ಇತ್ತೀಚಿನ ಸುದ್ದಿ
ಸರಕಾರದ ವಿಶೇಷ ಪ್ಯಾಕೇಜ್: 2.40 ಲಕ್ಷ ಕಟ್ಟಡ ಕಾರ್ಮಿಕರಿಗೆ, 86 ಸಾವಿರ ಅಸಂಘಟಿತ ಕಾರ್ಮಿಕರಿಗೆ ಇನ್ನೂ ಹಣ ಸಿಕ್ಕಿಲ್ಲ !
27/06/2021, 13:23
ಬೆಂಗಳೂರು(reporterkarnataka news): ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ಬಿಡುಗಡೆ ಮಾಡಿದ ವಿಶೇಷ ಪ್ಯಾಕೇಜ್ ನಲ್ಲಿ ರಾಜ್ಯದಲ್ಲಿರುವ ಸುಮಾರು 2,40,000 ಕಟ್ಟಡ ಕಾರ್ಮಿಕರು ಹಾಗೂ 86,000 ಅಸಂಘಟಿತ ಕಾರ್ಮಿಕರಿಗೆ ಇನ್ನೂ ಹಣ ವರ್ಗಾವಣೆಯಾಗಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.
ಲಾಕ್ಡೌನ್ ಪರಿಣಾಮವಾಗಿ ಸಂಕಷ್ಟಕ್ಕೆ ಒಳಗಾಗಿರುವ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ರಾಜ್ಯ ಸರಕಾರ ನೆರವು ಘೋಷಣೆ ಮಾಡಿತ್ತು. ಅದರಂತೆ, ರಾಜ್ಯದಲ್ಲಿ ಇರುವರೆಗೆ 17,80,000 ಕಟ್ಟಡ ಕಾರ್ಮಿಕರು ಮಂಡಳಿಯಲ್ಲಿ ನೋಂದಾಯಿತರಾಗಿದ್ದು, ಇದುವರೆಗೇ ಸುಮಾರು 15,40,000 ಕಾರ್ಮಿಕರಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ 3,000 ರೂ. ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಹಣ ವರ್ಗಾವಣೆಯಾಗದೆ ಬಾಕಿ ಉಳಿದಿರುವ ಕಾರ್ಮಿಕರಲ್ಲಿ ಕೆಲವರ ಬ್ಯಾಂಕ್ ಖಾತೆಗಳನ್ನು ನಿಷ್ಕ್ರಿಯವಾಗಿರುತ್ತದೆ ಅಥವಾ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರುವುದಿಲ್ಲ. ಕೂಡಲೇ ಸರಿಪಡಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.
ಅದೇ ರೀತಿಯಲ್ಲಿ 11 ವಿವಿಧ ಅಸಂಘಟಿತ ಕಾರ್ಮಿಕರಿಗೆ ಘೋಷಿಸಲಾದ ರೂ.2,000/- ನಗದು ವರ್ಗಾವಣೆಯಲ್ಲಿ ನೋಂದಾಯಿತರಾದ 3,30,000 ಕಾರ್ಮಿಕರಲ್ಲಿ 2,44,000 ಕಾರ್ಮಿಕರಿಗೆ ಸಹಾಯಧನ ವರ್ಗಾವಣೆಯಾಗಿರುತ್ತದೆ ಎಂದು ಸಚಿವ ಹೆಬ್ಬಾರ್ ತಿಳಿಸಿದ್ದಾರೆ.