ಇತ್ತೀಚಿನ ಸುದ್ದಿ
ಭಾರತ ಮಾನವೀಯ ಮೌಲ್ಯ, ಶಾಂತಿ- ಅಹಿಂಸೆಯ ಮಹತ್ವ ಇಡೀ ಜಗತ್ತಿಗೆ ಸಾರಿದೆ: ಮೂಡುಬಿದರೆಯಲ್ಲಿ ರಾಜ್ಯಪಾಲ ಗೆಹ್ಲೋಟ್
14/03/2022, 20:37

ಮೂಡುಬಿದರೆ(reporterkarnataka.com): ವಿಶ್ವಕ್ಕೆ ಶಾಂತಿ ಹಾಗೂ ಅಹಿಂಸೆಯ ಸಂದೇಶ ಸಾರಿದ ಭಾರತದ ಕೀರ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ನಾವೆಲ್ಲರೂ ಕೈಜೋಡಿಸಬೇಕೆಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕರೆ ನೀಡಿದರು.
ಅವರು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಪಟ್ಟಣದ 18 ಜೈನ ದೇವಾಲಯಗಳಲ್ಲಿ ಪ್ರಮುಖವಾದ ಸಾವಿರ ಕಂಬಗಳ ಬಸದಿಯಾದ ತ್ರಿಭುವನ ತಿಲಕ ಚೂಡಾಮಣಿ ದೇವಾಲಯಕ್ಕೆ ಸೋಮವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ನಮ್ಮ ದೇಶ ಮಾನವೀಯ ಮೌಲ್ಯಗಳು, ಶಾಂತಿ, ಅಹಿಂಸೆಯ ಮಹತ್ವ ಮತ್ತು ಸಹೋದರತ್ವವನ್ನು ಇಡೀ ಜಗತ್ತಿಗೆ ತೋರಿಸಿದೆ. ಭಾರತದ ಸಂಸ್ಕೃತಿ ವಿಶ್ವಕ್ಕೆ ಪ್ರೇರಣೆ ನೀಡಿದೆ. ಭಾರತ ಜಗತ್ತಿಗೆ ಶಾಂತಿ, ಅಹಿಂಸೆ ಮತ್ತು ಸೇವೆಗೆ ಸ್ಫೂರ್ತಿಯನ್ನು ನಿರಂತರವಾಗಿ ನೀಡಲಿದೆ ಎಂಬ ಭರವಸೆ ಇದೆ ಎಂದರು.
ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ರಾಜ್ಯಪಾಲರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮೂಡಬಿದರೆ ಪುರಸಭೆ ಅಧ್ಯಕ್ಷ ಪ್ರಸಾದ್, ಮಾಜಿ ಸಚಿವ ಅಭಯಚಂದ್ರ ಜೈನ್, ಮಠದ ಪದಾಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.