ಇತ್ತೀಚಿನ ಸುದ್ದಿ
ವೆನ್ಲಾಕ್ ಆಯುಷ್ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರ ದಿನಾಚರಣೆ: ವಿಶೇಷ ಸೇವೆ
01/10/2021, 15:39
ಮಂಗಳೂರು(reporterkarnataka.com): ಹಿರಿಯ ನಾಗರಿಕರ ದಿನಾಚರಣೆಯ ಪ್ರಯುಕ್ತ ನಗರದ ವೆನ್ಲಾಕ್ ಆವರಣದಲ್ಲಿ ನೂತನವಾಗಿ ಪ್ರಾರಂಭಗೊಂಡ ಆಯುಷ್ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರ ಆರೋಗ್ಯ ತಪಾಸಣೆ , ಆರೋಗ್ಯ ಪೂರ್ಣ ಜೀವನಕ್ಕೆ ಅಗತ್ಯವಾದ ಉಪಯುಕ್ತ ಸಲಹೆ ಹಾಗೂ ಆಯುಷ್ ಕಿಟ್ ಗಳ ವಿತರಣೆ ನೆರವೇರಿಸಲಾಯಿತು.
ಹಿರಿಯ ವೈದ್ಯರಾದ ಡಾ.ದೇವದಾಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವರು ವೆನ್ಲಾಕ್ ಆವರಣದಲ್ಲಿ ಆಯುಷ್ ನ ವಿವಿಧ ಚಿಕಿತ್ಸಾ ಸೌಲಭ್ಯಗಳ ಮೂಲಕ ಸಾರ್ವಜನಿಕ ಆರೋಗ್ಯ ಸೇವೆ ಮಾಡುತ್ತಿರುವ ಆಯುಷ್ ಇಲಾಖೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಮೊಹಮ್ಮದ್ ಇಕ್ಬಾಲ್ ಅವರು ಡಾ.ದೇವದಾಸ್ ಅವರನ್ನು ಸನ್ಮಾನಿಸಿದರು. ಆಯುಷ್ ಆರೋಗ್ಯ ರಕ್ಷಣೆಗಾಗಿ ಉಪಯುಕ್ತವಾಗುವ ಆಯುಷ್ ಕಿಟ್ ಗಳನ್ನು ಹಿರಿಯ ನಾಗರಿಕರಿಗೆ ವಿತರಣೆ ಮಾಡಿದರು. ಅವರು ಮಾತನಾಡಿ ಸಾರ್ವಜನಿಕರ ಬಹಳ ವರ್ಷಗಳ ಬೇಡಿಕೆಯಾಗಿರುವ ಆಯುಷ್ ವೈದ್ಯ ಪದ್ಧತಿಗಳ ಸ್ವಾಸ್ಥ್ಯ ಕೇಂದ್ರವಾಗಿ ಉದ್ಘಾಟನೆಗೊಂಡು ಸೇವೆ ಪ್ರಾರಂಭಗೊಂಡಿರುತ್ತದೆ. ಇಲ್ಲಿ ಆಯುಷ್ – ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ ,ಹೋಮಿಯೋಪತಿ ಪದ್ಧತಿಗಳ ಸ್ಪೆಶಾಲಿಟಿ ಸೇವೆಗಳನ್ನು ನೀಡಲಾಗುತ್ತಿದೆ. ಅಲ್ಲದೆ ವೆನ್ಲಾಕ್ ಆವರಣದಲ್ಲಿ ಇರುವುದರಿಂದ ಎಲ್ಲಾ ಸೇವೆಗಳನ್ನು ಒಂದೇ ಸ್ಥಳದಲ್ಲಿ ಪಡೆಯಬಹುದಾಗಿದೆ.
ಅಷ್ಟಾಂಗ ಚಿಕಿತ್ಸಾ ವಿಶೇಷತೆಗಳು ಇಲ್ಲಿ ಲಭ್ಯವಿದ್ದು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುತ್ತದೆ.
ಆಯುಷ್ ಖಾಸಗಿ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಈ ಆಸ್ಪತ್ರೆಯಲ್ಲಿ ತಮ್ಮ ಸ್ಪೆಶಾಲಿಟಿ ಸೇವೆಗಳನ್ನು ನೀಡಲಿವೆ. ಸಾರ್ವಜನಿಕರಿಗೆ ಇದರ ಪ್ರಯೋಜನ ತಲುಪುವಂತೆ ಮಾಡುವ ಈ ಪ್ರಯತ್ನಕ್ಕೆ ಸರ್ವರ ಸಹಕಾರ ಕೋರಿದರು.
ಡಾ.ಶೋಭಾರಾಣಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಡಾ.ಸಯ್ಯದ್ ಝಾಹಿದ್ ಹುಸೇನ್, ಹಿರಿಯ ಯುನಾನಿ ವೈದ್ಯರು ,ಡಾ.ಸಹನಾ ಪಾಂಡುರಂಗ, ತಜ್ಞ ಆಯುಷ್ ವೈದ್ಯರುಗಳಾದ ಡಾ.ಬಸವರಾಜ್, ಡಾ.ವಿವೇಕ್ ಹೆಚ್. ವಸಂತ್, ಶ್ರೂಷಾಧಿಕಾರಿಗಳಾದ ಸುನಂದ ಡಿ.ಆರ್ , ಕವಿತಾ ಮತ್ತಿತರರು ಉಪಸ್ಥಿತರಿದ್ದರು.
ಹಿರಿಯ ನಾಗರಿಕರು ಈ ಕಾರ್ಯಕ್ರಮದ ಪ್ರಯೋಜನ ಪಡೆದರು.