ಇತ್ತೀಚಿನ ಸುದ್ದಿ
ನಂಜನಗೂಡು: ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಹುಟ್ಟು ಹಬ್ಬದ ಪ್ರಯುಕ್ತ ರೈತರ ಜನಜಾಗೃತಿ ಸಭೆ
14/02/2025, 15:41

ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಏಕೀಕರಣದ ಹಾದಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ಹಸಿರುಸೇನಾನಿ ರೈತ ನಾಯಕ ಪ್ರೊ. ನಂಜುಂಡಸ್ವಾಮಿಯವರ 89ನೇ ಜನ್ಮದಿನಾಚರಣೆ ಅಂಗವಾಗಿ ನಂಜನಗೂಡು ತಾಲೂಕಿನ ಕವಲಂದೆ ಹೋಬಳಿ ಮಟ್ಟದ ರೈತರ ಜನಜಾಗೃತಿ ಸಭೆಯನ್ನು ಮಲ್ಲಹಳ್ಳಿ ಗ್ರಾಮದಲ್ಲಿ ಆಯೋಜನೆ ಮಾಡಲಾಗಿಯಿತು.
ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಪ್ರಾಸ್ತಾವಿಕವಾಗಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ವಿದ್ಯಾಸಾಗರ್ ಮಾತನಾಡಿ, ರೈತರು ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡ ರೈತ ಸಂಘ ನಿಮ್ಮೊಟ್ಟಿಗೆ ಇದೆ ಹೆದರಬೇಡಿ ಎಂಬ ಧೈರ್ಯ ತುಂಬುವ ಮಾತುಗಳನ್ನಾಡಿ ಯಾವುದೇ ಬ್ಯಾಂಕ್, ಮೈಕ್ರೋ ಫೈನಾನ್ಸ್ ಅಥವಾ ಖಾಸಗಿ ವ್ಯಕ್ತಿಗಳಿಂದ ಹೆಚ್ಚಿನ ಬಡ್ಡಿಗೆ ಸಿಲುಕಿ ಕಿರುಕುಳ ನೀಡಿದರೆ ನಮ್ಮ ಗಮನಕ್ಕೆ ತನ್ನಿ ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಕಿವಿಮಾತು ಹೇಳುವ ಮೂಲಕ ರೈತರ ಹೋರಾಟದ ಬಗ್ಗೆ ವಿವರಿಸಿದರು.
ಪ್ರೊ. ನಂಜುಂಡಸ್ವಾಮಿಯವರ ಪುತ್ರ ಪಚ್ಚೆನಂಜುಂಡಸ್ವಾಮಿ ಮಾತನಾಡಿ ರಾಜ್ಯದಲ್ಲೇ ಮೊದಲಿಗೆ ರೈತರ ಸಾಲ ಮನ್ನಾ, ಕೃಷಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಸೇರಿದಂತೆ ಹಲವಾರು ರೈತ ಪರ ಕಾರ್ಯಕ್ರಮಗಳನ್ನು ತಮ್ಮ ಹೋರಾಟದ ಮೂಲಕ ಜಾರಿಗೆ ತಂದ ಮಹಾನ್ ಹೋರಾಟಗಾರರಾಗಿದ್ದವರು ನಂಜುಂಡಸ್ವಾಮಿಯವರು ಹಾಗಾಗಿ ಇಂದು ಇಡೀ ರಾಜ್ಯದ್ಯಂತ ಹಳ್ಳಿ ಹಳ್ಳಿಗಳಲ್ಲಿ ರೈತರು ಸ್ವಯಂ ಪ್ರೇರಣೆಯಿಂದ ಅವರ ಜನ್ಮದಿನಾಚರಣೆಯನ್ನು ರೈತೋತ್ಸವ ದಿನವೆಂದು ಆಚರಣೆ ಮಾಡುತ್ತಿದ್ದಾರೆ ಎಂದರು.
ರೈತರ ಹಕ್ಕು ಮತ್ತು ಸಮಸ್ಯೆಗಳಿಗೆ ರೈತ ಸಂಘಟನೆ ಒಂದೇ ಪರಿಹಾರ ಅದಕ್ಕಾಗಿ ರೈತರು ಒಗ್ಗಟ್ಟಾಗಿ ರೈತ ಸಂಘಟನೆಗೆ ಬನ್ನಿ ಎಂದು ಕರೆ ನೀಡಿದರು.
ಇದೇ ಸಂದರ್ಭ ಗ್ರಾಮದ ಹಲವಾರು ಮುಖಂಡರು ರೈತ ಸಂಘಟನೆ ಸೇರ್ಪಡೆಗೊಂಡರು.
ಸೇರ್ಪಡೆಗೊಂಡ ಮುಖಂಡರನ್ನು ವೇದಿಕೆ ಮೇಲಿನ ಗಣ್ಯರು ಹಸಿರು ಶಾಲು ಹೋದಿಸುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಸಾಹಿತಿ ಕಾಳೇಗೌಡ ನಾಗವಾರ ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಿಮ್ಮಾವುರಘು,ತಾಲೂಕು ಅಧ್ಯಕ್ಷ ಸತೀಶ್ ರಾವ್ , ಮುಖಂಡರುಗಳಾದ ಬಂಗಾರಸ್ವಾಮಿ, ಕಳ್ಳಿಪುರ ಮಹದೇವಸ್ವಾಮಿ, ಶ್ವೇತಾ, ಶಿವಣ್ಣ, ಕೆಂಪಣ್ಣ , ರವಿ, ತಿಮ್ಮಣ್ಣ ,ಮಾದನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.