2:22 AM Friday26 - April 2024
ಬ್ರೇಕಿಂಗ್ ನ್ಯೂಸ್
ಚಳ್ಳಕೆರೆ ತಾಲೂಕಿನಲ್ಲಿ ಶಾಂತಿಯುತ ಮತದಾನ: ಚುನಾವಣೆ ಕರ್ತವ್ಯನಿರತ ಮಹಿಳಾ ಸಿಬ್ಬಂದಿ ಸಾವು ನಂಜನಗೂಡಿನಲ್ಲಿ ಶಾಂತಿಯುತ ಚುನಾವಣೆ: ಸಂಜೆ 4ಕ್ಕೆ ಸುಮಾರು ಶೇ.65 ಮತದಾನ ಸ್ಪೀಕರ್ ಖಾದರ್ ಆಪ್ತ ಸಹಾಯಕ ಮಹಮ್ಮದ್ ಲಿಬ್ಝೆತ್ ಮತದಾನ ; ಪದ್ಮರಾಜ್ ಗೆಲುವಿನ… ಜನಾರ್ದನ ಪೂಜಾರಿ ಮಾದರಿಯಲ್ಲಿ ಪದ್ಮರಾಜ್ ಪೂಜಾರಿ ಅಭಿವೃದ್ಧಿಯ ಹರಿಕಾರ ಆಗಲಿದ್ದಾರೆ: ಲಿಬ್‌ಝಿತ್ ಅಭಿಮತ ನೈಟ್ ಸರ್ವಿಸ್ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿ ಬೆಳ್ತಂಗಡಿ ನಿವಾಸಿಯ ಬಂಧನ ರಾಜ್ಯದ 14 ಕ್ಷೇತ್ರಗಳಲ್ಲಿ ನಾಳೆ ಮೊದಲ ಹಂತದ ಚುನಾವಣೆ: ಕರಾವಳಿಯಲ್ಲಿ ಸಕಲ ಸಿದ್ದತೆ;… ನಂಜನಗೂಡಿನ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ: ಮತಗಟ್ಟೆಯ ಅಧಿಕಾರಿಗಳಿಗೆ ಪಾಠ; ಜಾಗೃತಿಯಾಗಿ ಕರ್ತವ್ಯ… ನಾವು ಇಂದೇ ಹೊಂಟೇವು ಮತಗಟ್ಟೆಗೆ; ನೀವು ನಾಳೆ ತಪ್ಪದೆ ಬನ್ನಿ ಮತದಾನಕ್ಕೆ ದ.ಕ. ಲೋಕಸಭೆ ಕ್ಷೇತ್ರ: ರಾಹುಲ್, ಪ್ರಿಯಾಂಕಾ ಬಾರದೆ, ಸ್ಟಾರ್ ಕ್ಯಾಂಪೇನರ್ ಇಲ್ಲದೆ ಚುನಾವಣೆ… ಬಹಿರಂಗ ಪ್ರಚಾರದ ಕೊನೆಯ ದಿನ: ಅನುಭವ, ಕಾರ್ಯಸೂಚಿ ತೆರೆದಿಟ್ಟ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್…

ಇತ್ತೀಚಿನ ಸುದ್ದಿ

ಲೋಕಸಭೆ ಚುನಾವಣೆ: ನಳಿನ್, ಡಿವಿ, ಮಂಗಳಾ ಅಂಗಡಿ ಸಹಿತ 10ಕ್ಕೂ ಹೆಚ್ಚು ಸಂಸದರು ಸ್ಪರ್ಧೆಯಿಂದ ಔಟ್?

03/06/2023, 13:09

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಏಟು ತಿಂದ ಬಿಜೆಪಿ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದು, ಕನಿಷ್ಠ 10 ಮಂದಿ ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸುವ ಸಾಧ್ಯತೆಗಳು ದಟ್ಟವಾಗಿದೆ.
