ಇತ್ತೀಚಿನ ಸುದ್ದಿ
ವಿಎಚ್ ಪಿ ನಾಯಕ ಶರಣ್ ಪಂಪ್ ವೆಲ್ ಹೇಳಿಕೆ ಆಘಾತಕಾರಿ: ಯುವ ಜೆಡಿಎಸ್ ದ.ಕ. ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ
30/01/2023, 18:36

ಮಂಗಳೂರು(reporterkarnataka.com): ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಕೊಲೆಗೆ ಪ್ರತೀಕಾರವಾಗಿ ಸುರತ್ಕಲ್ ನಲ್ಲಿ ಫಾಝಿಲ್ ಕೊಲೆ ಮಾಡಿದ್ದೇವೆ ಎಂದು ವಿಎಚ್ ಪಿ ನಾಯಕ ಶರಣ್ ಪಂಪ್ ವೆಲ್ ನೀಡಿರುವ ಹೇಳಿಕೆ ನಾಗರೀಕ ಸಮಾಜಕ್ಕೆ ಆಘಾತಕಾರಿ ವಿಚಾರ ಎಂದು ದ.ಕ. ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಆತಂಕ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಸಭೆಯಲ್ಲಿ ಭಯ ಹುಟ್ಟಿಸುವಂತಹ ಹೇಳಿಕೆಗಳನ್ನು ನೀಡಿದ ವ್ಯಕ್ತಿಯ ವಿರುದ್ದ ಪೊಲೀಸ್ ಇಲಾಖೆ ಕಣ್ಣಿದ್ದು ಕುರುಡರಂತೆ ವರ್ತಿಸುವುದು ನಾಚಿಕೆಗೇಡಿನ ಸಂಗತಿ ಆಗಿದೆ. ಇವರ ಇಂತಹ ಹೇಳಿಕೆಗಳು ನಾಗರಿಕ ಸಮಾಜ ತಲೆ ಬಾಗಿಸುವಂತಹ ಕೆಲಸವಾಗಿದೆ ಎಂದರು.
ಶರಣ್ ಪಂಪ್ ವೆಲ್ ಅವರ ಹೇಳಿಕೆ ಸಮಾಜದಲ್ಲಿ ಹತ್ಯೆ ಹಾಗೂ ಘರ್ಷಣೆಗೆ ಪ್ರಚೋದನೆ ನೀಡುವಂತಿದ್ದು, ಅಮಾಯಕ ಯುವಕರನ್ನು ಇಂತಹ ಸಮಾಜದ್ರೋಹಿ ಕೆಲಸಗಳಿಗೆ ಬಳಸಿಕೊಂಡು ಚುನಾವಣೆ ಹತ್ತಿರವಿರುವ ಸಮಯದಲ್ಲಿ ಸಮುದಾಯಗಳ ನಡುವೆ ದ್ವೇಷ ಹುಟ್ಟಿಸುವ ಕೆಲಸ ಮಾಡಲು ಕಾರಣವಾಗುತ್ತಿದೆ. ಇದಕ್ಕೆ ಅವಕಾಶ ನೀಡದೆ ಇಂತಹ ಹೇಳಿಕೆ ನೀಡಿರುವ ಶರಣ್ ಪಂಪ್ವೆಲ್ ವಿರುದ್ದ ಪೊಲೀಸರು ಪ್ರಕರಣ ದಾಖಲು ಮಾಡಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಹಿಂದೂ ಮುಖಂಡನಾಗಿ ಇಂತಹ ಹೇಳಿಕೆ ನ್ಯಾಯ ವ್ಯವಸ್ಥೆಗೆ ಎಸೆದಿರುವ ಸವಾಲು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿರುವಂತೆ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂಬ ಹೇಳಿಕೆಗೆ ನೇರವಾಗಿ ಬೆಂಬಲಿಸಿದಂತಾಗಿದೆ. ಅಮಾಯಕರನ್ನು ಕೊಲ್ಲುವುದೇ ಇವರ ಹಿಡನ್ ಅಜೆಂಡಾ ಆಗಿದೆ ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.