ಇತ್ತೀಚಿನ ಸುದ್ದಿ
ಅಕಾಲಿಕ ಮಳೆ: ರೈತರ ಗಾಯದ ಮೇಲೆ ಮತ್ತೆ ಬರೆ; ಈರುಳ್ಳಿ, ಶೇಂಗಾ ಜತೆ ತೊಗರಿಗೂ ಕುತ್ತು
26/11/2021, 22:54
ಗೋಪಾನಹಳ್ಳಿ ಶಿವಣ್ಣ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com
ಈರುಳ್ಳಿ, ಶೇಂಗಾ ಸೇರಿದಂತೆ ವಿವಿಧ ಬೆಳೆಗಳು ಅಕಾಲಿಕ ಮಳೆಗೆ ತುತ್ತಾಗಿ ನಷ್ಟದ ಹಾದಿ ಹಿಡಿದ ಬೆನ್ನಲ್ಲೇ ಈಗ ತೊಗರಿ ಬೆಳೆ ಹೂವು ಕಾಯಿ ಕಟ್ಟದೆ ಇರುವುದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕೃಷಿ ಇಲಾಖೆ ವತಿಯಿಂದ ತೊಗರಿ ಬಿತ್ತನೆ ಬೀಜ ಖರೀದಿಸಿ 5 ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದು ತೊಗರಿ ಬೆಳೆ 5ರಿಂದ 6 ಅಡಿ ಎತ್ತರಕ್ಕೆ ಹುಲುಸಾಗಿ ಬೆಳೆದಿದೆ. ಆದರೆ 5 ತಿಂಗಳು ಕಳೆದರೂ ಗಿಡದಲ್ಲಿ ಹೂವು, ಕಾಯಿ ಕಟ್ಟದೆ ಇರುವುದು ರೈತರಲ್ಲಿ ಆತಂಕದ ಮನೆ ಮಾಡಿದೆ.
ತಾಲೂಕಿನ ರೆಡ್ಡಿಹಳ್ಳಿ ಗ್ರಾಮದ ರೈತ ಓಬಣ್ಣ ರಿ ಸಂ, ನಂ 123 / 1 ರಲ್ಲಿ ಕೃಷಿ ಇಲಾಖೆಯಿಂದ ಖರೀದಿಸಿದ ತೊಗರಿಯನ್ನು ಜು. 15 ರಂದು ಬಿತ್ತನೆ ಮಾಡಿದ್ದು ಬೆಳೆ ಹುಲುಸಾಗಿ ಎತ್ತರಕ್ಕೆ ಬೆಳೆದಿದೆ.
ಈಗಾಗಲೆ ಮೂರು ಬಾರಿ ಔಷಧಿ ಸಿಂಪರಣೆ ಮಾಡಲಾಗಿದ್ದು ಐದು ತಿಂಗಳು ಕಳೆದರೂ ಹೂವು ಕಾಯಿ ಕಟ್ಟದೆ ಇರುವುದು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ರೈತ ಓಬಣ್ಣ ರಿಪೋರ್ಟರ್ ಕರ್ನಾಟಕ ಜತೆ ಮಾತನಾಡಿ, ಗ್ರಾಮದಲ್ಲಿ ಹಲವು ರೈತರು ಬಿಜಾಪುರ ಮೂಲದ ರೈತರಿಂದ ಖರೀದಿ ಮಾಡಿದ ತೊಗರಿ ಬೆಳೆ ಹೆಚ್ಚು ಇಳುವರಿ ಬಂದು ಕಟಾವಿಗೆ ಬಂದಿದ್ದು ನಾವು ಕೃಷಿ ಇಲಾಖೆಯಿಂದ ಖರೀದಿಸಿದ ತೊರಗರಿ ಬಿತ್ತನೆ ಮಾಡಲು ಬೀಜ, ಗೊಬ್ಬರ, ಔಷಧಿ , ಬೇಸಾಯ ಸೇರಿದಂತೆ ಸಾಲ ಸೂಲ ಮಾಡಿ 50 ಸಾವಿರ ರೂ.ಗಳಿಗೆ ಅಧಿಕ ಖರ್ಚು ಮಾಡಿ ಹೆಚ್ಚು ಇಳುವರಿ ನೀರಿಕ್ಷೆಯಲ್ಲಿದ್ದೆವು. ಇದುವರೆಗೆ ಹೂವು ಕಾಯಿ ಕಟ್ಟದೆ ಇರುವುದರಿಂದ ಕೃಷಿ ಇಲಾಖೆ ಅಧಿಕಾರಿಗಳ ಬಳಿ ಸಾಕಷ್ಟು ಬಾರಿ ಗಮನ ಸೆಳೆದರೂ ಜಮೀನಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ಮಾಡಲು ಬಂದಿಲ್ಲ.
ಈಗಾಗಲೆ ಶೇಂಗಾ ಬಿತ್ತನೆ ಮಾಡಿ ಹಾಕಿದ ಬಂಡವಾಳ ಕೈ ಸೇರದೆ ನಷ್ಟವಾಗಿರುವ ಬೆನ್ನಲ್ಲೇ ಈಗ ಐದು ಎಕರೆಯಲ್ಲಿ ಬಿತ್ತನೆ ಮಾಡಿದ ತೊಗರಿ ನಷ್ಟದ ಹಾದಿಯಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರೈತ ತಿಪ್ಪೇಸ್ವಾಮಿ ಮಾತನಾಡಿ ಹತ್ತು ಎಕರೆ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಿದ್ದು ಇನ್ನು ತೊಗರಿ ಮಾಗುವ ಮುನ್ನವೇ ಗಿಡದಲ್ಲೇ ಅಧಿಕ ಮಳೆಯಿಂದಾಗಿ ತೊಗರಿ ಮೊಳಕೆ ಹೊಡೆದಿದ್ದು ತೊಗರಿಗೆ ಬೆಳೆ ವಿಮೆ ಕಟ್ಟಲಾಗಿದೆ ಈ ಬಗ್ಗೆ ಬೆಳೆ ವಿಮೆ ಕಂಪನಿಯವರಿಗೆ ದೂರ ವಾಣಿ ಕರೆ ಮಾಡಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ರೈತ ಅಜ್ಜಣ್ಣ ರಿಪೋರ್ಟರ್ ಕರ್ನಾಟಕ ಜತೆ ಮಾತನಾಡಿ, ಕೃಷಿ ಇಲಾಖೆಯಿಂದ ತೊಗರಿ ಖರೀದಿಸಿ ಶೇಂಗಾ ಬೆಳೆಯಲ್ಲಿ ಅಕ್ಕಡಿಯಾಗಿ ಬಿತ್ತನೆ ಮಾಡಿದ್ದೆ. ಐದು ತಿಂಗಳು ಕಳೆದರೂ ಹೂವು ಕಾಯಿ ಕಟ್ಟದ ಕಾರಣ ಒಂದು ಕುರಿ ಮರಿಗಾಗಿ ಕುರಿಗಾರರಿಗೆ ನೀಡಿದ್ದೇನೆ. ಇದರಿಂದ ತೊಗರಿ ಬೆಳೆಗೆ ಹಾಕಿದ ಬಂಡವಾಳ ಕೈಬಿಟ್ಟು ಹೋಗಿದೆ ಎಂದರು.