7:37 AM Thursday25 - April 2024
ಬ್ರೇಕಿಂಗ್ ನ್ಯೂಸ್
ಬಹಿರಂಗ ಪ್ರಚಾರದ ಕೊನೆಯ ದಿನ: ಅನುಭವ, ಕಾರ್ಯಸೂಚಿ ತೆರೆದಿಟ್ಟ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್… ಬಹಿರಂಗ ಪ್ರಚಾರದ ಕೊನೆಯ ದಿನ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಅವರಿಂದ ಪಂಪ್’ವೆಲ್’… ಪಂಪ್ ವೆಲ್ ನಿಂದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರೋಡ್ ಶೋ: ಉರಿ… ನಂಜನಗೂಡು: ಮಾಜಿ ಶಾಸಕ ಹರ್ಷವರ್ಧನ್ ಅವರಿಂದ ಬಿಜೆಪಿ ಅಭ್ಯರ್ಥಿ ಬಾಲರಾಜ್ ಪರ ಮತಯಾಚನೆ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಪ್ರಣಾಳಿಕೆ ಬಿಡುಗಡೆ ಹಿಂದೂ ಧರ್ಮ ಸಾಮರಸ್ಯದ ಬದುಕು ಹೇಳಿಕೊಟ್ಟಿದೆ: ಬೈಕಂಪಾಡಿ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ… ಮೋರ್ಗನ್ಸ್ ಗೇಟ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರೋಡ್ ಶೋ: ಮತ… ಪ್ರಿಯಾಂಕಾ ಗಾಂಧಿ ಇಂದು ರಾಜ್ಯಕ್ಕೆ: ಚಿತ್ರದುರ್ಗದಲ್ಲಿ ಬಹಿರಂಗ ಸಭೆ; ಹಗರಿಬೊಮ್ಮನಹಳ್ಳಿಯಲ್ಲಿ ಸೌಮ್ಯಾ ರೆಡ್ಡಿ… ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏ.26ರಂದು ವಿಜಯಪುರಕ್ಕೆ: ರಾಜು ಆಲಗೂರ ಪರ ಚುನಾವಣಾ… ಬರ ಪರಿಹಾರ ನೀಡದಿದ್ದರೆ ಪ್ರಧಾನಿ ಹಾಗೂ ಗೃಹ ಸಚಿವರಿಗೆ ರಾಜ್ಯಕ್ಕೆ ಬರಲು ಜನತೆ…

ಇತ್ತೀಚಿನ ಸುದ್ದಿ

ಅಪರೂಪದ ಕಾಯಿಲೆ ಮೈಸ್ತೇನಿಯಾ ಗ್ರಾವಿಸ್ ಗೆ ತುತ್ತಾಗಿದ್ದ ವ್ಯಕ್ತಿಗೆ ಯಶಸ್ವೀ ಚಿಕಿತ್ಸೆ: ಮಂಗಳೂರಿನ ಕೆಎಂಸಿ ಆಸ್ಪತ್ರೆ ಸಾಧನೆ

23/09/2021, 14:41

ಮಂಗಳೂರು(repoeterkarnataka.com): ತೀವ್ರ ಉಸಿರಾಟದ ತೊಂದರೆಯ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ 54 ವರ್ಷದ ವ್ಯಕ್ತಿಯೊಬ್ಬರಿಗೆ ಶಸ್ತ್ರಚಿಕಿತ್ಸೆ ಮೂಲಕ ಮರು ಜೀವ ನೀಡುವಲ್ಲಿ ಮಂಗಳೂರಿನ ಕೆಎಂಸಿ ಹಾಸ್ಪಿಟಲ್ ಯಶಸ್ವಿಯಾಗಿದೆ. 

ಹೊನ್ನಾವರದ ಆಸ್ಪತ್ರೆಯೊಂದರಲ್ಲಿ ಪರೀಕ್ಷೆ ನಡೆಸಿದಾಗ ರೋಗಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿತ್ತು. ಬಳಿಕ ವೈದ್ಯರು ಎಷ್ಟೇ ಪ್ರಯತ್ನಪಟ್ಟರೂ ರೋಗಿಯ ಆರೋಗ್ಯ ಸುಧಾರಿಸಲೇ ಇಲ್ಲ, ಬದಲಿಗೆ ಅವರ ಸ್ಥಿತಿ ಮತ್ತಷ್ಟು ಚಿಂತಾಜನಕವಾಗುತ್ತಲೇ ಸಾಗಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಎಂಸಿ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ವಿಭಾಗದ ಕನ್ಸಲ್ಟಂಟ್ ಡಾ. ಹರೂನ್  ಎಚ್., ಇಂಟೆನ್ಸಿವಿಸ್ಟ್ ಡಾ.ದತ್ತಾತ್ರಯ ಪ್ರಭು ಹಾಗೂ ತುರ್ತು ಚಿಕಿತ್ಸಾ ತಂಡ ಒಟ್ಟಾಗಿ ರೋಗಿಯ ಆರೋಗ್ಯ ಸುಧಾರಣೆಗೆ ಅಗತ್ಯವಿರುವ ಚಿಕಿತ್ಸೆ ನೀಡಿತು. 

