ಇತ್ತೀಚಿನ ಸುದ್ದಿ
ಕಾಲ್ತೋಡು: ಕಾಲು ಸಂಕದಿಂದ ಆಯತಪ್ಪಿ ಬಿದ್ದು ನೀರು ಪಾಲಾಗಿದ್ದ ಶಾಲಾ ಬಾಲಕಿಯ ಮೃತದೇಹ ಪತ್ತೆ
10/08/2022, 20:12
ಬೈಂದೂರು(reporterkarnataka.com): ಶಾಲೆಯಿಂದ ಮನೆಗೆ ವಾಪಸಾಗುತ್ತಿದ್ದ
ವೇಳೆ ಕಾಲುಸಂಕದಿಂದ ನೀರಿಗೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದ ಬಾಲಕಿ ಸನ್ನಿಧಿ(7) ಮೃತದೇಹ ಘಟನೆ ನಡೆದು 48 ತಾಸಿನ ಬಳಿಕ ಪತ್ತೆಯಾಗಿದೆ.
ಕಾಲ್ತೋಡು ಗ್ರಾಮದ ಮಕ್ಕಿಮನೆ ನಿವಾಸಿ 2ನೇ ತರಗತಿಯ ವಿದ್ಯಾರ್ಥಿನಿ ಸನ್ನಿಧಿಯ ಮೃತದೇಹ ಬುಧವಾರ ಸಂಜೆ ದುರ್ಘಟನೆ ನಡೆದ ಸ್ಥಳದಿಂದ 400 ಮೀಟರ್ ಅಂತರದಲ್ಲಿ ಪತ್ತೆಯಾಗಿದೆ.
ಸೋಮವಾರ ಸಂಜೆ ಶಾಲೆಯಿಂದ ಮನೆಗೆ ವಾಪಸಾಗುತ್ತಿದ್ದ ಬಾಲಕಿ ಕಾಲು ಸೇತುವೆಯಲ್ಲಿ ಆಯತಪ್ಪಿ ನೀರಿಗೆ ಬಿದ್ದಿದ್ದಳು. ಘಟನೆ ನಡೆದ ಬಳಿಕ ಬಾಲಕಿಯ ಪತ್ತೆಗಾಗಿ ನಿರಂತರ ಶೋಧ ಕಾರ್ಯ ನಡೆದಿತ್ತು. ಇದೀಗ ಬುಧವಾರ ಸಂಜೆ ಅಗ್ನಿಶಾಮಕ ದಳ ಸಿಬ್ಬಂದಿ, ಈಜುಪಟುಗಳಾದ ಮೀನುಗಾರ ನರೇಶ್ ಕೊಡೇರಿಯವರ ಮುಂದಾಳತ್ವದ 22 ಜನರ ತಂಡ, ಸಾರ್ವಜನಿಕರೂ ಸೇರಿ ನೂರಕ್ಕೂ ಅಧಿಕ ಮಂದಿ ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಕಾರ್ಯಾಚರಣೆಗೆ ಎರಡು ದೋಣಿ ಗಳನ್ನು ಬಳಿಸಿಕೊಳ್ಳಲಾಗಿತ್ತು.