ಇತ್ತೀಚಿನ ಸುದ್ದಿ
ಯುವ ಸಮುದಾಯ ಸಾಮಾಜಿಕವಾಗಿ ತೊಡಗಿಕೊಳ್ಳುವುದು ಅಗತ್ಯ: ರವಿ ನಾಯಕ್
28/09/2023, 14:56
ಚಿತ್ರ /ವರದಿ:ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ಸಂವಾದ ಯುವ ಸಂಪನ್ಮೂಲ ಕೇಂದ್ರ ಮಂಗಳೂರು, ಯುವ ಮುನ್ನಡೆ ತಂಡ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ “ಯುವಜನ ಹಬ್ಬ- ಕರ್ತವ್ಯ ಪಾಲನೆಗಾಗಿ ಯುವಜನ ಅಭಿವ್ಯಕ್ತಿ” ಎನ್ನುವ ಕಾರ್ಯಕ್ರಮ ನಗರದ ಸಂತ ಅಲೋಶಿಯಸ್ ಕಾಲೇಜಿನ ಎರಿಕ್ ಮಥಾಯಿಸ್ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯ ನಿರ್ದೇಶಕ ರವಿ ವೈ.ನಾಯಕ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ ಅವರು, ಯುವಜನರು ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಕೊಳ್ಳಬೇಕು. ದೇಶದ ಉತ್ತಮ ನಾಗರಿಕರಾಗಿ ರೂಪುಗೊಳ್ಳಲು ನಮ್ಮ ಫಂಡ್ ಮೆಂಟಲ್ ರೈಟ್ಸ್ ಅಗತ್ಯ. ಆ ನಿಟ್ಟಿನಲ್ಲಿ ಸಂವಾದ ಸಂಸ್ಥೆಯ ಈ ಕಾರ್ಯಕ್ರಮದ ಮೂಲ ಆಶಯ ಕಾರ್ಯಕಲ್ಪನೆ ಎಂಬುದು ಶ್ಲಾಘನೀಯ ವಿಷಯ ಎಂದರು.ಯುವಕರು ಓದಿ ವಿದ್ಯಾವಂತರಾಗುವುದು ಅಷ್ಟೇ ಅಲ್ಲದೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ನಿಜವಾದ ಜೀವನ. ಸಮಾಜ ಸೇವೆ ಮಾಡುವ ಮನೋಭಾವನೆ ಉಳ್ಳ ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾಯೋಜನೆಯಲ್ಲಿ ತೊಡಗಿಸಿ ಕೊಳ್ಳಿ ಎಂದು ಕರೆ ನೀಡಿದರು.
ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ.ನಾಗರತ್ನ ಕೆ.ಎ. ಮಾತನಾಡಿ,
ಸಮಾಜದ ವಾಸ್ತವಗಳ ಅರಿವು ಯುವ ಜನರಿಗೆ ಅಗತ್ಯ, ಮಾನಸಿಕ ವಾಗಿ ಸದೃಢರಾಗಲು ವಿಶ್ಲೇಷಿಸುವ ಮನೋಭಾವನೆ ಬೆಳೆಸಿಕೊಳ್ಳಿ ಎಂದು ಅವರು ಹೇಳಿದರು.
ಸಂತ ಅಲೋಶಿಯಸ್ ಕಾಲೇಜಿನ ರೆ.ಫಾ. ಮೆಲ್ವಿನ್ ಜೆ ಪಿಂಟೊ ಉಪಸ್ಥಿತರಿದ್ದರು.
ಯುವಜನರ ಸಂವಿಧಾನ ಬದ್ಧ ಮೂಲಭೂತ ಸೌಕರ್ಯಗಳು, ಯುವಜನರ ಆರೋಗ್ಯ, ಲಿಂಗ ನ್ಯಾಯ ಮತ್ತು ಸುಸ್ಥಿರ ಅಭಿವೃದ್ಧಿ ವಿಚಾರಗಳ ಗೋಷ್ಠಿಯನ್ನು ಯುವಜನರು ನಡೆಸಿಕೊಟ್ಟರು. ಯುವ ಮುನ್ನಡೆಯ ಒಡನಾಡಿಗಳು ಯುವಜನರ ಸಮಸ್ಯೆಗಳ ಕುರಿತು ಮಾಡಿದ ಅಧ್ಯಯನದ ವಿಷಯವನ್ನು ಮಂಡಿಸಿದರು.
ಕಾರ್ಯಕ್ರದ ಅಧ್ಯಕ್ಷತೆಯನ್ನು ಲೇಖಕಿ, ಚಿಂತಕಿ ಗುಲಾಬಿ ಬಿಳಿ ಮಲೆ ವಹಿಸಿದ್ದರು.
ಸಂವಾದ ಸಂಸ್ಥೆಯ ಮಂಜುಳಾ ಸುನೀಲ್ ಸ್ವಾಗತಿಸಿದರು, ಪವಿತ್ರಾ ಜ್ಯೋತಿಗುಡ್ಡೆ ವಂದಿಸಿದರು.