3:51 AM Thursday7 - August 2025
ಬ್ರೇಕಿಂಗ್ ನ್ಯೂಸ್
ಆಲಮಟ್ಟಿ ಡ್ಯಾಮ್ ಎತ್ತರ 524 ಮೀಟರ್‌ಗೆ ಹೆಚ್ಚಿಸುವುದು ಕರ್ನಾಟಕದ ಹಕ್ಕು: ಕೇಂದ್ರ ಜಲಶಕ್ತಿ… Chikkamagaluru | ಕಾಫಿನಾಡಲ್ಲಿ ನಿಲ್ಲದ ಕಾಡಾನೆ ಉಪಟಳ: ಹೆದ್ದಾರಿ, ಕಾಫಿ ತೋಟದಲ್ಲಿಯೂ ದಾಂಧಲೆ ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ಅಳಿವಿನoಚಿನಲ್ಲಿರುವ ನೀರು ನಾಯಿಗಳ ಕಳ್ಳಬೇಟೆ: ಪ್ರಾಣಿ ಪ್ರಿಯರಿಂದ ಕಾರ್ಯಾಚರಣೆ ಮುತ್ತಾಲಿಕ್ ಜತೆ ವೇದಿಕೆ ಹಂಚಿಕೊಂಡ ಕೈ ಶಾಸಕಿ: ನಯನಾ ಮೋಟಮ್ಮ ವಿರುದ್ಧ ಪ್ರಾಯಶ್ಚಿತ್ತ… ಮತದಾರರ ಹಕ್ಕು ರಕ್ಷಣೆ ರಾಜಕೀಯ ಪಕ್ಷಗಳ ಕರ್ತವ್ಯ: ಡಿಸಿಎಂ ಡಿ.ಕೆ. ಶಿವಕುಮಾರ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ‘ರಿದಂ ಆಫ್ ಬಿಎಲ್‌ಆರ್‌’: ವಿಶಿಷ್ಟ ಧ್ವನಿ ಗುರುತು… ಶಿಬು ಸೊರೇನ್ ನಿಧನ: ಮತಗಳ್ಳತನ ವಿರುದ್ಧ ಪ್ರತಿಭಟನಾ ಸಭೆ ಆ. 8ಕ್ಕೆ ಮುಂದೂಡಿಕೆ:… ವಿಶ್ವ ವಿಖ್ಯಾತ ಮೈಸೂರು ದಸರಾ: ಪುಷ್ಪಾರ್ಚನೆ ಮೂಲಕ ಅಭಿಮನ್ಯು ನೇತೃತ್ವದ ಗಜ ಪಯಣಕ್ಕೆ… Shivamogga | ತೀರ್ಥಹಳ್ಳಿ: ಮನೆಗಾಗಿ ಸಾಲ; ಮನನೊಂದ ವೃದ್ದ ದಂಪತಿ ಒಂದೇ ಮರಕ್ಕೆ… Kodagu | ಬೆಕ್ಕೆಸುಡ್ಲೂರಿನಲ್ಲಿ ತಡರಾತ್ರಿ ರಸ್ತೆ ಮಧ್ಯೆ ಲಾರಿ ಪಲ್ಟಿ: ಕುಟ್ಟ- ಪೊನ್ನಂಪೇಟೆ…

ಇತ್ತೀಚಿನ ಸುದ್ದಿ

ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ದಿಕ್ಕು ತಪ್ಪುತ್ತಿದೆಯೇ?: ಹಳೆ ಬಂದರು ಅಭಿವೃದ್ಧಿ ಪ್ರಸ್ತಾವನೆಗೆ ಮಾತ್ರವೇ? 

27/06/2021, 07:47

ಅಶೋಕ್ ಕಲ್ಲಡ್ಕ ಮಂಗಳೂರು

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಸ್ಮಾರ್ಟ್ ಸಿಟಿ ಯೋಜನೆ ಮಂಗಳೂರಿಗೆ ಬಂದು 5 ವರ್ಷಗಳಾದರೂ ಕ್ಲಾಕ್ ಟವರ್, ಸ್ಮಾರ್ಟ್ ರಸ್ತೆ, ಸರಕಾರಿ ಕಚೇರಿಗಳಿಗೆ ಸೋಲಾರ್ ಅಳವಡಿಕೆ, ಸ್ಮಾರ್ಟ್ ಬಸ್ ಶೆಲ್ಟರ್ ಮುಂತಾದ ಚಿಲ್ಲರೆ ಕೆಲಸವನ್ನು ಬಿಟ್ಟರೆ ಯಾವುದೇ ಪ್ರಮುಖ ಯೋಜನೆಗಳು ಕಾರ್ಯಗತವಾಗಿಲ್ಲ. ಸ್ಮಾರ್ಟ್ ಸಿಟಿ ಹಣವನ್ನು ರಸ್ತೆ ಅಭಿವೃದ್ಧಿ ನೆಪದಲ್ಲಿ ಚೆಲ್ಲಲಾಗುತ್ತಿದೆ. ಕೇಂದ್ರದಿಂದ ಯೋಜನೆ ಸ್ಯಾಂಕ್ಷನ್ ಆಗಲು ಕೇಂದ್ರ ಬಿಂದುವಾಗಿದ್ದ ಹಳೆ ಬಂದರು ಅಭಿವೃದ್ಧಿ ವಿಷಯವನ್ನೇ ಮರೆತು ಬಿಡಲಾಗಿದೆ.

