ಇತ್ತೀಚಿನ ಸುದ್ದಿ
ಇನ್ವೆಸ್ಟ್ ಕರ್ನಾಟಕ; ಪ್ರಗತಿಗೆ ಹೊಸ ದಿಕ್ಕು ತೋರಿಸಲಿರುವ ದಿಗ್ಗಜರು: ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್
06/02/2025, 09:18

ಬೆಂಗಳೂರು(reporterkarnataka.com): ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಇನ್ವೆಸ್ಟ್ ಕರ್ನಾಟಕ 2025 ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ದೇಶ – ವಿದೇಶಗಳ ಉದ್ಯಮ ದಿಗ್ಗಜರು, ನೀತಿ ನಿರೂಪಕರು, ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರಗಳ ಪರಿಣತರು, ಹೂಡಿಕೆ ಮತ್ತು ನವೋದ್ಯಮ ಸಾಹಸಿಗರು ವಿವಿಧ ವಿಚಾರಗೋಷ್ಠಿಗಳಲ್ಲಿ ಮಾತನಾಡಲಿದ್ದಾರೆ.
ʼಫೆಬ್ರುವರಿ 12 ರಿಂದ 14ರವರೆಗೆ ನಡೆಯಲಿರುವ ಸಮಾವೇಶದಲ್ಲಿ 25ಕ್ಕೂ ಹೆಚ್ಚು ವಿಚಾರಪ್ರಚೋದಕ ಗೋಷ್ಠಿಗಳಲ್ಲಿ 75ಕ್ಕೂ ಹೆಚ್ಚು ಗಣ್ಯ ಭಾಷಣಕಾರರು ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ. ವಿಭಿನ್ನ ಕ್ಷೇತ್ರಗಳ ಈ ದಾರ್ಶನಿಕ ಮುಖಂಡರು ಉದ್ದಿಮೆ ವಹಿವಾಟು, ಹಣಕಾಸು ಮತ್ತು ನಾವೀನ್ಯತೆ ಕ್ಷೇತ್ರದ ಭವಿಷ್ಯದ ಒಳನೋಟ ನೀಡಲಿದ್ದಾರೆʼ ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಅವರು ತಿಳಿಸಿದ್ದಾರೆ.
ʼಜಾಗತಿಕ ಉದ್ದಿಮೆಯ ಕನಸುಗಾರರಾದ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ, ಆದಿತ್ಯ ಬಿರ್ಲಾ ಗ್ರೂಪ್ನ ಅಧ್ಯಕ್ಷ ಕುಮಾರ್ ಮಂಗಳಂ ಬಿರ್ಲಾ, ಕಿರ್ಲೋಸ್ಕರ್ ಸಿಸ್ಟಮ್ಸ್ನ ಅಧ್ಯಕ್ಷೆ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಗೀತಾಂಜಲಿ ಕಿರ್ಲೋಸ್ಕರ್, ವೋಲ್ವೊ ಗ್ರೂಪ್ನ ಅಧ್ಯಕ್ಷ ಮಾರ್ಟಿನ್ ಲುಂಡ್ಸೆಡ್ಜ್ ಅವರು ಮಾತನಾಡಲಿದ್ದಾರೆ.
ʼನೀತಿ ನಿರೂಪಣೆ ಮತ್ತು ಆಡಳಿತ ಪರಿಣತರಾದ ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ತರೂರ್, ಗ್ರೀಸ್ನ ಮಾಜಿ ಪ್ರಧಾನಿ ಜಾರ್ಜ್ ಪಪಂಡ್ರೆಯು, ಭಾರತದ ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು ವಿಚಾರಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದಾರೆ.
ʼತಂತ್ರಜ್ಞಾನ ಮತ್ತು ನಾವೀನ್ಯತೆಗೆ ಸಂಬಂಧಿಸಿದ ವಿಚಾರಗೋಷ್ಠಿಯಲ್ಲಿ ಐಬಿಎಂ-ನ ಜಾಗತಿಕ ಸುಸ್ಥಿರತೆಯ ಮುಖಂಡ ಓಡೆ ಅಬ್ಬೊಶ್ , ಅಮೆರಿಕದ ಇಂಧನ ಇಲಾಖೆಯ ಮುಖ್ಯ ಮಾಹಿತಿ ಅಧಿಕಾರಿ ಅಕಿಸ್ ಇವಾಂಜೆಲಿಡಿಸ್ ಅವರು ಭಾಗವಹಿಸಲಿದ್ದಾರೆ.
ʼಹೂಡಿಕೆ ಹಾಗೂ ನವೋದ್ಯಮದ ದಿಗ್ಗಜರಾದ ಆ್ಯಕ್ಸೆಲ್ನ ಪಾರ್ಟನರ್ ಪ್ರಶಾಂತ್ ಪ್ರಕಾಶ್, ಜಿರೋಧಾ-ದ ಸಹ ಸ್ಥಾಪಕ ನಿಖಿಲ್ ಕಾಮತ್ ಅವರು ಸಾಹಸ ಉದ್ಯಮಕ್ಕೆ ಹೊಸ ದಿಕ್ಕು ತೋರಿಸಲಿದ್ದಾರೆ.
ʼಸಾಂಸ್ಕೃತಿಕ ಮತ್ತು ಸಾಮಾಜಿಕ ಬದಲಾವಣೆಯಲ್ಲಿ ಮುಂಚೂಣಿಯಲ್ಲಿರುವ ಬಯೊಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ, ಚಿತ್ರ ನಿರ್ಮಾಪಕಿ ಕಿರಣ್ ರಾವ್ ಅವರು ತಮ್ಮ ಚಿಂತನೆಗಳನ್ನು ಹಂಚಿಕೊಳ್ಳಲಿದ್ದಾರೆʼ ಎಂದು ಸಚಿವ ಪಾಟೀಲ್ ಅವರು ವಿವರಗಳನ್ನು ನೀಡಿದ್ದಾರೆ.