7:03 PM Saturday20 - June 2026
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ: ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ… Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ… ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ ಗ್ಯಾರಂಟಿ ಸೌಲಭ್ಯಕ್ಕೆ ಹೊಸದಾಗಿ ಅರ್ಜಿ ಬೇಡ, ಮರು ಪರಿಶೀಲನೆ ಮಾತ್ರ: ಸಿಎಂ ಸಭೆಯಲ್ಲಿ… ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ…

ಇತ್ತೀಚಿನ ಸುದ್ದಿ

ಚಿಕ್ಕಮಗಳೂರು: ಕಾಡಾನೆ ದಾಳಿಗೆ ಮಹಿಳೆ ದಾರುಣ ಸಾವು; ಇನ್ನೊಬ್ಬರ ಸ್ಥಿತಿ ಗಂಭೀರ 

27/03/2022, 09:57

ಚಿಕ್ಕಮಗಳೂರು(reporterkarnataka.com): ಕಾಫಿತೋಟದಲ್ಲಿ ಮೆಣಸು ಕೊಯ್ಯುವಾಗ ಇಬ್ಬರು ಕಾರ್ಮಿಕರ ಮೇಲೆ ಆನೆ ದಾಳಿ ಮಾಡಿದ್ದು ಮಹಿಳೆ ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಗಂಭೀರಗೊಂಡಿರುವ ಘಟನೆ ತಾಲೂಕಿನ ಆಲ್ದೂರಿನಲ್ಲಿ ನಡೆದಿದೆ. ಮೃತರನ್ನ 45 ವರ್ಷದ ಸರೋಜಬಾಯಿ ಎಂದು ಗುರುತಿಸಲಾಗಿದ್ದು, ಮತೋರ್ವ ಕಾರ್ಮಿಕ ದುಗ್ಗಪ್ಪ ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡಿದ್ದಾರೆ. ಮೃತ ಮಹಿಳೆ ಹಾಗೂ ಗಾಯಗೊಂಡ ಕಾರ್ಮಿಕ ಮೂಲತಃ ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಬ್ಯಾಡಗಿ ಮೂಲದವರು. ಕುಟುಂಬ ಸಮೇತರಾಗಿ ಜಿಲ್ಲೆಗೆ ಬಂದು ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಇಂದು ಮರ ಹತ್ತಿ ಮೆಣಸು ಕೊಯ್ಯುವಾಗ ಆನೆ ದಾಳಿ ಮಾಡಿದೆ. ಕೂಡಲೇ ಸರೋಜಬಾಯಿಯನ್ನ ಆಸ್ಪತ್ರೆಗೆ ಕರೆತಂದರೂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ತೋಟದಲ್ಲಿ ಕೆಲಸ ಮಾಡುವಾಗ ಸದ್ದಿಲ್ಲದೆ ಬಂದ ಆನೆ ಮಹಿಳೆಯನ್ನ ಎತ್ತಿ ಬಿಸಾಡಿದೆ. ಮೈಮೇಲೆ ಯಾವುದೇ ಗಾಯವಾಗದಿದ್ದರೂ ಆನೆ ನೆಲಕ್ಕೆ ಬಡಿದಿದ್ದರಿಂದ ಸಾವನ್ನಪ್ಪಿದ್ದಾರೆ. ಮೃತ ಮಹಿಳೆಗೆ ಮೂವರು