ಮಂಗಳೂರಿನ ಆರ್ಥಿಕ ಬೆನ್ನೆಲುಬಾಗಿರುವ ಹಳೆ ಬಂದರು ಅಭಿವೃದ್ಧಿಯ ಅಂಶವನ್ನು ಇಟ್ಟುಕೊಂಡು ಸಲ್ಲಿಸಲಾದ ಪ್ರಸ್ತಾಪನೆಯ ಮೂಲಕ ಮಂಗಳೂರಿಗೆ ಸ್ಮಾರ್ಟ್ ಸಿಟಿ ಯೋಜನೆ ಬಂತು. ಅದರೆ ಇಂದು ನಡೆಯುತ್ತಿರುವುದು ಏನು? ಯೋಜನೆ ಬಂದು 5 ವರ್ಷವಾದರೂ ಹಳೆ ಬಂದರು ಅಭಿವೃದ್ಧಿ ಆಗಿದೆಯೇ? ಅಭಿವೃದ್ಧಿಗೆ ಏನಾದರು ಯೋಜನೆ ಜನಪ್ರತಿನಿಧಿಗಳು, ಅಥವಾ ಅಧಿಕಾರಿಗಳ ಬಳಿ ಇದೆಯೇ?

ಸ್ಮಾರ್ಟ್ ಸಿಟಿ ಯೋಜನೆಗೆ ಮೊದಲ ಹಂತದ ಆಯ್ಕೆಯಲ್ಲಿ ಮಂಗಳೂರನ್ನು ಹೊರಗಿಡಲಾಗಿತ್ತು. ನಂತರ ಮಂಗಳೂರು ಹಳೆ ಬಂದರು ಅಭಿವೃದ್ಧಿ ಪ್ರಸ್ತಾವನೆ ಇಟ್ಟು ಸಲ್ಲಿಸಲಾದ ಪ್ರಸ್ತಾಪಕ್ಕೆ ಕೇಂದ್ರ ಒಪ್ಪಿಗೆ ನೀಡಿತ್ತು. ಆಗ ಜೆ.ಅರ್. ಲೋಬೊ ಶಾಸಕರಾಗಿದ್ದರು. ಅವರ ನೇತೃತ್ವದಲ್ಲೇ ಪ್ರಸ್ತಾವನೆ ಸಿದ್ಧಪಡಿಸಲಾಗಿತ್ತು. ಹಳೆ ಬಂದರು ಅಭಿವೃದ್ಧಿ, ಪಾರಂಪರಿಕ ಕಟ್ಟಡ ರಕ್ಷಣೆ, ಪ್ರವಾಸೋದ್ಯಮಕ್ಕೆ ಉತ್ತೇಜನ,  ಬೀಚ್ ಪಾರ್ಕ್ ಗಳ ನಿರ್ಮಾಣ ಮುಂತಾದ ಅಂಶಗಳನ್ನು ಸೇರಿಸಿ ಕೇಂದ್ರ ಸರಕಾರದ ಗ್ರೀನ್ ಸಿಗ್ನಲ್ ಪಡೆಯಲಾಯಿತು. ಆದರೆ ಮುಂದೆ ನಡೆದದ್ದೆಲ್ಲ ಜನಪ್ರತಿನಿಧಿಗಳ ಮೂಗಿನ ನೇರಕ್ಕೆ ಆಗುವ ಕಾಮಗಾರಿಗಳು ಮಾತ್ರ.

