ಇತ್ತೀಚಿನ ಸುದ್ದಿ
ಬೆಂಗಳೂರು: ಕೊರೊನಾದಿಂದ ಸಾವನ್ನಪ್ಪಿ 15 ತಿಂಗಳು ಕಳೆದರೂ ವಿಲೇವಾರಿಯಾಗದ ಶವಗಳು!!
29/11/2021, 19:17
ಬೆಂಗಳೂರು(reporterkarnataka.com): ಕೊರೊನಾ ಜಗತ್ತುನ್ನು ಕಾಡುತಿದ್ದರೆ ಮಾನವೀಯತೆ ಮರೆತ ಅದೆಷ್ಟೋ ಪ್ರಸಂಗಗಳು ಎದುರಾಗುತ್ತಿದೆ. ಇದೊಂದು ಮಾನವೀಯತೆ ಮರೆತ ಪ್ರಕರಣ ರಾಜ್ಯದ ನಿದ್ದೆಗೆಡಿಸಿದೆ. ಬೆಂಗಳೂರಿನ ರಾಜಾಜಿನಗರದ ಇಎಸ್ ಐ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಬಲಿಯಾಗಿದ್ದ ವಿಧವೆ ಸಹಿತ ಇಬ್ಬರ ಮೃತದೇಹಗಳು ಸಿಬ್ಬಂದಿಯ ಬೇಜವಾಬ್ದಾರಿಯಿಂದಾಗಿ 15 ತಿಂಗಳ ಕಾಲ ಅಂತ್ಯಸಂಸ್ಕಾರವನ್ನೂ ಕಾಣದೆ ಶವಾಗಾರದಲ್ಲಿ ಕೊಳೆಯುತ್ತಿದ್ದ ಪ್ರಕರಣ ಶನಿವಾರ ಬೆಳಕಿಗೆ ಬಂದಿದೆ.
ಎರಡು ಶವಗಳು ಕೊಳೆತ ಸ್ಥಿತಿಯಲ್ಲಿದ್ದರಿಂದ ಮುಖ ಚಹರೆ ಸಿಗದೆ ದೊಡ್ಡ ತಲೆನೋವಾಗಿತ್ತು. ಕೊನೆಗೆ ಒಂದೂವರೆ ವರ್ಷದಿಂದ ಮೃತರಾದವರ ಪಟ್ಟಿ ಮತ್ತು ಹಸ್ತಾಂತರ ಮಾಡಿದ ಶವಗಳ ವಿವರವನ್ನು ಸುದೀರ್ಘವಾಗಿ ಪರಿಶೀಲನೆ ನಡೆಸಿದಾಗ ಚಾಮರಾಜಪೇಟೆಯ ವಿಧವೆ ದುರ್ಗಾ ಮತ್ತು ಕೆ.ಪಿ. ಅಗ್ರಹಾರದ ಮುನಿರಾಜು ಎಂಬುದು ಗೊತ್ತಾಗಿದೆ. ಪೊಲೀಸರು, ದುರ್ಗಾ ಅವರ ಅಣ್ಣನ ಮೊಬೈಲ್ ನಂಬರ್ ಪಡೆದು ಕರೆ ಮಾಡಿ ವಿಷಯ ಮುಟ್ಟಿಸಿದರೂ ಪ್ರಯೋಜನವಾಗಿಲ್ಲ. ಮತ್ತೊಂದೆಡೆ ಮುನಿರಾಜು ಕಡೆಯವರ್ಯಾರೂ ಸಂಪರ್ಕಕಕ್ಕೆ ಸಿಕ್ಕಿಲ್ಲ. ಹೀಗಾಗಿ ರಾಜಾಜಿನಗರ ಪೊಲೀಸರು ಸೋಮವಾರ ಕೆ.ಪಿ. ಅಗ್ರಹಾರಕ್ಕೆ ಭೇಟಿ ಕೊಟ್ಟು ಮುನಿರಾಜು ಅವರ ಪಾಲಕರು ಮತ್ತು ಸಂಬಂಧಿಕರ ಬಗ್ಗೆ ಮಾಹಿತಿ ಕಲೆ ಹಾಕಲು ನಿರ್ಧರಿಸಿದ್ದಾರೆ.
ದಾಖಲೆ ಪರಿಶೀಲಿಸಿದಾಗ ಮೃತರ ಗುರುತು ಗೊತ್ತಾಗಿದೆ. ವಿಳಾಸ ಮತ್ತು ಸಂಬಂಧಿಕರ ಮೊಬೈಲ್ ನಂಬರ್ ಪಡೆದು ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.