ಇತ್ತೀಚಿನ ಸುದ್ದಿ
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯಾದ್ಯಂತ ಮಳೆ ಸಾಧ್ಯತೆ; ಸೆ. 9,10ರಂದು ಕರಾವಳಿಯಲ್ಲಿ ಭಾರಿ ವರ್ಷಧಾರೆ ನಿರೀಕ್ಷೆ
07/09/2023, 10:53
ಬೆಂಗಳೂರು(reporterkarnataka.com): ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯಾದ್ಯಂತ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ.
ಭಾರತೀಯ ಹವಾಮಾನ ಇಲಾಖೆ ನೀಡಿದ ಅಧಿಕೃತ ಮಾಹಿತಿ ಪ್ರಕಾರ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಈ ವಾಯುಭಾರ ಕುಸಿತವು ಕರ್ನಾಟಕದ ಮೇಲೆ ಭಾರಿ ಮಳೆ ಸುರಿಸಲಿದೆ. ವಾಯುಭಾರ ಕುಸಿತ ಉಂಟಾದ ವಾಯವ್ಯ ಮತ್ತು ಪಶ್ಚಿಮ ಸಮುದ್ರ ಸ್ಥಳದಲ್ಲಿ ಸಮುದ್ರ ಮೇಲ್ಮೈನಲ್ಲಿ 7.6 ಕಿಲೋ ಮಿಟರ್ ಎತ್ತರದಲ್ಲಿ ಸುಳಿ ಗಾಳಿಯೊಂದು ಸೃಷ್ಟಿಯಾಗಿದೆ. ಇದು ದಕ್ಷಿಣಕ್ಕೆ ಓರೆಯಾಗಿದ್ದು, ಅದೇ ಮಾರ್ಗವಾಗಿ ದಟ್ಟಗಾಳಿ ಬೀಸುವ ಸಾಧ್ಯೆತೆಗಳು ಇದೆ.
ವಾಯುಭಾರ ಕುಸಿತ ಪ್ರಭಾವ ಕರ್ನಾಟಕದ ಉತ್ತರ ಒಳನಾಡು ಜಿಲ್ಲೆಗಳ ಮೇಲೆ ಹೆಚ್ಚಿರುತ್ತದೆ. ಈ ಕಾರಣದಿಂದ ಸೆಪ್ಟಂಬರ್ 7ರಂದು ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು ಜಿಲ್ಲೆಗಳಿಗೆ ಅತ್ಯಧಿಕ ಮಳೆ ಬರಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇದೇ ಭಾಗದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಹಗುರದಿಂದ ಸಾಧಾರಣವಾಗಿ ಮಳೆ ಆಗಲಿದೆ. ನಂತರ ಎರಡು ದಿನ ತುಂತುರು ಮಳೆ ಆಗಲಿದೆ. ಇದರೊಂದಿಗೆ ಕರಾವಳಿ ಜಿಲ್ಲೆಗಳಲ್ಲಿ ಸೆಪ್ಟಂಬರ್ 9 ಮತ್ತು 10 ರಂದು ವ್ಯಾಪಕ ಮಳೆ ಬರಲಿದ್ದು, ಈ ಎರಡು ದಿನ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.
ಮುಂದಿನ ನಾಲ್ಕೈದು ಹಗುರ ಮಳೆ ಕೆಲವು ಕಡೆಗಳಲ್ಲಿ ಮಾತ್ರ ಜೋರು ಮಳೆ ಆಗುವ ಲಕ್ಷಣಗಳು ಇವೆ ಎಂದು ಅವರು ಮಾಹಿತಿ ನೀಡಿದ್ದಾರೆ. ವಾಯುಭಾರ ಕುಸಿತ ಪರಿಣಾಮ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನ ಕಡಿಮೆಯಾಗಿ ಚಳಿ-ಮಳೆ ವಾತಾವರಣ ಹೆಚ್ಚಿರಲಿದೆ ಎಂದು ತಿಳಿದು ಬಂದಿದೆ.