ಮೊನ್ನೆ ಮೊನ್ನೆ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದ ಜಿಲ್ಲೆಗಳಲ್ಲಿ ಹೀನಾಯ ಸೋಲು ಅನುಭವಿಸಿತ್ತು. ಸೋಲಿನ ಕಾರಣ ಕಂಡುಕೊಳ್ಳಲು ಕೋರ್ ಕಮಿಟಿ ಸಭೆ ಕರೆಯಲು ಕೂಡ ಬಿಜೆಪಿ ಸಾಧ್ಯವಾಗಲಿಲ್ಲ. ಪಕ್ಷದ ಕೋರ್ ಕಮಿಟಿಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಲಕ್ಷಣ ಸವದಿ ಅವರು ಈಗಾಗಲೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಹೊಸ ಕೋರ್ ಕಮಿಟಿ ರಚನೆಯ ಅನಿವಾರ್ಯತೆ ಬಿಜೆಪಿಗೆ ಎದುರಾಗಿದೆ. ರಾಜ್ಯದಲ್ಲಿ ಪಕ್ಷದ ಹೀನಾಯ ಸೋಲಿನ ಕಾರಣವನ್ನು ಬಿಜೆಪಿ ಹೈಕಮಾಂಡ್ ಕೇಳಿದೆ. ಇವೆಲ್ಲದರ ನಡುವೆ ರಾಜ್ಯ ಬಿಜೆಪಿಗೆ ನೂತನ ಅಧ್ಯಕ್ಷರ ಹಾಗೂ ಪ್ರತಿಪಕ್ಷದ ನಾಯಕನ ಆಯ್ಕೆ ನಡೆಯಬೇಕಾಗಿದೆ. ಇದೆಲ್ಲ ಪ್ರಸ್ತುತ ಬಿಜೆಪಿ ಮುಂದಿರುವ ಸವಾಲುಗಳಾಗಿವೆ.
ಮುಂಬರುವ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಬದಲಾವಣೆ ಪ್ರಕ್ರಿಯೆ ಪಕ್ಷದ ರಾಜ್ಯಾಧ್ಯರಾಗಿರುವ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅವರಿಂದಲೇ ಆರಂಭವಾಗಲಿದೆ. ಕರಾವಳಿ ಭಾಗದಲ್ಲಿ ಪಕ್ಷದೊಳಗೆ ನಳಿನ್ ವಿರುದ್ದ ಅಸಮಾಧಾನ ದಿನ ಕಳೆದಂತೆ ಹೆಚ್ಚಾಗುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಿಂದ ಬಂಡಾಯವಾಗಿ ಸ್ಪರ್ಧಿಸಿದ್ದ ಅರುಣ್ ಪುತ್ತಿಲ ಅವರು 60 ಸಾವಿರ ಮತಗಳನ್ನು ಪಡೆದು ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ವಿಧಾನ ಸಭೆ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಕಾಂಗ್ರೆಸ್ ನ ಅಶೋಕ್ ಕುಮಾರ್ ರೈ ಎದುರು ಸೋಲು ಅನುಭವಿಸಿದ ಪುತ್ತಿಲ್ಲ ಅವರನ್ನು ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದಂತೆ ಲೋಕಸಭೆಯ ಅಭ್ಯರ್ಥಿಯಾಗಿ ಬಿಂಬಿಸಲಾಗಿದೆ. ಪುತ್ತಿಲ ಪರಿವಾರ ರಚನೆ ಮಾಡಲಾಗಿದೆ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆಯ ಬಳಿಕ ನಳಿನ್ ವಿರುದ್ಧ ಬಿಜೆಪಿ ಕಾರ್ಯಕರ್ತರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೊರ ಹಾಕಲಾರಂಭಿಸಿದ್ದಾರೆ. ಬಿಜೆಪಿ ಅಧ್ಯಕ್ಷರ ಕಾರನ್ನು ಅಲುಗಾಡಿಸುವುದರಿಂದ ಆರಂಭಗೊಂಡ ಶೇಕಿಂಗ್ ಪ್ರಕ್ರಿಯೆ ರಾಜ್ಯಾಧ್ಯಕ್ಷ ಕುರ್ಚಿ ಅಲುಗಾಡುವವರೆಗೆ ಮುಂದುವರಿದಿದೆ.
ವಿಧಾನ ಸಭೆ ಫಲಿತಾಂಶದ ಬಗ್ಗೆ ಬಿಜೆಪಿ ಹೈಕಮಾಂಡ್ ಫುಲ್ ಗರಂ ಆಗಲು ಕಾರಣ ಕೂಡ ಇದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಪಾಲಿಗೆ ಹೆಬ್ಬಾಗಿಲಿನಂತಿದ್ದ ಕರ್ನಾಟಕದಲ್ಲಿ ಪಕ್ಷ ಸೋತಿರುವುದು ಹೈಕಮಾಂಡ್ ಗೆ ಅರಗಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯನ್ನು ನಿರ್ಮಿಸಿದೆ. ಈ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಸ್ಪರ್ಧೆಯಿಂದ ತಾವಾಗಿಯೇ ಹಿಂದೆ ಸರಿಯುವಂತೆ ರಾಜ್ಯದ ಹಾಲಿ 25 ಮಂದಿ ಬಿಜೆಪಿ ಸಂಸದರ ಪೈಕಿ ಸುಮಾರು 10 ಮಂದಿ ಸಂಸದರಿಗೆ ಸೂಚನೆ ನೀಡಲು ಬಿಜೆಪಿ ಹೈಕಮಾಂಡ್ ತಯಾರಿ ನಡೆಸಿದೆ ಎನ್ನಲಾಗಿದೆ. ಬೆಳಗಾವಿಯಿಂದ ಮಂಗಳಾ ಅಂಗಡಿ, ಮಂಗಳೂರಿನಿಂದ ನಳಿನ್ ಕುಮಾರ್ ಕಟೀಲ್, ಬೆಂಗಳೂರು ಉತ್ತರದಿಂದ ಡಿ.ವಿ.ಸದಾನಂದ ಗೌಡ ಅವರಿಗೆ ಟಿಕೆಟ್ ನಿರಾಕರಿಸಲಾಗುತ್ತದೆ. ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ನಿಧನದಿಂದ ತೆರವಾದ ಬೆಳಗಾವಿ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಅವರ ಪತ್ನಿಯಾದ ಮಂಗಳಾ ಅಂಗಡಿ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಕುಟುಂಬ ರಾಜಕಾರಣಕ್ಕೆ ಪಕ್ಷದಲ್ಲಿ ಅವಕಾಶವಿಲ್ಲ ಎಂದು ಹೇಳುತ್ತಾ ಬಂದಿರುವ ಬಿಜೆಪಿ ಬೆಳಗಾವಿಯಲ್ಲಿ ಮಂಗಳಾ ಅಂಗಡಿ ಅವರಿಗೆ ಮಣೆ ಹಾಕಿದರೆ, ಬೆಂಗಳೂರು ದಕ್ಷಿಣದಲ್ಲಿ ಅನಂತ ಕುಮಾರ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಅವರ ಪತ್ನಿ ತೇಜಸ್ವಿನಿ ಅನಂತ ಕುಮಾರ್ ಅವರಿಗೆ ಅವಕಾಶ ನೀಡಲಿಲ್ಲ. ಡಿಎನ್ ಎ ನೋಡಿ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿಕೆ ನೀಡಿದ್ದರು. ಇಷ್ಟೇ ಅಲ್ಲದೆ ಮಂಗಳಾ ಅಂಗಡಿ ಅವರು ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ವಿರುದ್ಧ ಅಲ್ಪ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಅದಲ್ಲದೆ ಮಂಗಳಾ ಅವರ ಸೊಸೆ ಇತ್ತೀಚೆಗೆ ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಡರ್ ಅವರ ಪುತ್ರಿಯಾಗಿದ್ದಾರೆ.
