ಇತ್ತೀಚಿನ ಸುದ್ದಿ
ಮಡಿಕೇರಿ ಚಲೋಗೆ ಮಹತ್ವ ಬೇಡ; ಇದು ಜನಹಿತ ಪಾದಯಾತ್ರೆಯಲ್ಲ: ಮಾಜಿ ಸಿಎಂ ಕುಮಾರಸ್ವಾಮಿ
23/08/2022, 11:16
ಹಾಸನ (reporterkarnataka.com): ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ ಖಂಡಿಸಿ ಆ.26 ರಂದು ಕಾಂಗ್ರೆಸ್ ಹಮ್ಮಿಕೊಂಡಿರುವ ಮಡಿಕೇರಿ ಚಲೋ ಮತ್ತು ಎಸ್ಪಿ ಕಚೇರಿ ಮುತ್ತಿಗೆ ಕಾರ್ಯಕ್ರಮಕ್ಕೆ ನಾನೇನು ಮಹತ್ವ ಕೊಡುವುದಿಲ್ಲ, ಜನವೂ ಮಹತ್ವ ಕೊಡದೆ ಇರುವುದೇ ಒಳಿತು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಅದೇನು ಜನಗಳ ಪರವಾಗಿ, ಜನತೆಯ ಹಿತಕ್ಕಾಗಿ ಮಾಡುತ್ತಿರುವ ಪಾದಯಾತ್ರೆಯೇನಲ್ಲ. ಅದಕ್ಕೆ ಜನ ಯಾವುದೇ ರೀತಿಯ ಪ್ರೋತ್ಸಾಹ ಕೊಡದಿರುವುದು ಒಳಿತು. ವಿರೋಧ ಪಕ್ಷದ ನಾಯಕರ ಮೇಲೆ ಮೊಟ್ಟೆಎಸೆದರು ಅಂತ ಅದಕ್ಕೊಂದು ಪಾದಯಾತ್ರೆ, ಅದರ ವಿರುದ್ಧವಾಗಿ ಇನ್ನೊಂದು ಪಾದಯಾತ್ರೆ. ಎರಡು ರಾಷ್ಟ್ರೀಯ ಪಕ್ಷಗಳ ಬೇಜವಾಬ್ದಾರಿ ನಡವಳಿಕೆ ರಾಜ್ಯದ ಜನತೆಯ ಸಮಸ್ಯೆಗೆ ಪೂರಕವಾದುದಲ್ಲ. ಎರಡೂ ಪಕ್ಷಗಳಿಗೆ ಭಗವಂತನೇ ಬುದ್ಧಿಕೊಡಬೇಕೆಂಬುದು ನನ್ನ ಅಭಿಪ್ರಾಯ ಎಂದರು.