ಇತ್ತೀಚಿನ ಸುದ್ದಿ
ಹನಿಟ್ರ್ಯಾಪಿಗೂ ಜಗ್ಗದ ಕಾಡಾನೆ!!: ಹೆಣ್ಣಾನೆ ಮೂಲಕ ದಾಂಧಲೆಕೋರ ಒಂಟಿ ಸಲಗದ ಸೆರೆಗೆ ಯತ್ನ
22/08/2022, 20:15
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಳೆದ ನಾಲ್ಕೈದು ತಿಂಗಳಿನಿಂದ ಗ್ರಾಮಸ್ಥರಿಗೆ ಕಾಟ ಕೊಡುತ್ತಿರುವ ಒಂಟಿ ಸಲ್ದಾನಾ ಸೆರೆಗೆ ಕಾರ್ಯಾಚರಣೆ ನಡೆಸುತ್ತಿರುವ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆನೆಯನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ. ಶಿವಮೊಗ್ಗದಿಂದ ಹೆಣ್ಣಾನೆಯನ್ನು ತಂದರೂ ಅದು ಹೆಣ್ಣಿನ ಮೋಹಕ್ಕೆ ಬೀಳದೆ ಅರಣ್ಯ ಸಿಬ್ಬಂದಿಗಳಿಗೆ ಚಳ್ಳೆಹಣ್ಣು ತಿನ್ನಿಸುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಮೇಗುಂದಾ ಹೋಬಳಿಯ ಸುತ್ತಮುತ್ತ ಕಳೆದ ನಾಲ್ಕೈದು ತಿಂಗಳಿಂದ ಪುಂಡಾನೆ ಕಾಟ ಕೊಡುತ್ತಿದೆ. ಇಡೀ ರಾತ್ರಿ ದಾಂಧಲೆ ಮಾಡಿ ಹಗಲಲ್ಲಿ ಸುತ್ತಲೂ ಪ್ರಪಾತವಿರುವ ಎತ್ತರದ ಜಾಗದಲ್ಲಿ ನಿಲ್ಲುತ್ತಿತ್ತು. ಇದರಿಂದ ಅಧಿಕಾರಿಗಳು ಹಾಗೂ ಸ್ಥಳಿಯರು ಹೈರಾಣಾಗಿದ್ದರು. ಈ ಪುಂಡಾನೆಯನ್ನ ಹಿಡಿಯಲು ಶಿವಮೊಗ್ಗದಿಂದ ಸಾಕಾನೆಗಳನ್ನ ಕರೆಸಿದ್ದರು. ಮೂರು ದಿನದಿಂದ ಕಾರ್ಯಾಚರಣೆ ನಡೆಸಿದರು ಒಂಟಿ ಸಲಗ ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸುತ್ತಿದೆ. 11 ಮಾವುತರು, ಐದು ಸಾಕಾನೆಗಳು, ಅಧಿಕಾರಿಗಳು ಸೇರಿ 25ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು ಆನೆ ಸೆರೆಯಾಗಿಲ್ಲ. ಈಗಲೂ ಹಗಲಲ್ಲಿ ದಾಂಧಲೆ ನಡೆಸುತ್ತಿರೋ ಒಂಟಿ ಸಲಗ ಮೇಗುಂದ ಹೋಬಳಿಯ ಗುಡ್ಡದ ಎತ್ತರಕ್ಕೆ ಹೋಗಿ ನಿಲ್ಲುತ್ತಿದೆ. ಸುತ್ತಲೂ ಪ್ರಪಾತವಿದ್ದು, ಬೆದರಿಸಿದರೆ ಬಿದ್ದು ಪ್ರಾಣ ಕಳೆದುಕೊಳ್ಳಬಹುದು ಎಂದು ಅಧಿಕಾರಿಗಳು ಆನೆಯನ್ನ ಬೆದರಿಸಲು ಮುಂದಾಗದೆ ಸೆರೆ ಹಿಡಿಯಲು ಮುಂದಾಗಿದ್ದಾರೆ. ಆದರೆ ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಸಾಕು ಹೆಣ್ಣಾನೆ ಭಾನುಮತಿ ಮೂಲಕ ಒಂಟಿ ಸಲಗಕ್ಕೆ
ಹನಿಟ್ರ್ಯಾಪ್ ಮೂಲಕ ಸೆರೆ ಹಿಡಿಯಲು ಮುಂದಾದರೂ ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಮೂರು ದಿನದಿಂದ ಉಪಯೋಗವಿಲ್ಲದ ಕಾರ್ಯಚರಣೆ ನಡೆಸುತ್ತಿದ್ದಾರೆ. ಅಧಿಕಾರಿಗಳು ಎಷ್ಟೆ ಪ್ರಯತ್ನಪಟ್ಟರೂ ಒಂಟಿ ಸಲಗವನ್ನ ಸೆರೆ ಹಿಡಿಯಲು ಸಾಧ್ಯವಾಗುತ್ತಿಲ್ಲ. ಹಾವೇರಿಯಲ್ಲಿ ಸೆರೆ ಹಿಡಿದಿದ್ದ ಈ ಪುಂಡಾನೆಗೆ ಹಾವೇರಿ ಟಸ್ಕರ್ ಕೊರಳಿಗೆ ರೇಡಿಯೋ ಕಾಲರ್ ಇದ್ದು ಅದು ಇರುವ ನಿಖರ ಜಾಗ ತಿಳಿದಿದ್ದರೂ ಅಧಿಕಾರಿಗಳೂ ಏನೂ ಮಾಡದ ಸ್ಥಿತಿಯಲ್ಲಿದ್ದು ಪುಂಡಾನೆ ಮುಂದೆ ಅಸಹಾಯಕರಾಗಿದ್ದಾರೆ.