ಇತ್ತೀಚಿನ ಸುದ್ದಿ
ದಲಿತ ಮೀಸಲು ನಿಧಿ ದಲಿತರಿಗೆ ನೀಡದೆ ಪಾಲಿಕೆ ವಂಚನೆ: ಧರಣಿ ಸತ್ಯಾಗ್ರಹದಲ್ಲಿ ಪ್ರತಿಭಟನಾಕಾರರ ಆರೋಪ
09/05/2022, 22:58
ಮಂಗಳೂರು(reporterkarnataka.com): ಮಂಗಳೂರು ಮಹಾನಗರ ಪಾಲಿಕೆಯು ತನ್ನ ವ್ಯಾಪ್ತಿಯಲ್ಲಿರುವ ದಲಿತ ಸಮುದಾಯದ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಅಭಿವೃದ್ಧಿಯ ಬಗ್ಗೆ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುವಲ್ಲಿ ವಿಫಲವಾಗಿರುವ ಕಾರಣದಿಂದ ದಲಿತರ ಸಾಮಾಜಿಕ ಆರ್ಥಿಕ ಪ್ರಗತಿಯ ದರ ಇಳಿಮುಖವಾಗಿದೆ ಎಂದು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕ ಡಾ. ಕೃಷ್ಣಪ್ಪ ಕೊಂಚಾಡಿ ಅಭಿಪ್ರಾಯಪಟ್ಟರು.
ಅವರು ಸೋಮವಾರ ಮಂಗಳೂರು ಮಹಾನಗರ ಪಾಲಿಕೆಯ ಎದುರು ದಲಿತ ಹಕ್ಕುಗಳ ಸಮಿತಿಯ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಮಾತನಾಡಿದರು.
2013ರ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಸಮುದಾಯದ ಕಾನೂನನ್ವಯ ದಲಿತ ಈ ಮೀಸಲು ನಿಧಿಯನ್ನು ಸರಿಯಾಗಿ ಉಪಯೋಗಿಸದಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸಮಾಜ ಕಲ್ಯಾಣ ಸಚಿವರು ಕಳೆದ ಆಗಸ್ಟ್ ತಿಂಗಳಲ್ಲಿ ಮನೆ ನಿರ್ಮಾಣಕ್ಕೆ 5 ಲಕ್ಷ ಹೆಚ್ಚಿಸಿರುವುದಾಗಿ ಹೇಳಿಕೊಂಡಿದ್ದರೂ ಅದು ಜಾರಿಯಾಗಿಲ್ಲ.5 ಲಕ್ಷ ರೂಪಾಯಿಯ ಬದಲು ಹತ್ತು ಲಕ್ಷ ನೀಡಬೇಕು ಮತ್ತು ಇತ್ತೀಚೆಗೆ ಜಾರಿಗೊಳಿಸಿರುವ ಕಠಿಣ ನಿಯಮಗಳಿಂದ ಬಡ ದಲಿತರ ವ್ಯವಸ್ಥಿತವಾದ ಸ್ವಂತ ಮನೆ ಹೊಂದುವ ಕನಸಿಗೆ ಎಳ್ಳುನೀರು ಬಿಟ್ಟಂತಾಗಿದೆ ಎಂದು ಹೇಳಿದರು.
ದ ಕ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಕೆ ಯಾದವ ಶೆಟ್ಟಿ ಮಾತನಾಡಿ, ದಲಿತ ಮೀಸಲು ನಿಧಿ ಕಾನೂನುಬದ್ದ ಹಕ್ಕಾಗಿದ್ದು, ಅದನ್ನು ದಲಿತರಿಗೆ ನೀಡದೆ ವಂಚಿಸಿರುವ ಮಂಗಳೂರು ಮಹಾನಗರ ಪಾಲಿಕೆ ದಲಿತ ವಿರೋಧಿಯಾಗಿದೆ ಎಂದು ಹೇಳಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, ದಲಿತ ಹಕ್ಕುಗಳ ಸಮಿತಿಯ 14 ಬೇಡಿಕೆಗಳು ದಲಿತರ ಬದುಕುವ ಮೂಲಭೂತ ಅವಶ್ಯಕತೆಗಳ ಪ್ರತಿರೂಪ. ಆದುದ್ದರಿಂದ ಇವುಗಳನ್ನು ಈಡೇರಿಸಿಕೊಳ್ಳಲು ತಕ್ಷಣವೇ ಮಹಾನಗರ ಪಾಲಿಕೆ ಸಭೆ ಕರೆಯದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಮನಪಾ ಕಚೇರಿ ಮುತ್ತಿಗೆ ಅಧಿಕಾರಿಗಳ ಘೆರಾವ್ ನಂತಹ ತೀವ್ರ ರೀತಿಯ ಹೋರಾಟಗಳನ್ನು ನಡೆಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.
ಧರಣಿ ಸತ್ಯಾಗ್ರಹವನ್ನುದ್ದೇಶಿಸಿ ಡಿವೈಎಫ್ ಐ ರಾಜ್ಯ ನಾಯಕರಾದ ಮುನೀರ್ ಕಾಟಿಪಳ್ಳ, ಜಿಲ್ಲಾ ನಾಯಕರಾದ ಬಿ.ಕೆ.ಇಮ್ತಿಯಾಜ್, ಸಂತೋಷ್ ಬಜಾಲ್, ಮಹಿಳಾ ಮುಖಂಡರಾದ ಭಾರತಿ ಬೋಳಾರ, ವಕೀಲರ ಸಂಘದ ಜಿಲ್ಲಾಧ್ಯಕ್ಷರಾದ ಯಶವಂತ ಮರೋಳಿ, ಡಿಎಚ್ ಎಸ್ ಜಿಲ್ಲಾ ನಾಯಕರಾದ ತಿಮ್ಮಯ್ಯ ಕೊಂಚಾಡಿ, ವಿಚಾರವಾದಿ ವೇದಿಕೆಯ ರಾಷ್ಟ್ರೀಯ ನಾಯಕರಾದ ನರೇಂದ್ರ ನಾಯಕ್, ಸಮುದಾಯ ಸಂಘಟನೆಯ ವಾಸುದೇವ ಉಚ್ಚಿಲ್, ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಮುಖಂಡರಾದ ರವಿಚಂದ್ರ ಕೊಂಚಾಡಿ, ಪ್ರಗತಿಪರ ಚಿಂತಕರಾದ ಪ್ರೊ.ಹರಿಯಪ್ಪ ಪೇಜಾವರ ಮೊದಲಾದವರು ಮಾತನಾಡಿದರು.
ಸತ್ಯಾಗ್ರಹದ ನೇತ್ರತ್ವವನ್ನು ಡಿಎಚ್ ಎಸ್ ಮಂಗಳೂರು ನಗರ ಮುಖಂಡರಾದ ರಾಧಾಕೃಷ್ಣ,ಕೃಷ್ಣ ತಣ್ಣೀರುಬಾವಿ, ಶಿವಾನಂದ, ಹೇಮಾ, ಪ್ರವೀಣ್ ಕೊಂಚಾಡಿ, ಚಂದ್ರಶೇಖರ ಕಿನ್ಯಾ,ರಘುವೀರ್, ಸುಧಾಕರ ಮೊದಲಾದವರು ವಹಿಸಿದ್ದರು. ಡಿಎಚ್ ಎಸ್ ಮಾರ್ಗದರ್ಶಕರಾದ ಯೋಗೀಶ್ ಜಪ್ಪಿನಮೊಗರುರವರು ಕಾರ್ಯಕ್ರಮ ನಿರ್ವಹಿಸಿದರು.