ಇತ್ತೀಚಿನ ಸುದ್ದಿ
ಬಹಿಷ್ಕಾರ ಮನೆಯಲ್ಲಿ ಸಾವು: ಅಂತ್ಯಸಂಸ್ಕಾರಕ್ಕೆ ಪರದಾಡಿದ ಪೋಷಕರು; ಜಿಲ್ಲಾಧಿಕಾರಿಗಳ ಮಧ್ಯ ಪ್ರವೇಶ; ಕೊನೆಗೂ ಮೃತದೇಹಕ್ಕೆ ಮುಕ್ತಿ
21/04/2024, 10:53
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಬಹಿಷ್ಕಾರಕ್ಕೆ ಒಳಗಾದ ಕುಟುಂಬದಲ್ಲಿ ಸಾವನ್ನಪ್ಪಿದ ಅಂಗವಿಕಲ ಯುವಕನ ಅಂತ್ಯಸಂಸ್ಕಾರಕ್ಕೆ ಪೋಷಕರು ಪರದಾಡಿದ ಅಮಾನವೀಯ ಘಟನೆ ರಾಜ್ಯದ ಮುಖ್ಯಮಂತ್ರಿಯ ತವರು ಜಿಲ್ಲೆ ಮೈಸೂರಿನ ನಂಜನಗೂಡು ತಾಲೂಕು ತರಗನಹಳ್ಳಿ ಗ್ರಾಮದಲ್ಲಿ ನಡೆದಿದೆ.ಯುವಕನ ಅಂತ್ಯಸಂಸ್ಕಾರಕ್ಕೆ ಗ್ರಾಮದಲ್ಲಿ ಅವಕಾಶ ನೀಡದ ಹಿನ್ನಲೆ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಮೃತದೇಹಕ್ಕೆ ಮುಕ್ತಿ ದೊರಕಿಸಿದ್ದಾರೆ.
ಜಿಲ್ಲಾಧಿಕಾರಿಗಳ ಮೌಖಿಕ ಆದೇಶಕ್ಕೆ ತಹಸೀಲ್ದಾರ್ ಶಿವಕುಮಾರ್ ಕಾಸ್ನೋರು ಹಾಗೂ ರೆವೆನ್ಯೂ ಪ್ರಕಾಶ್ ಗ್ರಾಮಕ್ಕೆ ಭೇಟಿ ನೀಡಿ ಮುಖಂಡರ ಮನ ಒಲಿಸಿ ನಂತರ ಅಂತ್ಯಸಂಸ್ಕಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಹುಲಹಳ್ಳಿ ಸಮೀಪ ಇರುವ ತರಗನಹಳ್ಳಿಯ ನಿವಾಸಿ ಕುಳ್ಳನಾಯಕನ ಕುಟುಂಬದ ಮೇಲೆ ನಾಲ್ಕು ವರ್ಷಗಳ ಹಿಂದೆ ಮುಖಂಡರು ಬಹಿಷ್ಕಾರ ಹೇರಿದ್ದರು. ಬಹಿಷ್ಕಾರವನ್ನ ತೆರುವುಗೊಳಿಸಲು ಕುಳ್ಳನಾಯಕ ಹುಲ್ಲಹಳ್ಳಿಯ ಪೊಲೀಸ್ ಠಾಣೆ ಸೇರಿದಂತೆ ಸರ್ಕಾರಿ ಕಚೇರಿಗೆ ಸಾಕಷ್ಟು ಅಲೆದಾಡಿದ್ದ. ತಾಲೂಕು ಆಡಳಿತ ಸೂಕ್ತವಾಗಿ ಸ್ಪಂದಿಸಿರಲಿಲ್ಲ. ನಿನ್ನೆ ಕುಳ್ಳನಾಯಕನ ಮಗ 15 ವರ್ಷದ ಮಾದೇಶ ಮೃತಪಟ್ಟಿದ್ದಾನೆ. ಅಂತ್ಯಸಂಸ್ಕಾರ ಮಾಡಲು ಗ್ರಾಮದಲ್ಲಿ ಅವಕಾಶ ನೀಡಿಲ್ಲ ಹಾಗೂ ಯಾರೂ ಸಹ ಮುಂದೆ ಬಂದಿಲ್ಲ. ಇದರಿಂದ ನೊಂದ ಕುಳ್ಳನಾಯಕ ಮಗನ ಮೃತದೇಹವನ್ನ ಜಿಲ್ಲಾಧಿಕಾರಿಗಳ ಕಚೇರಿಗೆ ಕೊಂಡೊಯ್ಯಲು ಮುಂದಾಗಿದ್ದಾನೆ. ಈ ಮಾಹಿತಿ ಅರಿತ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಕುಳ್ಳನಾಯಕನ ಪರಿಸ್ಥಿತಿ ಅರಿತು ಕೂಡಲೇ ತಹಸೀಲ್ದಾರ್ ಗೆ ಸೂಚನೆ ನೀಡಿ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡುವಂತೆ ತಿಳಿಸಿದ್ದಾರೆ. ಎಚ್ಚೆತ್ತ ತಹಸೀಲ್ದಾರ್ ಶಿವಕುಮಾರ್ ಕಾಸ್ಮೂರು ಮತ್ತು ಪ್ರಕಾಶ್ ರವರು ಗ್ರಾಮದ ಮುಖಂಡರ ಮನ ಒಲಿಸಿ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿದ್ದಾರೆ. 21ನೇ ಶತಮಾನಕ್ಕೆ ಕಾಲಿಟ್ಟರೂ ಬಹಿಷ್ಕಾರದ ಪಿಡುಗಿನಿಂದ ಹೊರಬರಲು ಸಾಧ್ಯವಾಗಿಲ್ಲ. ಜಿಲ್ಲಾಧಿಕಾರಿಗಳ ಮಧ್ಯ ಪ್ರವೇಶದಿಂದ ಸಧ್ಯ ಅಂತ್ಯಕ್ರಿಯೆ ನಡೆಸಲಾಗಿದ್ದು ಮೃತದೇಹಕ್ಕೆ ಮುಕ್ತಿ ನೀಡಿದಂತಾಗಿದೆ.