ಇತ್ತೀಚಿನ ಸುದ್ದಿ
ಚಾಮರಾಜನಗರ: ಮತದಾನ ಬಹಿಷ್ಕರಿಸಿದ್ದ ಗ್ರಾಮಸ್ಥರಿಂದ ಮತಗಟ್ಟೆ ಮೇಲೆ ದಾಳಿ; ಮತಯಂತ್ರ, ಪೀಠೋಪಕರಣ ಧ್ವಂಸ
26/04/2024, 19:33
ಮೈಸೂರು(reporterkarnataka.com): ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲಿ ಚುನಾವಣಾ ಬಹಿಷ್ಕಾರ ಹಾಕಿದ 5 ಗ್ರಾಮಗಳ ಗ್ರಾಮಸ್ಥರ ಪೈಕಿ ಕೆಲವು ಗ್ರಾಮಗಳ ಮತದಾರರು ಮತಗಟ್ಟೆಯ ಮೇಲೆ ದಾಳಿ ನಡೆಸಿ, ಮತಯಂತ್ರ, ಪೀಠೋಪಕರಣಗಳನ್ನು ಧ್ವಂಸ ಮಾಡಿದ ಘಟನೆ ನಡೆದಿದೆ.
ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ವ್ಯಾಪ್ತಿಯ 5 ಗ್ರಾಮಗಳ ಗ್ರಾಮಸ್ಥರು ಮೂಲಸೌಕರ್ಯಕ್ಕೆ ಆಗ್ರಹಿಸಿ ಮತದಾನ ಬಹಿಷ್ಕರಿಸಿದ್ದರು. ಚುನಾವಣಾ ಅಧಿಕಾರಿಗಳು ಗ್ರಾಮಸ್ಥರನ್ನು ಮನವೊಲಿಕೆ ಮಾಡಿ ಮತಗಟ್ಟೆಗೆ ಕರೆತಂದಿದ್ದಾರೆ. ಈ ವೇಳೆ ಮತದಾನದಿಂದ ದೂರ ಉಳಿದಿದ್ದ ಇನ್ನೊಂದು ಗ್ರಾಮದ ಮತದಾರರು ಮತಗಟ್ಟೆ ಸುತ್ತ ನಿಂತಿದ್ದರು.
ಅವರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ದೂರಲಾಗಿದೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಪೊಲಿಸ್ ಹಾಗೂ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಮತಗಟ್ಟೆಗೆ ನುಗ್ಗಿದ ಗ್ರಾಮಸ್ಥರು ಅಲ್ಲಿದ್ದ ಮತಯಂತ್ರ, ಪೀಠೋಪಕರಣಗಳನ್ನು ಧ್ವಂಸಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ 5 ಗ್ರಾಮಗಳಲ್ಲಿ ವಿದ್ಯುತ್, ನೀರು, ಸಾರಿಗೆ ಸೇರಿದಂತೆ ಯಾವುದೇ ಮೂಲಸೌಕರ್ಯಗಳಿಲ್ಲದೇ ಗ್ರಾಮಸ್ಥರು ಇಂದಿಗೂ ಸಂಕಟ ಪಡುತ್ತಿದ್ದಾರೆ.