ಮಕ್ಕಳಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಒಂದು ಚಿಕ್ಕ ಗಂಡು ಮಗುವಿದೆ. ಯಾವುದೇ ಜಮೀನು, ತೋಟ ಯಾವುದೂ ಇಲ್ಲ. ಹಾಗಾಗಿ, ಸರ್ಕಾರ ಹಾಗೂ ತೋಟದ ಮಾಲೀಕರು ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. ತೋಟದಲ್ಲಿ ಆನೆಯನ್ನ ಕಂಡ ಕೂಡಲೇ ಮೃತ ಸರೋಜಬಾಯಿ ಜೊತೆಗಿದ್ದ ಮಗುವನ್ನ ಹೋಗು ಎಂದು ಕಳಿಸಿದ್ದಾಳೆ. ಆನೆಯನ್ನ ಕಂಡು ಆಕೆ ಕೂಗುವಾಗ ಮಂಗಗಳು ಊಟದ ಬಾಕ್ಸ್‍ಗಳನ್ನ ತೆಗೆದುಕೊಂಡು ಹೋಗುತ್ತಿರಬೇಕು. ಅದಕ್ಕೆ ನಮ್ಮವರೇ ಕೂಗಾಡುತ್ತಿದ್ದಾರೆ ಎಂದು ಉಳಿದವರು ಭಾವಿಸಿದ್ದಾರೆ. ಆದರೆ, ಮಗು ಓಡಿ ಬಂದು ಅಳುತ್ತಾ ಅಮ್ಮನನ್ನ ಆನೆ ಹಿಡಿದುಕೊಂಡಿದೆ ಎಂದು ಹೇಳಿದ ಮೇಲೆ ಎಲ್ಲರೂ ಹೋಗುವಷ್ಟರಲ್ಲಿ ಆನೆ ಆಕೆಯನ್ನ ಎತ್ತಿ ನೆಲಕ್ಕೆ ಬಡಿದಿತ್ತು. ಕೂಡಲೇ ಆಸ್ಪತ್ರೆಗೆ ಕರೆತಂದರೂ ಯಾವುದೇ ಪ್ರಯೋಜನವಾಗದೆ ಆಕೆ ಸಾವನ್ನಪ್ಪಿದ್ದಾರೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಆನೆ ಹಾವಳಿ ಮಿತಿ ಮೀರಿದೆ. ಅದರಲ್ಲೂ ಮೂಡಿಗೆರೆ ತಾಲೂಕಿನ ಗುತ್ತಿ, ಕೋಗಿಲೆ, ಗೌಡಹಳ್ಳಿ, ಸಾರಗೋಡು ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಆನೆ ಹಾವಳಿ ಮಿತಿ ಮೀರಿದೆ. ಆಗಾಗ್ಗೆ ಆನೆಗಳ ಹಿಂಡು ಬೆಳೆಗಳ ಮೇಲೆ ದಾಂಗುಡಿ ಇಟ್ಟು ಬೆಳೆಯನ್ನ ನಾಶ ಮಾಡುತ್ತಿವೆ. ಸ್ಥಳಿಯರು ಆನೆಯನ್ನ ಸ್ಥಳಾಂತರಿಸಿ ಎಂದು ಮನವಿ ಮಾಡಿದರು ಸಂಬಂಧಪಟ್ಟವರು ಸಂಬಂಧವಿಲ್ಲದಂತಿದ್ದಾರೆ ಅನ್ನೋದು ಸ್ಥಳಿಯರ ಆರೋಪ. ಈಗಾಗಲೇ ಮಲೆನಾಡಲ್ಲಿ ಆನೆ ದಾಳಿಯಿಂದ ಮೂರ್ನಾಲ್ಕು ವರ್ಷಗಳ ಅವಧಿಯಲ್ಲಿ ಮೂರ್ನಾಲ್ಕು ಜನ ಪ್ರಾಣ ಕಳೆದುಕೊಂಡಿದ್ದಾರೆ.


ಇಂದು ಕೂಡ ತುತ್ತು ಅನ್ನಕ್ಕಾಗಿ ಹಾವೇರಿಯಿಂದ ಬಂದು ಬದುಕುತ್ತಿದ್ದ ಮಹಿಳೆ ಆನೆ ದಾಳಿಗೆ ಬಲಿಯಾಗಿದ್ದು ನಿಜಕ್ಕೂ ದುರಂತ. ಇನ್ನಾದರೂ ಅಧಿಕಾರಿಗಳು ಆನೆಗಳನ್ನ ಓಡಿಸಲು ಕ್ರಮಕೈಗೊಳ್ಳುತ್ತಾರೆ ಕಾದುನೋಡಬೇಕು. ಆಲ್ದೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು