ಇತ್ತೀಚಿನ ಸುದ್ದಿ
ರಾಜ್ಯದ ಹಲವೆಡೆ ಆರ್ ಟಿಒ ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ದಾಳಿ: ಹಲವು ಅಧಿಕಾರಿಗಳು ಬಲೆಗೆ?
30/09/2022, 12:27
ಬೆಂಗಳೂರು(reporterkarnataka.com): ಲೋಕಾಯುಕ್ತ ಅಧಿಕಾರಿಗಳ ತಂಡ ರಾಜ್ಯದ ಹಲವೆಡೆ ಚೆಕ್ ಪೋಸ್ಟ್ ಗಳ ಮೇಲೆ ಏಕಕಾಲದಲ್ಲಿ ಇಂದು ಧಿಡೀರ್ ದಾಳಿ ನಡೆಸಿದ್ದು, ಬೆಳ್ಳಂಬೆಳಗ್ಗೆ ಸಾರಿಗೆ ಇಲಾಖಾಧಿಕಾರಿಗಳಿಗೆ ಶಾಕ್ ನೀಡಿದೆ.
ಬೀದರ್ ನ ಹುಮ್ನಾಬಾದ್, ಚೆಕ್ ಪೋಸ್ಟ್, ಬಳ್ಳಾರಿಯ ಹಗರಿ ಚೆಕ್ ಪೋಸ್ಟ್, ಅತ್ತಿಬೆಲೆಯ ಆರ್.ಟಿ.ಒ. ಚೆಕ್ ಪೋಸ್ಟ್ ಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಬೀದರ್ -ಕಲಬುರ್ಗಿ ಲೋಕಾಯುಕ್ತ ಎಸ್.ಪಿ. ನೇತೃತ್ವದ ತಂಡ ಬೆಳಗಿನ ಜಾವ ನಾಲ್ಕು ಗಂಟೆಗೆ ದಾಳಿ ನಡೆಸಿದ್ದು, ಚೆಕ್ ಪೋಸ್ಟ್ ನಲ್ಲಿ ಒಂದೂವರೆ ಲಕ್ಷ ರೂಪಾಯಿ ಪತ್ತೆಯಾಗಿದೆ. ಇದು ದಂಡದ ಹಣವೇ ಅಥವಾ ಲಂಚದ ಹಣವೇ ಎಂಬುದರ ಪರಿಶೀಲನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿಯಲ್ಲಿ ಬೆಂಗಳೂರು -ಮುಂಬೈ ರಾಷ್ಟ್ರೀಯ ಹೆದ್ದಾರಿ 4 ರಲ್ಲಿರುವ ಚೆಕ್ಪೋಸ್ಟ್ ಮೇಲೆ ದಾಳಿ ನಡೆಸಲಾಗಿದೆ. ವಿಜಯಪುರ ಹೊರವಲಯದ ಚೆಕ್ಪೋಸ್ಟ್ ಮೇಲೆಯೂ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ.