ಇತ್ತೀಚಿನ ಸುದ್ದಿ
ತಂಗಿಯ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ರೌಡಿ ಶೀಟರ್ ಮಾವನಿಂದ ಅತ್ಯಾಚಾರ: ಆರೋಪಿ ಎಸ್ಕೇಪ್; ರಾಜಕೀಯ ನಂಟಿನ ವಾಸನೆ
04/05/2024, 16:53
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಪ್ರಕರಣ ಬೆನ್ನಲ್ಲೇ ನಂಜನಗೂಡಿನಲ್ಲೊಂದು ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣ ಸದ್ದುಮಾಡುತ್ತಿದೆ. ಇದಕ್ಕೆ ರಾಜಕೀಯ ನಂಟಿನ ಆರೋಪ ಕೇಳಿಬರುತ್ತಿದೆ.
ಟ್ಯೂಷನ್ ಗೆ ಬಿಡುವ ನೆಪದಲ್ಲಿ ತನ್ನ ಅಜ್ಜಿಯ ಮನೆಯಲ್ಲಿದ್ದ ಸ್ವಂತ ತಂಗಿಯ ಅಪ್ರಾಪ್ತ ಮಗಳನ್ನ ಕಾರಿನಲ್ಲಿ ಕರೆದೊಯ್ದ ಕಾಮುಕ ಸೋದರ ಮಾವ ಅತ್ಯಾಚಾರವೆಸಗಿ ಪರಾರಿಯಾಗಿರುವ ಘಟನೆ ನಂಜನಗೂಡಿನ ಶ್ರೀರಾಂಪುರ ಬಡಾವಣೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಪೋಕ್ಸೋ ಕಾಯಿದೆ ಅಡಿ ಆರೋಪಿ ವಿರುದ್ದ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೌಡಿಶೀಟರ್ ಆಗಿರುವ ಆರೋಪಿ ಅಪ್ರಾಪ್ತ ಬಾಲಕಿಯ ಸೋದರಮಾವನೇ ಆಗಿದ್ದಾನೆ. ರಾಜೇಶ್ ಅಲಿಯಾಸ್ ದೈತ್ಯರಾಜ್ ಎಂಬುವವನೇ ಆರೋಪಿಯಾಗಿದ್ದು ಈತನ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ದಾಖಲಾಗಿದೆ. ಸಾಕಷ್ಟು ಕ್ರಿಮಿನಲ್ ಪ್ರಕರಣಗಳನ್ನ ಎದುರಿಸುತ್ತಿರುವ ರೌಡಿ ಶೀಟರ್ ರಾಜೇಶ್ ತನ್ನ ಕುಕೃತ್ಯಗಳನ್ನು ಮುಚ್ಚಿಕೊಳ್ಳಲು ಮಹಾನಾಯಕ ಡಾ ಬಿ. ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಮಹಾ ನಾಯಕ ರಕ್ಷಣಾ ವೇದಿಕೆ ನಿರ್ಮಿಸಿಕೊಂಡು ರಾಜ್ಯಾಧ್ಯಕ್ಷನಾಗಿ ಅದರ ಹೆಸರು ಮತ್ತು ರಕ್ಷಣೆಯಲ್ಲಿ ಮತ್ತಷ್ಟು ಇಂತಹ ಹೀನ ಕೃತ್ಯಗಳನ್ನು ಮಾಡುತ್ತಾ ವಿಶ್ವ ಜ್ಞಾನಿ ಅಂಬೇಡ್ಕರ್ ಅವರ ಹೆಸರಿಗೂ ಮಸಿಬಳಿಯುತ್ತಿದ್ದಾನೆ ಎಂಬ ಆರೋಪ ಕೇಳಿ ಬರುತ್ತಿದೆ. ಈತ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹಾಗೂ ಅವರ ಪುತ್ರ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರಸ್ ಅಭ್ಯರ್ಥಿ ಸುನಿಲ್ ಬೋಸ್ ಜೊತೆ ಸಂಪರ್ಕ ಹೊಂದಿದ್ದು ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಸುನಿಲ್ ಬೋಸ್ ಜೊತೆ ಚುನಾವಣಾ ಪ್ರಚಾರದಲ್ಲೂ ಭಾಗಿಯಾಗಿರುತ್ತಾನೆ.
ತನ್ನ ಮಗಳ ವಯಸ್ಸಿನ ಮುಗ್ಧ ಬಾಲಕಿ ಅಲ್ಲದೆ ತನ್ನ ಸ್ವಂತ ತಂಗಿ ಮಗಳು ಎನ್ನುವುದನ್ನೂ ಲೆಕ್ಕಿಸದ ಈ ಕಾಮುಕ 16 ವರ್ಷದ ಅಪ್ರಾಪ್ತೆಯನ್ನು ಟ್ಯೂಷನ್ ಗೆ ಬಿಡುವುದಾಗಿ ನಂಬಿಸಿ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಮಾಡಿ, ನಂತರ ಯಾರಿಗೂ ಹೇಳಬೇಡ ಮೊಬೈಲ್ ಕೊಡಿಸುತ್ತೇನೆಂದು ಆಮಿಷ ತೋರಿಸಿ ಆಕೆಯ ಅಜ್ಜಿ ಮನೆಗೆ ಕರೆತಂದು ಬಿಟ್ಟು ಕೃತ್ಯ ಮರೆಮಾಚಲು ಯತ್ನಿಸಿದ್ದಾನೆ.
ಆದರೆ ಅತ್ಯಾಚಾರಕ್ಕೆ ಒಳಗಾದ ಬಾಲಕಿ ನೋವಿನಿಂದಾಗಿ ತನ್ನ ಮನೆಯವರಿಗೆ ಮಾಹಿತಿ ನೀಡಿದ್ದಾಳೆ. ಇದರಿಂದ ರೊಚ್ಚಿಗೆದ್ದ ಬಾಲಕಿಯ ತಾಯಿ ತನ್ನ ಒಡಹುಟ್ಟಿದ ಅಣ್ಣ ರಾಜೇಶ್ ಅಲಿಯಾಸ್
ದೈತ್ಯರಾಜ್ ವಿರುದ್ದ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ದೈತ್ಯರಾಜ್ ತಲೆ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.