ. ಜಿಲ್ಲಾ ಮತ್ತು ಸೆಷನ್ ಹೆಚ್ಚುವರಿ ನ್ಯಾಯಾಧೀಶರಾದ ಪ್ರೀತಿ. ಕೆ.ಪಿ. ಅವರು ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮಹಿಳಾ ಹೋರಾಟದ ಹಿನ್ನೆಲೆಯನ್ನು ವಿವರಿಸಿ ಅದಕ್ಕಾಗಿ ಹೋರಾಡಿದ ಮಹಿಳೆಯರನ್ನು ಸ್ಮರಿಸಿದರು.
ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿ, ದಕ್ಷಿಣ ಕನ್ನಡ ಸಂಚಾರ ವಿಭಾಗದ ಎಸಿಪಿ ನಜ್ಮಾ ಫಾರೂಕ್ ಅವರು ಇಂದಿನ ಸುಶಿಕ್ಷಿತ ಮಹಿಳೆಯರ ಎದುರು ಅನೇಕ ಸವಾಲುಗಳಿವೆ. ತಮ್ಮ ಆತ್ಮವಿಶ್ವಾಸದಿಂದ ಅವುಗಳನ್ನು ಎದುರಿಸುವ ಛಲ ಹೊಂದಬೇಕು ಎಂದರು.
ವಿವಿಧ ವಿಭಾಗಗಳ ಹಿರಿಯ ನ್ಯಾಯಾಧೀಶರುಗಳು, ಹಿರಿಕಿರಿಯ ವಕೀಲೆಯರು, ಸಿಬ್ಬಂದಿಗಳು ಹಾಜರಿದ್ದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಯೋತಿ ಅವರು ವಹಿಸಿದ್ದರು. ರಶ್ಮಿ ವಂದಿಸಿದರು.ವಕೀಲ ಸಾಧಕಿಯರನ್ನು ಸನ್ಮಾನಿಸಲಾಯಿತು.
ಕೊನೆಯಲ್ಲಿ ಮನರಂಜನಾ ಕಾರ್ಯಕ್ರಮಗಳು ನಡೆದವು.