ಹಾಗೆ ವಿಜಯಪುರದಿಂದ ರಮೇಶ್ ಜಿಗಜಿಣಗಿ, ತುಮಕೂರಿನಿಂದ ಜೆ.ಎಸ್. ಬಸವರಾಜು, ಚಿಕ್ಕಬಳ್ಳಾಪುರದಿಂದ ಬಚ್ಚೇಗೌಡ, ದಾವಣಗೆರೆಯಿಂದ ಸಿದ್ದೇಶ್ವರ, ಚಾಮರಾಜನಗರದಿಂದ ಶ್ರೀನಿವಾಸ ಪ್ರಸಾದ್, ಉತ್ತರ ಕನ್ನಡದಿಂದ ಅನಂತ ಕುಮಾರ್ ಹೆಗಡೆ ಅವರು ಸ್ಪರ್ದೆಯಿಂದ ಹಿಂದೆ ಸರಿಯುವ ಸಾಧ್ಯತೆಗಳಿವೆ. ರಮೇಶ್ ಜಿಗಜಿಣಗಿ, ಶ್ರೀನಿವಾಸ ಪ್ರಸಾದ್ ಹಾಗೂ ಬಚ್ಚೇಗೌಡ ಅವರು ವಯಸ್ಸಿನ ಕಾರಣ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲದ ಹಿನ್ನೆಲೆಯಲ್ಲಿ ತಾವಾಗಿಯೇ ಸ್ಪರ್ಧೆಯಿಂದ ಹಿಂದೆ ಸರಿಯುವ ಸಾಧ್ಯತೆ ಹೆಚ್ಚಾಗಿದೆ.
ಉತ್ತರ ಕನ್ನಡದ ಅನಂತ ಕುಮಾರ್ ಹೆಗಡೆ ಅವರು ಸುಮಾರು 2 ವರ್ಷಗಳಿಂದ ಪಕ್ಷದ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಸಂದರ್ಭ ದಲ್ಲೂ ಅನಂತ ಕುಮಾರ್ ಹೆಗಡೆ ಅವರು ಆಗಮಿಸಲಿಲ್ಲ. ಹಾಗೆಂತ ಅನಂತ ಕುಮಾರ್ ಹೆಗಡೆ ಬಿಜೆಪಿ ತೊರೆಯುತ್ತಾರೆ ಅಥವಾ ಹಿಂದುತ್ವ ಕೈಬಿಡುತ್ತಾರೆ ಎಂದು ಅರ್ಥವಲ್ಲ. ಆರೋಗ್ಯ ಸಮಸ್ಯೆಯಿಂದ ಅವರಿಗೆ ರಾಜಕೀಯ ಚಟುವಟಿಕೆ ನಡೆಸಲಾಗುತ್ತಿಲ್ಲ ಎಂಬ ಮಾಹಿತಿ ಇದೆ. ಚಿಕ್ಕಬಳ್ಳಾಪುರದ ಬಿಜೆಪಿ ಸಂಸದ ಬಚ್ಚೇಗೌಡ ಅವರು ಕಾಂಗ್ರೆಸ್ ಪರ ಒಲವು ಹೊಂದಿದ್ದಾರೆ. ಅವರ ಮಗ ಶರತ್ ಬಚ್ಚೇಗೌಡ ಅವರು ಈಗಾಗಲೇ ಕಾಂಗ್ರೆಸ್ ಸೇರಿದ್ದಾರೆ. ಇನ್ನು ಹಾವೇರಿ ಬಿಜೆಪಿ ಸಂಸದ ಶಿವಕುಮಾರ್ ಉದಾಸಿ ಅವರು ಕೂಡ ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ ಎನ್ನಲಾಗಿದೆ. ಇವೆಲ್ಲದರ ನಡುವೆ ಬಿಜೆಪಿಗೆ ಸುಮಾರು ಒಂದು ಡಜನ್ ಕ್ಷೇತ್ರಗಳಿಗೆ ಅಭ್ಯರ್ಥಿ ಗಳ ಹುಡುಕಾಟ ಅನಿವಾರ್ಯವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು