ಇತ್ತೀಚಿನ ಸುದ್ದಿ
ಬಂಟ್ವಾಳದ ಅಮ್ಮೆಮಾರು ಸಮೀಪದ ಗುಡ್ಡ ಕುಸಿತ: ಮನೆಗೆ ತೀವ್ರ ಹಾನಿ, ಬಿರುಕು ಬಿಟ್ಟ ಗೋಡೆ; ಆತಂಕ ಹೆಚ್ಚಿಸಿದ ಮಳೆ
04/07/2022, 10:10
ಸಾಂದರ್ಭಿಕ ಚಿತ್ರ
ಬಂಟ್ವಾಳ(reporterkarnataka.com): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯಿತ್ ವ್ಯಾಪ್ತಿಯ ಅಮ್ಮೆಮಾರಿನಲ್ಲಿ ಭೂ ಕುಸಿತ ಉಂಟಾಗಿ ಮನೆಯೊಂದು ಅಪಾಯಕ್ಕೆ ಸಿಲುಕಿದೆ.
ಅಮ್ಮೆಮಾರು ಸಮೀಪದ ಪದೆಂಜಾರ್ ಎಂಬಲ್ಲಿ ಪರಿಶಿಷ್ಠ ಜಾತಿಗೆ ಸೇರಿದ ನಾರಾಯಣ ಮುಕಾರಿ ಎಂಬವರ ಮನೆ ಅಪಾಯಕ್ಕೆ ಸಿಲುಕಿದೆ. ಮನೆಯ ಹಿಂಭಾಗದ ಒಂದು ಪಾರ್ಶ್ವದ ಮಣ್ಣು ಸಂಪೂರ್ಣ ಕುಸಿದು ಮನೆ ಅಪಾಯಕ್ಕೆ ಸಿಲುಕಿದೆ. ಭೂ ಕುಸಿತಕ್ಕೆ ಹಿಂಭಾಗದ ಕಲ್ಲುಗಳು ಕೆಲಭಾಗದಲ್ಲಿ ಹರಿಯುತ್ತಿರುವ ತೊರೆ ಪಾಲಾಗಿದೆ. ಗೋಡೆಗಳು ಬಿರುಕು ಬಿಟ್ಟಿದ್ದು ಇದೇ ರೀತಿ ಮಳೆ ಸುರಿದರೆ ಇಡೀ ಮನೆಯೇ ಧರಶಾಹಿಯಾಗುವ ಆತಂಕ ಎದುರಾಗಿದೆ.
ಮುಕಾರಿ ಅವರದ್ದು ಅವಿಭಕ್ತ ಕುಟುಂಬವಾಗಿದ್ದು, ಮಕ್ಕಳು ಹಿರಿಯರು ಸೇರಿ 15 ಮಂದಿ ಮನೆಯಲ್ಲಿ ವಾಸವಾಗಿದ್ದಾರೆ.
ನಿರಂತರ ಮಳೆಯಿಂದಾಗಿ ಇನ್ನಷ್ಟು ಅಪಾಯಕ್ಕೀಡಾಗುವ ಆತಂಕ ಎದುರಾಗಿದೆ. ಮನೆಯಲ್ಲಿ ವಾಸಿಸುವುದೇ ಅಪಾಯಕಾರಿ ಎನ್ನುವ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಪರ್ಯಾಯ ವ್ಯವಸ್ಥೆಗೆ ಮನೆಮಂದಿ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.