ಇತ್ತೀಚಿನ ಸುದ್ದಿ
ಹಲವೆಡೆ ಅಕ್ರಮ ಮರಳುಗಾರಿಕೆ ಮೇಲೆ ದಾಳಿ: 46 ಲಕ್ಷ ರೂ. ಮೌಲ್ಯದ 23 ಬೋಟುಗಳ ವಶ
05/10/2024, 10:19

ಮಂಗಳೂರು(reporterkarnataka.com): ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಗಳ ಮೇಲೆ ಶುಕ್ರವಾರ ದಾಳಿ ನಡೆಸಿದ ಅಧಿಕಾರಿಗಳ ತಂಡ, 23 ಬೋಟುಗಳನ್ನು ವಶಪಡಿಸಿದೆ.
ಕಂದಾಯ, ಗಣಿ ಇಲಾಖೆ ಮತ್ತು ಪೊಲೀಸರ ಜಂಟೀ ತಂಡವು ನೇತ್ರಾವತಿ ನದಿ ತೀರದ ವಳಚ್ಚಿಲ್, ಮಾರಿಪಳ್ಳ, ಪುದು ಮತ್ತಿತರ ಕಡೆ ಬೃಹತ್ ಕಾರ್ಯಾಚರಣೆ ನಡೆಸಿ, ಅಕ್ರಮ ಮರಳುಗಾರಿಕೆಗೆ ಬಳಸುತ್ತಿದ್ದ 23 ಬೋಟುಗಳನ್ನು ವಶಪಡಿಸಿದೆ.
ಬೋಟುಗಳ ಒಟ್ಟು ಅಂದಾಜು ಮೌಲ್ಯ ರೂ. 46 ಲಕ್ಷಗಳಾಗಿದ್ದು, ಇವುಗಳನ್ನು ಸದ್ಯ ಅಡ್ಯಾರ್ ಕಟ್ಟೆ ಸಮೀಪ ತಂದಿಡಲಾಗಿದೆ.
ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ ಅವರ ಮಾರ್ಗದರ್ಶನದಲ್ಲಿ ನಡೆದ ಈ ದಾಳಿ ಕಾರ್ಯಾಚರಣೆಯಲ್ಲಿ ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಾದ ಗಿರೀಶ್ ಮೋಹನ್, ಕೃಷ್ಣವೇಣಿ, ಮಹದೇಶ್ವರ್, ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.