ಇತ್ತೀಚಿನ ಸುದ್ದಿ
ಸ್ಟ್ಯಾಲಿನ್ ಅಲ್ಲ, ಆತನ ಅಪ್ಪನಿಂದಲೂ ಸನಾತನ ಧರ್ಮ ಅಲುಗಾಡಿಸಲು ಸಾಧ್ಯವಿಲ್ಲ: ಮಂಗಳೂರಿನಲ್ಲಿ ಚಕ್ರಮರ್ತಿ ಸೂಲಿಬೆಲೆ
09/10/2023, 23:50
ಮಂಗಳೂರು(reporterkarnataka.com): ಸ್ಟ್ಯಾಲಿನ್ ಅಲ್ಲ ಆತನ ಅಪ್ಪ, ಅಜ್ಜ ಯಾವನೊಬ್ಬನೂ ಪ್ರಯತ್ನಿಸಿದರೂ ಸನಾತನ ಧರ್ಮವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಚಕ್ರಮರ್ತಿ ಸೂಲಿಬೆಲೆ ಹೇಳಿದರು.
ಅವರು ಸೋಮವಾರ ನಗರದ ಕದ್ರಿ ಮೈದಾನದಲ್ಲಿ ವಿಶ್ವ ಹಿಂದೂ ಪರಿಷತ್, ಭಜರಂಗ ದಳದ ವತಿಯಿಂದ ನಡೆದ ಶೌರ್ಯ ಜಾಗರಣ ರಥಯಾತ್ರೆಯ ಬೃಹತ್ ಶೋಭಾಯಾತ್ರೆ ಮತ್ತು ಸಾರ್ವಜನಿಕ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ತಮಿಳುನಾಡಿನಲ್ಲಿ ಕುಳಿತು ಸನಾತನ ಧರ್ಮವನ್ನು ಕೊರೊನಾಗೆ ಹೋಲಿಸಿದ್ದಾನೆ. ಆತ ಏನಾದರೂ ಮಂಗಳೂರಿನಲ್ಲಿ ಬಂದು ಈ ಮಾತನ್ನು ಹೇಳಿದ್ದರೆ ಆತ ಇಲ್ಲಿಂದ ಜೀವಂತವಾಗಿ ಹೋಗುತ್ತಿರಲಿಲ್ಲ ಎಂದು ಸೂಲಿಬೆಲೆ ಗುಡುಗಿದರು.
ಯುವಕರು ಭಾರತವನ್ನು ಹಿಂದೂ ದೇಶವನ್ನಾಗಿ ಮಾಡಲು ಜಾಗೃತರಾಗಬೇಕು. ಇಲ್ಲವಾದಲ್ಲಿ ಇಸ್ರೇಲ್ ಮಾದರಿಯಲ್ಲಿ ನಮ್ಮ ದೇಶಕ್ಕೂ ದಾಳಿ ನಡೆಯಲಿದೆ. ಜನವರಿಯಲ್ಲಿ ರಾಮ ಮಂದಿರ ಉದ್ಘಾಟನೆಯಾಗಲಿದ್ದು, ಮತ್ತೆ ಭಾರತ ಹಿಂದೂ ಪುನರುತ್ಥಾನ ದಿನವಾಗಲಿದೆ. ಇದರೊಂದಿಗೆ ಯುವಕರು ನಮ್ಮ ಶ್ರದ್ಧಾಕೇಂದ್ರಗಳು ಹಾಗೂ ತಾಯಂದಿರನ್ನು ಉಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ವಿಶ್ವ ಹಿಂದೂ ಪರಿಷತ್ನ ಸಹ ಸಂಚಾಲಕ ಶರಣ್ ಪಂಪ್ವೆಲ್ ಮಾತನಾಡಿ, ರಾಮ ಮಂದಿರ ಉದ್ಘಾಟನಾ ದಿನವನ್ನು ದೇಶದಲ್ಲಿ ಸ್ವಾಭಿಮಾನ ದಿನವನ್ನಾಗಿ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಬೇಕೆಂದು ನಾಯಕರುಗಳಲ್ಲಿ ವಿನಂತಿಸಿಕೊಂಡರು.
ಓಂ ಶ್ರೀ ಶಕ್ತಿಗುರು ಮಠದ ಶ್ರೀ ಮುಕ್ತಾನಂದ ಸ್ವಾಮೀಜಿ ಮಾತನಾಡಿದರು.
ಭಜರಂಗದಳದ ಜಿಲ್ಲಾ ಸಂಯೋಜಕ ನವೀನ್ ಮೂಡುಶೆಡ್ಡೆ ಪ್ರಾಸ್ತಾವಿಕ ಮಾತನ್ನಾಡಿದರು.
ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತದ ಕಾರ್ಯಾಧ್ಯಕ್ಷ ಡಾ. ಎಂ.ಬಿ. ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ನಳಿನ್ ಕುಮಾರ್ ಕಟೀಲು, ಆರ್.ಎಸ್.ಎಸ್. ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್, ಶಾಸಕರುಗಳಾದ ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪ ಮೇಯರ್ ಸುನಿತಾ, ವಿಹೆಚ್ಪಿ ಮಂಗಳೂರು ಸಹ ಸಂಚಾಲಕ ಸುನೀಲ್ ಆಚಾರ್, ವಿಹೆಚ್ಪಿ ಮಂಗಳೂ ಅಧ್ಯಕ್ಷ ಎಚ್.ಕೆ. ಪುರುಷೋತ್ತಮ, ಪ್ರಮುಖರಾದ ಕೃಷ್ಣಮೂರ್ತಿ, ಮಹಾಬಲೇಶ್ವರ ಹೆಗ್ಡೆ, ಭುಜಂಗ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು. ಶೌರ್ಯ ಜಾಗರಣ ರಥಯಾತ್ರೆಯ ಸ್ವಾಗತ ಸಮಿತಿಯ ಅಧ್ಯಕ್ಷ ಗಿರಿಧರ್ ಶೆಟ್ಟಿ ಸ್ವಾಗತಿಸಿದರು.