ಇತ್ತೀಚಿನ ಸುದ್ದಿ
ಆರೋಗ್ಯಕರ ಸಮಾಜ ಕಟ್ಟಲು ಸರ್ಕಾರದೊಂದಿಗೆ ಕೈಜೋಡಿಸಿ: ಸಮುದಾಯ ಆರೋಗ್ಯಾಧಿಕಾರಿಗಳಿಗೆ ಸಿಎಂ ಕರೆ
03/02/2025, 09:30
ಮೈಸೂರು(reporterkarnataka.com): ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆಗೆ ಪ್ರಯತ್ನಿಸಿ, ಆರೋಗ್ಯಕರ ಸಮಾಜವನ್ನು ಕಟ್ಟುವ ಕೆಲಸದಲ್ಲಿ ಸರ್ಕಾರದ ಜೊತೆಗೆ ಸಮುದಾಯ ಆರೋಗ್ಯ ಅಧಿಕಾರಿಗಳೂ ಕೈಜೋಡಿಸಬೇಕೆಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಇಂದು ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಗುತ್ತಿಗೆ ನೌಕರರ ಸಂಘ ಆಯೋಜಿಸಿದ್ದ ಸಮುದಾಯ ಆರೋಗ್ಯ ಅಧಿಕಾರಿಗಳ ಸಂರಕ್ಷಣಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
*ಜನರ ಆರೋಗ್ಯದ ಜಾಗೃತಿ ಮೂಡಿಸಬೇಕು:*
ಸಮುದಾಯ ಆರೋಗ್ಯದ ಸುಧಾರಣೆ ಸರ್ಕಾರ, ಇಲಾಖೆ ಹಾಗೂ ವೈದ್ಯರು ಹಾಗೂ ಇತರೆ ಸಿಬ್ಬಂದಿಗಳ ಜವಾಬ್ದಾರಿಯಾಗಿದೆ. ಜನರ ಆರೋಗ್ಯದ ಬಗ್ಗೆ ಮುತುವರ್ಜಿ ವಹಿಸುವ ಸಮುದಾಯ ಆರೋಗ್ಯ ಅಧಿಕಾರಿಗಳ ಬಗ್ಗೆ ಸರ್ಕಾರ ಕಾಳಜಿ ವಹಿಸುತ್ತದೆ. ರೋಗವನ್ನು ಪತ್ತೆಮಾಡುವ ಜೊತೆಗೆ ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಸಮುದಾಯ ಆರೋಗ್ಯಾಧಿಕಾರಿಗಳು ಮಾಡಬೇಕು. ಖಾಸಗಿ ಆಸ್ಪತ್ರೆಗಳಿಗೆ ಹೋಗಿ ದುಬಾರಿ ಚಿಕಿತ್ಸಾ ವೆಚ್ಚವನ್ನು ಭರಿಸಲಾಗದ ಬಡವರು ಸರ್ಕಾರಿ ಆಸ್ಪತ್ರೆಗಳ ಮೇಲೆ ಹೆಚ್ಚು ಅವಲಂಬಿತರಾಗಿರುತ್ತಾರೆ. ರೋಗದ ಚಿಕಿತ್ಸೆಗಿಂತಲೂ, ಅದರ ತಡೆಗಟ್ಟುವಿಕೆ ಉತ್ತಮ. ರೋಗ ಬರದಂತೆ ಜಾಗೃತಿ ವಹಿಸುವುದು ಮುಖ್ಯ. ಇದಕ್ಕೆ ಪೂರಕವಾಗಿ ಉತ್ತಮ ಪೌಷ್ಠಿಕ ಆಹಾರ ಮತ್ತು ಜೀವನಶೈಲಿಯನ್ನು ನಡೆಸಬೇಕು. ಆಹಾರಭದ್ರತೆ ಸಾಧಿಸಲು ಹೆಚ್ಚು ಬೆಳೆ ಬೆಳೆಯುವ ಉದ್ದೇಶದಿಂದ ಕೃಷಿಯಲ್ಲಿ ಹೆಚ್ಚು ರಾಸಾಯನಿಕಗಳನ್ನು ಬಳಸಾಗುತ್ತಿದ್ದು, ಹೊಸ ರೋಗಗಳು ಹುಟ್ಟಿಕೊಳ್ಳುತ್ತಿವೆ. ಈ ಸವಾಲನ್ನು ಆರೋಗ್ಯಾಧಿಕಾರಿಗಳು ಸಮರ್ಥವಾಗಿ ಎದುರಿಸಿ ಸಮುದಾಯದ ಆರೋಗ್ಯವನ್ನು ಕಾಪಾಡಬಹುದಾಗಿದೆ ಎಂದರು.
*ಬೇಡಿಕೆಗಳ ಪರಿಶೀಲಿಸಿ ತೀರ್ಮಾನ:* ಆರೋಗ್ಯಾಧಿಕಾರಿಗಳು ಇಟ್ಟಿರುವ ಬೇಡಿಕೆಗಳನ್ನು ಪರಿಶೀಲಿಸಿ ತೀರ್ಮಾನಿಸಲಾಗುವುದು. ಜನರ ಆರೋಗ್ಯ ರಕ್ಷಣೆಯ ಗುರುತರ ಜವಾಬ್ದಾರಿಯನ್ನು ನಿಭಾಯಿಸುವ ಸಮುದಾಯ ಆರೋಗ್ಯಾಧಿಕಾರಿಗಳ ಜೊತೆ ಸರ್ಕಾರ ಇರಲಿದೆ. ಸಮುದಾಯ ಆರೋಗ್ಯಾಧಿಕಾರಿಗಳಿಗೆ ಬೋನಸ್ ಹಾಗೂ ವೇತನ ಹೆಚ್ಚಳ ಹಾಗೂ ಅಂತರಜಿಲ್ಲಾ ವರ್ಗಾವಣೆ, ಆರೋಗ್ಯ ವಿಮೆ ಯೋಜನೆ ಜಾರಿ ಮಾಡುವ ಭರವಸೆಯನ್ನು ನೀಡಿದ ಮುಖ್ಯಮಂತ್ರಿಗಳು, ಗುತ್ತಿಗೆ ನೌಕರರನ್ನು ಖಾಯಂ ಗೊಳಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.