ಇತ್ತೀಚಿನ ಸುದ್ದಿ
ಫೆ. 7ರಂದು ಮಂಗಳೂರು ರಥೋತ್ಸವ: ಪೂರ್ವಭಾವಿ ನೂತನ ಬ್ರಹ್ಮರಥ ಸಮರ್ಪಣೆ
02/02/2022, 18:23
ಚಿತ್ರ : ಮಂಜು ನೀರೇಶ್ವಾಲ್ಯ
ಮಂಗಳೂರು(reporterkarnataka.com) : ಇತಿಹಾಸ ಪ್ರಸಿದ್ಧ ” ಮಂಗಳೂರು ರಥೋತ್ಸವ ” ಫೆಬ್ರವರಿ 7ರಂದು ನಡೆಯಲಿದ್ದು, ಇದರ ಪೂರ್ವಾಂಗ ಈ ಬಾರಿ ನೂತನವಾಗಿ ನಿರ್ಮಾಣಗೊಂಡ ಬ್ರಹ್ಮರಥವನ್ನು ಇಂದು ಸಮರ್ಪಿಸಲಾಯಿತು.
ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಬುಧವಾರ ಪೂರ್ವಾಹ್ನ 12:44 ರ ಅಭಿಜಿನ್ ಮುಹೂರ್ತದಲ್ಲಿ ರಥ ಸಮರ್ಪಣೆ ನೆರವೇರಿತು. ಬೆಳಿಗ್ಗೆ ಶ್ರೀ ದೇವರ ಸನ್ನಿಧಾನದಲ್ಲಿ ಮಹಾ ಪ್ರಾರ್ಥನೆ ತದನಂತರ ವಿದ್ವತ್ ವೈದಿಕರಿಂದ ಯಾಗ ಶಾಲೆಯಲ್ಲಿ ರಥ ಸಮರ್ಪಣಾ ಯಜ್ಞ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ 11:30ಕ್ಕೆ ಯಜ್ಞ ಮಹಾ ಪೂರ್ಣಾಹುತಿ ನೆರವೇರಿತು. ಬಳಿಕ ಪ್ರಧಾನ ವೀರ ವೆಂಕಟೇಶ ಮತ್ತು ಉತ್ಸವ ಶ್ರೀನಿವಾಸ ದೇವರ ರಥಾರೋಹಣ ನಡೆಯಿತು.
ಇದೇ ಸಂದರ್ಭದಲ್ಲಿ ನೂತನ ರಥ ಸಮರ್ಪಣೆ ಗೆ ಸೇವೆ ಸಲ್ಲಿಸಿದ ಮಹನೀಯರಿಗೆ ಶ್ರೀಗಳವರ ದಿವ್ಯ ಹಸ್ತಗಳಿಂದ ಗಂಧ ಪ್ರಸಾದ ನೀಡಲಾಯಿತು. ರಾತ್ರಿ ದೇವಸ್ಥಾನದ ಒಳಾಂಗಣದಲ್ಲಿ ಶ್ರೀಗಳವರ ಉಪಸ್ಥಿತಿಯಲ್ಲಿ ಸ್ವರ್ಣ ಗರುಡವಾಹನ ಸೇವೆ ನಡೆಯಿತು. ದೇವಳ ದ ಮೊಕ್ತೇಸರರಾದ ಸಿ ಎಲ್ ಶೆಣೈ , ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ ಉಪಸ್ಥಿತರಿದ್ದರು.