ಆರಂಭದಲ್ಲೇ ಸ್ಮಾರ್ಟ್ ಸಿಟಿ ಯೋಜನೆಯ ಪಟ್ಟಿಗೆ ಅನಾವಶ್ಯಕವಾಗಿ ಕ್ಲಾಕ್ ಟವರ್ ನಿರ್ಮಾಣ ಪ್ರಸ್ತಾವನೆಯನ್ನು ಸೇರಿಸಲಾಯಿತು. ಟ್ರಾಫಿಕ್ ಜಾಮ್ ಗೆ ಕಾರಣವಾಗುತ್ತಿದೆ ಎಂದು ಮೂರು ದಶಕಗಳ ಹಿಂದೆಯೇ ಹಳೆ ಕ್ಲಾಕ್ ಟವರನ್ನು ಅಂದಿನ ಜಿಲ್ಲಾಧಿಕಾರಿಯಾಗಿದ್ದ ಭರತ್ ಲಾಲ್ ಮೀನ  ತೆರವುಗೊಳಿಸಿದ್ದರು. ಆದರೆ ಮತ್ತೆ ಅದೇ ಜಾಗದಲ್ಲಿ ಹೊಸ ಕ್ಲಾಕ್ ಟವರ್ ನಿರ್ಮಿಸಿ ತೆರಿಗೆದಾರರ ಹಣ ಹೆಚ್ಚು ಕಡಿಮೆ ಸುಮಾರು 1 ಕೋಟಿ ರೂ. ವನ್ನು ಅನಾವಶ್ಯಕವಾಗಿ ಪೋಲು ಮಾಡಲಾಯಿತು. ನಂತರ ಇಡೀ ಮಂಗಳೂರಿನಲ್ಲೇ ನಂಬರ್ 1 ರಸ್ತೆ ಆಗಿದ್ದ ಕ್ಲಾಕ್ ಟವರ್ ನಿಂದ ಎ.ಬಿ.ಶೆಟ್ಟಿ ವೃತ್ತದವರೆಗಿನ ರಸ್ತೆಯನ್ನು ಸ್ಮಾರ್ಟ್ ರಸ್ತೆ ಮಾಡುವ ನೆಪದಲ್ಲಿ ಅಗೆದು ಹಾಕಲಾಯಿತು. ಇಲ್ಲಿ ಟಾಯ್ಲೆಟ್ ಇರುವ ಸ್ಮಾರ್ಟ್ ಬಸ್ ನಿಲ್ದಾಣ, ಕೇಬಲ್ ಗೆ ಪ್ರತ್ಯೇಕ ಡೆಕ್, ಸಾರ್ವಜನಿಕರಿಗೆ ವಾಯುಸೇವನೆಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಉಚಿತ ವೈಫೈ ಸೇವೆಯನ್ನು ಸೇರಿಸಿ

ಸ್ಮಾರ್ಟ್ ರಸ್ತೆ ಯೋಜನೆ ರೂಪಿಸಲಾಯಿತು. ಇದರಲ್ಲಿ ರಸ್ತೆ ಮತ್ತು ಫುಟ್ ಪಾತ್ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿಗಳು ಬಾಕಿ ಇವೆ. ಆದರೆ ಸ್ಮಾರ್ಟ್ ಸಿಟಿಯ ಪೂರ್ಣಗೊಂಡ ಕಾಮಗಾರಿಯ ಪಟ್ಟಿಯಲ್ಲಿ ಸ್ಮಾರ್ಟ್ ರಸ್ತೆಯನ್ನು ಸೇರಿಸಲಾಗಿದೆ. ಇದು ಕೂಡ ತೆರಿಗೆದಾರರ ಹಣವನ್ನು ಯೋಜನೆಯ ರೂಪದಲ್ಲಿ ಲೂಟಿ ಹೊಡೆಯಲು ಮಾಡಿದ ಕೆಲಸವಾಗಿದೆ ಎನ್ನುವುದು ಗೋಡೆ ಬರಹಷ್ಟೇ ಸ್ಪಷ್ಟವಾಗಿದೆ.

ಇದೀಗ  ಮಂಗಳೂರಿನ ಹೃದಯ ಭಾಗದಲ್ಲಿರುವ ಸುಸಜ್ಜಿತ ರಸ್ತೆ, ಫುಟ್ ಪಾತ್ ಗಳನ್ನು ಒಡೆದು ಹಾಕಿ ಹೊಸ ಕಾಂಕ್ರೀಟಿನ ರಸ್ತೆ ಹಾಗೂ ಬಣ್ಣದ ಫುಟ್ ಪಾತ್ ನಿರ್ಮಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಅದೇ ರೀತಿ ಕದ್ರಿ ಪಾರ್ಕ್ ಗೆ ಹೋಗುವ ರಸ್ತೆ ನಿರ್ಮಾಣವಾಗುತ್ತಿದೆ. ವಾಸ್ತವದಲ್ಲಿ ಇಂತಹ ರಸ್ತೆ ಮರು ನಿರ್ಮಾಣ ಕಾಮಗಾರಿಯನ್ನು ಪಾಲಿಕೆಯ ಬಜೆಟ್ ನಲ್ಲಿ, ಸಿಎಂ 100 ಕೋಟಿ ಅನುದಾನದಲ್ಲಿ ಅಥವಾ 14ನೇ ಹಣಕಾಸಿನಲ್ಲಿ ಮಾಡಬೇಕು. ಆದರೆ ಪಾಲಿಕೆಯಲ್ಲಿ ಹಣ ಇಲ್ಲ. ಸ್ಮಾರ್ಟ್ ಸಿಟಿ ಕಂಪನಿಯಲ್ಲಿ ಬೇಕಾದಷ್ಟು ಹಣ ಇದೆ. ‘ಯಾರದೋ ಹಣ ಎಲ್ಲಮ್ಮನ ಜಾತ್ರೆ ‘ ಎನ್ನುವಂತಾಗಿದೆ ಸ್ಥಿತಿ. ಕಮಿಷನ್ ವ್ಯವಹಾರ ಕುದುರ ಬೇಕಾದರೆ ಕಟ್ಟುವ, ಬಿಚ್ಚುವ ಕೆಲಸ ನಿರಂತರವಾಗಿ ನಡೆಯುತ್ತಲೇ ಇರಬೇಕು. ಮಂಗಳೂರು ಮಹಾನಗರಪಾಲಿಕೆಯಲ್ಲಿ ಕೂಡ ನಡೆಯುತ್ತಿರುವುದು ಇದೇ.