ಈ ಕೇಸ್ ಕುರಿತು ಮಾಹಿತಿ ನೀಡಿದ ಡಾ. ಹರೂನ್ ಎಚ್. ಅವರು, “ಕೆಎಂಸಿ ಆಸ್ಪತ್ರೆಗೆ ದಾಖಲಾದಾಗ ರೋಗಿಯು ಅತಿ ವೇಗವಾಗಿ ಉಸಿರಾಡುತ್ತಿದ್ದರು. ಹೀಗಾಗಿ ಅವರಿಗೆ ಹೆಚ್ಚಿನ ಆಮ್ಲಜನಕದ ಅಗತ್ಯವಿತ್ತು. ಇದರೊಂದಿಗೆ ಅವರು ತೀವ್ರ ಸ್ವರೂಪದ ಕೋವಿಡ್ ನ್ಯುಮೋನಿಯಾದಿಂದ ಬಳಲುತ್ತಿದ್ದುದರಿಂದ ಅದಕ್ಕೆ ಸಂಬಂಧಿಸಿದಂತೆಯೂ ಚಿಕಿತ್ಸೆ ನೀಡಲಾಯಿತು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಸೈಟೋಕಿನ್ ಸ್ಟಾರ್ಮ್ ಸಮಸ್ಯೆಗೆ ತುತ್ತಾಗುವ ಸಾಧ್ಯತೆಯಿದ್ದು, ವೆಂಟಿಲೇಟರ್ ನೆರವಿನ ಅಗತ್ಯ ಕೂಡ ಇತ್ತು. ನಿರಂತರವಾದ ಚಿಕಿತ್ಸೆ ಮತ್ತು ವಿಶೇಷ ಕಾಳಜಿಯಯಿಂದಾಗಿ ರೋಗಿಯನ್ನು ವೆಂಟಿಲೇಟರ್ ಸಪೋರ್ಟ್‍ನಿಂದ ಹೊರಗೆ ಕರೆತರಲಾಯಿತು. ಆದರೆ, ಕೋವಿಡ್‍ನಿಂದಾಗಿ ಅವರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರು. ಅಲ್ಲದೆ, ಆಹಾರ, ನೀರು ನುಂಗಲು ಆಗದೆ ಬಹಳ ಕಷ್ಟ ಅನುಭವಿಸುತ್ತಿದ್ದರು,” ಎಂದು ವಿವರಿಸಿದರು.

ಮಂಗಳೂರಿನ ಕೆಎಂಸಿ ಹಾಸ್ಪಿಟಲ್‍ನ ಕನ್ಸಲ್ಟಂಟ್- ನರಶಾಸ್ತ್ರಜ್ಞ (ನ್ಯೂರೋಲಾಜಿಸ್ಟ್) ಡಾ. ರೋಹಿತ್ ಪೈ ಅವರು ಮಾತನಾಡಿ, “ನೀರನ್ನು ಕುಡಿಯಲು ಅಥವಾ ನುಂಗಲು ತೊಂದರೆಯಾಗುತ್ತಿದೆ ಎಂದು ರೋಗಿಯು ನಮ್ಮ ಬಳಿ ಹೇಳಿದಾಗ ನರಸ್ನಾಯುವಿನ (ನ್ಯೂರೋಮಸ್ಕ್ಯುಲರ್) ಸಮಸ್ಯೆ ಇರಬಹುದು ಎಂದು ನಾವು ಊಹಿಸಿದೆವು. ಅಲ್ಲದೆ ಅವರು ಕೋವಿಡ್ ಸಂಬಂಧಿ ಮೈಸ್ತೇನಿಯಾ ಗ್ರಾವಿಸ್‍ನಿಂದ ಕೂಡ ಬಳಲುತ್ತಿದ್ದರು. ಹೀಗಾಗಿ ಮೈಸ್ತೇನಿಯಾ ಗ್ರಾವಿಸ್ ಸಮಸ್ಯೆಗೆ ಚಿಕಿತ್ಸೆ ನೀಡಲು ಆರಂಭಿಸಿದಾಗ ರೋಗಿಯಲ್ಲಿ ಸಾಕಷ್ಟು ಚೇತರಿಕೆ ಲಕ್ಷಣಗಳು ಕಂಡುಬಂದವು. ಅವರಿಗೆ ನೀಡುತ್ತಿದ್ದ ಆಮ್ಲಜನಕದ ಪ್ರಮಾಣವನ್ನು ಕ್ರಮೇಣ ಕಡಿಮೆ ಮಾಡಲಾಯಿತು. ಅವರ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡು ಬಂತು ಮತ್ತು ತಮ್ಮ ಸ್ಪೋ2 (ಆಕ್ಸಿಜನ್ ಸ್ಯಾಚುರೇಷನ್) ಅನ್ನು ಕನಿಷ್ಠ ಆಮ್ಲಜನಕದೊಂದಿಗೆ ನಿರ್ವಹಿಸಲು ಆರಂಭಿಸಿದರು,’ ಎಂದು ಮಾಹಿತಿ ನೀಡಿದರು.

