ಇತ್ತೀಚಿನ ಸುದ್ದಿ
ಜಾತಕ ನೋಡಿವ ನೆಪ: ಯುವತಿ ಮೇಲೆ ಅರ್ಚಕನಿಂದ ನಿರಂತರ ಅತ್ಯಾಚಾರ; ದೂರು ದಾಖಲು
03/02/2026, 21:15
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮದುವೆ ಜಾತಕ ತೋರಿಸುವ ನೆಪದಲ್ಲಿ ದಲಿತ ಸಮುದಾಯದ ಯುವತಿಗೆ ದೇವಾಲಯದ ಅರ್ಚಕ ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಹೊರಟ್ಟಿ ಗ್ರಾಮದ ಪಾರ್ವತಿ ಈಶ್ವರ ದೇವಸ್ಥಾನದ ಅರ್ಚಕ ಕೃಷ್ಣ ರಾವ್ ವಿರುದ್ಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಗಂಭೀರ ಪ್ರಕರಣ ದಾಖಲಾಗಿದೆ.
23 ವರ್ಷದ ದಲಿತ ಸಮುದಾಯದ ಯುವತಿ ನೀಡಿರುವ ದೂರಿನ ಪ್ರಕಾರ, ಮದುವೆಯಲ್ಲಿ ತೊಂದರೆ ಆಗುತ್ತದೆ ಎಂದು ಹೆದರಿಸಿ ಆರೋಪಿ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ ಎನ್ನುವ ಆರೋಪ ಇದೆ.
2025ರ ನವೆಂಬರ್ 23 ರಿಂದ 2026ರ ಫೆಬ್ರವರಿ 2ರವರೆಗೆ ಹಲವು ಬಾರಿ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಫೆಬ್ರವರಿ 2, 2026ರಂದು ಮಧ್ಯಾಹ್ನ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 64(2)(m) ಹಾಗೂ ಎಸ್ಸಿ/ಎಸ್ಟಿ (ಅತ್ಯಾಚಾರ ತಡೆ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.