ಇವೆಲ್ಲ ಮಂಗಳೂರಿನ ಜನತೆಗೆ ಸ್ಪಷ್ಟವಾಗಿ ಗೊತ್ತಿದೆ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಎನ್ನುವುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.

ವಾಸ್ತವದಲ್ಲಿ ಸಮುದ್ರ ಹಾಗೂ ಹಳೆ ಬಂದರು ಮಂಗಳೂರಿನ ಐಡೆಂಟಿಟಿ. ಬ್ರಿಟಿಷರ ಕಾಲದಲ್ಲಿ ಇಡೀ ಹಳೆ ಬಂದರು ಪ್ರದೇಶ ಆರ್ಥಿಕ ಚಟುವಟಿಕೆಯ ಕೇಂದ್ರವಾಗಿತ್ತು. ವಿದೇಶಗಳಿಗೆ ಕಾಫಿ, ಸಾಂಬಾರು ಪದಾರ್ಥಗಳು ಇಲ್ಲಿಂದಲೇ ರಫ್ತು ಆಗುತ್ತಿತ್ತು. ಹಡಗು ಮತ್ತು ಬೋಟು ನಿರ್ಮಾಣವಾಗುತ್ತಿತ್ತು. ಬಂದರು ಪ್ರದೇಶದಲ್ಲೇ ಬ್ಯಾಂಬು ಬಜಾರ್ ಇರುವುದು ಇದಕ್ಕೆ ಸಾಕ್ಷಿಯಾಗಿದೆ. ಈ ಹಿನ್ನೆಲೆಯಲ್ಲೇ ಬಂದರು ಅಭಿವೃದ್ಧಿ ಜತೆಗೆ ಇಲ್ಲಿನ ರಸ್ತೆ ಅಭಿವೃದ್ದಿಗೂ ಸ್ಮಾರ್ಟ್ ಸಿಟಿ ಪ್ರಸ್ತಾವನೆಯಲ್ಲಿ ಪ್ರಾಮುಖ್ಯತೆ ನೀಡಲಾಗಿತ್ತು. ಹಳೆ ಬಂದರು- ನವ ಮಂಗಳೂರು ಬಂದರು ಸಂಪರ್ಕ ರಸ್ತೆ, ಹಳೆ ಬಂದರು -ಸೆಂಟ್ರಲ್ ರೈಲ್ವೆ ನಿಲ್ದಾಣ ಸಂಪರ್ಕ ರಸ್ತೆ, ರೈಲ್ವೆ ನಿಲ್ದಾಣ- ನವ ಮಂಗಳೂರು ಬಂದರು ಸಂಪರ್ಕ ರಸ್ತೆ ಅಭಿವೃದ್ಧಿ ಪ್ರಸ್ತಾಪನೆಯಲ್ಲಿ ಸೇರಿಸಲಾಗಿತ್ತು. ಆದರೆ ಇದೀಗ ಅದನ್ನೆಲ್ಲ ಗಾಳಿಗೆ ತೂರಿ ಒಳ್ಳೆಯ ರಸ್ತೆಯನ್ನು ಅಗೆದು ಹಾಕಿ ಮತ್ತೆ ರಸ್ತೆ ನಿರ್ಮಾಣದ ಹೆಸರಿನಲ್ಲಿ ದುಡ್ಡು ಮಾಡುವ ದಂಧೆ ಮಾತ್ರ ನಡೆಯುತ್ತಿದೆ. 

ಇತ್ತೀಚಿನ ಸುದ್ದಿ

ಜಾಹೀರಾತು