“ಕೋವಿಡ್ ಗುಣವಾದ ನಂತರ ಕಾಣಿಸಿಕೊಳ್ಳುವ ಇನ್‍ಫೆಕ್ಷನ್ (ಸೋಂಕು) ನಿಂದ ಉಂಟಾಗುವ ನರಮಂಡಲ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದ ಈ ರೀತಿಯ ಇನ್ನೂ 2 ಕೇಸ್‍ಗಳು ಐಸಿಯುನಲ್ಲಿ ಇದ್ದವು. ವೆಂಟಿಲೇಟರ್‍ನಲ್ಲಿ ಇರುವ ರೋಗಿಗಳಲ್ಲಿ ಇಂತಹ ಸಮಸ್ಯೆಗಳ ಇರುವಿಕೆಯನ್ನು ಕಂಡುಹಿಡಿಯುವುದು ಕಷ್ಟದ ಕೆಲಸ. ಆದರೆ, ಇಲ್ಲಿ ಗಮನಿಸಬೇಕಾಗಿರುವ ಪ್ರಮುಖ ಅಂಶವೇನೆಂದರೆ ನರಮಂಡಲಕ್ಕೆ ಸಂಬಂಧಿಸಿದ ಸಮಸ್ಯೆ ಇರುವುದು ದೃಢಪಟ್ಟ ಬಳಿಕ ರೋಗಿಗೆ ಅಗತ್ಯವಿದ್ದ ಎಲ್ಲ ರೀತಿಯ ಚಿಕಿತ್ಸೆ ನೀಡಲಾಯಿತು,” ಎಂದು ಮಂಗಳೂರಿನ ಕೆಎಂಸಿ ಹಾಸ್ಪಿಟಲ್‍ನ ತುರ್ತು ಚಿಕಿತ್ಸೆ (ಕ್ರಿಟಿಕಲ್ ಕೇರ್) ವಿಭಾಗದ ಮುಖ್ಯಸ್ಥರಾಗಿರುವ ಡಾ.ದತ್ತಾತ್ರಯ ಪ್ರಭು ಅವರು ಮಾಹಿತಿ ನೀಡಿದರು.

ಈ ಕುರಿತು ಮಾತನಾಡಿದ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಸೇವೆಗಳ ಪ್ರಾದೇಶಿಕ ಮುಖ್ಯಸ್ಥರು ಹಾಗೂ ವೈದ್ಯಕೀಯ ಅಧೀಕ್ಷಕರಾಗಿರುವ ಡಾ.ಆನಂದ್ ವೇಣುಗೋಪಾಲ್ ಅವರು, “ರೋಗಿಯು ಕೋವಿಡ್‍ಗೆ ಸಂಬಂಧಿಸಿದ ಅತ್ಯಂತ ಅಪರೂಪದ ಮತ್ತು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದುದರಿಂದ ಇದೊಂದು ಕಠಿಣ ಮತ್ತು ಸವಾಲಿನ ಕೇಸ್ ಆಗಿತ್ತು. ರೋಗಿಗೆ ಐಸಿಯು ಮತ್ತು ವೆಂಟಿಲೇಟರ್ ನೆರವಿನ ಅಗತ್ಯವಿತ್ತು. ರೋಗಿಯು ಎದುರಿಸುತ್ತಿದ್ದ ಸಮಸ್ಯೆಗಳನ್ನು ತ್ವರಿತ ಗತಿಯಲ್ಲಿ ಗುರುತಿಸಿ, ಕೂಡಲೇ ಸ್ಪಂದಿಸಿ, ಸೂಕ್ತ ಚಿಕಿತ್ಸೆ ನೀಡುವ ಮೂಲಕ ರೋಗಿಯನ್ನು ಅಪಾಯದಿಂದ ಪಾರುಮಾಡಿದ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಯ ಸಂಪೂರ್ಣ ತಂಡವನ್ನು ನಾನು ಅಭಿನಂದಿಸುತ್ತೇನೆ. ರೋಗಿಯು ಯಶಸ್ವಿಯಾಗಿ ಡಿಸ್‍ಚಾರ್ಜ್ ಆಗಿದ್ದು, ಮುಂದಿನ ಕೆಲವು ದಿನಗಳ ಕಾಲ ನಮ್ಮ ನಿರಂತರ ಮೇಲ್ವಿಚಾರಣೆಯಲ್ಲಿ ಇರಲಿದ್ದಾರೆ. ರೋಗಿಯನ್ನು ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದು ಅವರ ಪ್ರಾಣ ರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಮತ್ತು ಯಾವುದೇ ರೀತಿಯ ಅನಾರೋಗ್ಯ ಸಮಸ್ಯೆ ಎದುರಾದಾಗ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುವುದರ ಮಹತ್ವ ಎಷ್ಟು ಎಂಬುದನ್ನು ಈ ಪ್ರಕರಣವು ತೋರಿಸಿಕೊಟ್ಟಿದೆ.

ಇತ್ತೀಚಿನ ಸುದ್ದಿ

ಜಾಹೀರಾತು